Last Updated:
ಪೊಲೀಸರ ಪ್ರಕಾರ, ಆ ವ್ಯಕ್ತಿ ರಾತ್ರಿ 10.45 ರ ಸುಮಾರಿಗೆ ತನ್ನ ಹಳ್ಳಿಯಿಂದ ಪಟ್ಟಣಕ್ಕೆ 6 ಕಿ.ಮೀ ದೂರ ಕಾರಿನಲ್ಲಿ ಬಂದಿದ್ದಾನೆ. 16 ವರ್ಷದ ಬಾಲಕಿಯ ಮನೆಗೆ ಹೋಗಿದ್ದಾನೆ. ಸಂತ್ರಸ್ತೆಯ ತಾಯಿ ಬಾಗಿಲು ತೆರೆದಾಗ, ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಂದಿದ್ದಾನೆ.
ರಂಗಾರೆಡ್ಡಿ: ಪೋಕ್ಸೋ ಪ್ರಕರಣದಲ್ಲಿ (POCSO Case) ಜೈಲು ಸೇರಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದು ಮತ್ತೆ 6 ಜನರನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಪೋಕ್ಸೋ ಪ್ರಕರಣದ ಸಂತ್ರಸ್ತೆ, ಆಕೆಯ ತಾಯಿ ಮತ್ತು ಅಜ್ಜಿ ಸೇರಿದಂತೆ ಆರು ಜನರನ್ನು ಕೊಲೆ ಮಾಡಿದ್ದು, ನಂತರ ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಕೊಂದಿದ್ದಾನೆ. ಕಳೆದ ತಿಂಗಳು ಆ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದ್ದು, ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಹೈದರಾಬಾದ್ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಪಟ್ಟಣ ಮತ್ತು ವ್ಯಕ್ತಿಯ ಸ್ಥಳೀಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಗಡುಕನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ಪೊಲೀಸರ ಪ್ರಕಾರ, ಆ ವ್ಯಕ್ತಿ ರಾತ್ರಿ 10.45 ರ ಸುಮಾರಿಗೆ ತನ್ನ ಹಳ್ಳಿಯಿಂದ ಪಟ್ಟಣಕ್ಕೆ 6 ಕಿ.ಮೀ ದೂರ ಕಾರಿನಲ್ಲಿ ಬಂದಿದ್ದಾನೆ. 16 ವರ್ಷದ ಬಾಲಕಿಯ ಮನೆಗೆ ಹೋಗಿದ್ದಾನೆ. ಸಂತ್ರಸ್ತೆಯ ತಾಯಿ ಬಾಗಿಲು ತೆರೆದಾಗ, ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಂದಿದ್ದಾನೆ. ನಂತರ ಮನೆಯೊಳಗೆ ನುಗ್ಗಿ ಮಲಗಿದ್ದ ಬಾಲಕಿಯ 60 ವರ್ಷದ ಅಜ್ಜಿಯನ್ನು ಸಹ ಕೊಂದಿದ್ದಾನೆ ಎನ್ನಲಾಗಿದೆ. ಬಾಲಕಿಯ ಮನೆಯವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕಾರಣ ಈ ಹಿಂದೆ ಪೋಕ್ಸೊ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಯು ಹದಿಹರೆಯದ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿಗೆ ಹತ್ತಿಸಿಕೊಂಡು ತನ್ನ ಹಳ್ಳಿಯಲ್ಲಿರುವ ಕೆರೆ ಬಳಿ ಕರೆದೊಯ್ದಿದ್ದ. ಅಲ್ಲಿ ಅವನು ಆ ಹುಡುಗಿಯನ್ನು ಇರಿದು ಕೊಂದು, ಆಕೆಯ ದೇಹವನ್ನು ಕೆರಯ ಬಳಿ ಬಿಟ್ಟು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ಮಾನಸಿಕ ಅಸ್ವಸ್ಥ ಸಹೋದರಿಗೆ ಮಾತ್ರ ಆತ ಏನೂ ಮಾಡದೆ ಬಿಟ್ಟಿದ್ದ.
ನಂತರ ಆ ವ್ಯಕ್ತಿ ತನ್ನ ಮನೆಗೆ ಹೋಗಿದ್ದಾನೆ. ರಾತ್ರಿ 11.20 ರ ಸುಮಾರಿಗೆ, ಅವನು ತನ್ನ 31 ವರ್ಷದ ಹೆಂಡತಿ ಮತ್ತು ನಾಲ್ಕು ಮತ್ತು 18 ತಿಂಗಳ ವಯಸ್ಸಿನ ಇಬ್ಬರು ಗಂಡು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಕ್ಕಳು ನಿದ್ದೆ ಮಾಡಿದ್ದ ಸಮಯದಲ್ಲಿ ಅವರ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಪೋಕ್ಸೊ ಪ್ರಕರಣ ದಾಖಲಾದ ನಂತರ, ಆ ವ್ಯಕ್ತಿ ತಲೆಮರೆಸಿಕೊಂಡಿದ್ದ. ನಂತರ ಜೂನ್ನಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಅಪರಾಧಕ್ಕೆ ಗರಿಷ್ಠ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸಬಹುದಾಗಿರುವುದರಿಂದ ಅವನಿಗೆ ನಿರೀಕ್ಷಣಾ ಜಾಮೀನು ನೀಡಿದರು. ಪೊಲೀಸರು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು.














