Last Updated:
ನಾಡಿಯಾ ಜಿಲ್ಲೆಯ ಮಜ್ದಿಯಾದಲ್ಲಿ ವಿಶೇಷ ಚೇತನ ಕೌಶಿಕ್ ಮಿತ್ರಾ ಮತ್ತು ಸ್ನೇಹ ಪೊದ್ದಾರ್ ಫೇಸ್ಬುಕ್ ಪರಿಚಯದಿಂದ ಪ್ರೀತಿಸಿ, ಕುಟುಂಬಗಳ ಒಪ್ಪಿಗೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು
ಪಶ್ಚಿಮ ಬಂಗಾಳ: ದೈಹಿಕ ಅಂಗವೈಕಲ್ಯವು (Physically Challenged) ನಿಜವಾದ ಪ್ರೀತಿಗೆ ಎಂದಿಗೂ ಅಡ್ಡಿಯಾಗಲಾರದು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ನಾಡಿಯಾ ಜಿಲ್ಲೆಯ ಕೃಷ್ಣಗಂಜ್ ವ್ಯಾಪ್ತಿಯ ಮಜ್ದಿಯಾದ ಪೂರ್ಣಗಂಜ್ ಪ್ರದೇಶದಲ್ಲಿ ನಡೆದಿರುವ ಈ ಅಪರೂಪದ ಪ್ರೇಮಕಥೆ (Love story) ನೋಡಿದರೆ ಆ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ!
ಹೌದು, ಫೇಸ್ಬುಕ್ನಲ್ಲಿ ಶುರುವಾದ ಪರಿಚಯ, ನಂತರ ಸ್ನೇಹವಾಗಿ, ಪ್ರೀತಿಯಾಗಿ, ಇದೀಗ ಮದುವೆಯ ಹಂತಕ್ಕೆ ತಲುಪಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಬೆಸೆದ ಈ ಬಂಧ, ನಾಡಿಯಾದ ಇಬ್ಬರು ವಿಶೇಷ ಚೇತನರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದೆ. ಕೌಶಿಕ್ ಮಿತ್ರಾ ಹಾಗೂ ಸ್ನೇಹ ಪೊದ್ದಾರ್ ಎಂಬ ವಿಶೇಷ ಚೇತನ ಜೋಡಿಯೇ ಈ ಅದ್ಭುತ ಲವ್ ಸ್ಟೋರಿಯ ಹೀರೋ-ಹೀರೋಯಿನ್!
ಮಜ್ದಿಯಾದ ಪೂರ್ಣಗಂಜ್ ನಿವಾಸಿಯಾದ ವರ ಕೌಶಿಕ್ ಮಿತ್ರಾ ಅವರು ಹುಟ್ಟಿನಿಂದಲೇ ದೈಹಿಕ ವಿಕಲಚೇತನರಾಗಿದ್ದರೂ, ಜೀವನದ ಪ್ರತಿ ಹಂತದಲ್ಲೂ ತಮ್ಮ ಅಗಾಧ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮಜ್ದಿಯಾ ಕಾಲೇಜಿನಲ್ಲಿ ಪದವಿ ಮುಗಿಸಿರುವ ಇವರು, ಐಟಿಐನಲ್ಲಿ (ITI) ಫಿಟ್ಟರ್ ಟ್ರೇಡ್ನಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ. ಇಷ್ಟೇ ಅಲ್ಲ, ಇವರೊಬ್ಬ ಅತ್ಯುತ್ತಮ ಫುಟ್ಬಾಲ್ ಆಟಗಾರ ಕೂಡ ಹೌದು!
ಇನ್ನು, ಬಾಗುಲಾದ ನಿವಾಸಿಯಾಗಿರುವ ವಧು ಸ್ನೇಹ ಪೊದ್ದಾರ್ ಕೂಡ ವಿಶೇಷ ಚೇತನರಾಗಿದ್ದು, ಪ್ರಸ್ತುತ ತಮ್ಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಹಲವು ಫುಟ್ಬಾಲ್ ಪಂದ್ಯಗಳ ಮೂಲಕ ಪರಿಚಯವಾದ ಈ ಇಬ್ಬರ ನಡುವೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫೇಸ್ಬುಕ್ ಮೂಲಕ ಸಂಪರ್ಕ ಬೆಳೆದು, ಬಹುಕಾಲದ ಆಪ್ತ ಮಾತುಕತೆಗಳು ನಿಧಾನವಾಗಿ ಪ್ರೀತಿಯಾಗಿ ಅರಳಿದೆ.
ಮೊದಮೊದಲು ಮನೆಯವರಿಗೆ ಗೊತ್ತಾಗದಂತೆ ಗುಟ್ಟಾಗಿ ಮದುವೆಯಾಗಲು ಪ್ರಯತ್ನಿಸಿ ವಿಫಲರಾಗಿದ್ದ ಈ ಜೋಡಿ, ಕೊನೆಗೆ ತಮ್ಮ ಎರಡೂ ಕುಟುಂಬಗಳ ಮುಂದೆ ಪ್ರೀತಿಯ ವಿಚಾರ ಪ್ರಸ್ತಾಪಿಸಿದಾಗ, ಎರಡು ಕಡೆಯವರೂ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಅಂತಿಮವಾಗಿ, ಮಜ್ದಿಯಾದಲ್ಲಿರುವ ಕೌಶಿಕ್ ಅವರ ಮನೆಯಲ್ಲಿ ಸಂಬಂಧಿಕರು ಹಾಗೂ ನೆರೆಹೊರೆಯವರ ಸಮ್ಮುಖದಲ್ಲಿ, ಪುರೋಹಿತರನ್ನು ಕರೆಸಿ ಹಿಂದೂ ಸಂಪ್ರದಾಯದಂತೆ ಅತ್ಯಂತ ಸಂಭ್ರಮದಿಂದ ಇಬ್ಬರ ವಿವಾಹ ನೆರವೇರಿದೆ.
ಈ ಜೋಡಿಯ ಕೌಟುಂಬಿಕ ಹಿನ್ನೆಲೆ ನೋಡುವುದಾದರೆ, ಕೌಶಿಕ್ ಅವರ ತಂದೆ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ ಹಾಗೂ ಅಣ್ಣ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ತ ಸ್ನೇಹ ಅವರ ತಂದೆ ಸಣ್ಣ ವ್ಯಾಪಾರಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಎರಡೂ ಕುಟುಂಬಗಳು ನವಜೋಡಿಯ ಹೊಸ ಜೀವನಕ್ಕೆ ಶುಭ ಹಾರೈಸಿವೆ. ಆದರೆ, ಇಷ್ಟೆಲ್ಲಾ ಮದುವೆಯ ಸಂಭ್ರಮದ ನಡುವೆಯೂ ಈ ಕುಟುಂಬವನ್ನು ಒಂದು ದೊಡ್ಡ ಆತಂಕ ಕಾಡುತ್ತಿದೆ!
ಈ ಜೋಡಿ ಹೇಳೋದೇನು?
ಹೌದು, ಕೌಶಿಕ್ ಅವರು ಇಷ್ಟೆಲ್ಲಾ ಓದಿ, ಕೌಶಲ್ಯ ಹೊಂದಿದ್ದರೂ ಕೂಡ ಇಂದಿಗೂ ನಿರುದ್ಯೋಗಿಯಾಗಿದ್ದಾರೆ. ಹಲವೆಡೆ ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ ಅವರಿಗೆ ಇನ್ನೂ ಯಾವುದೇ ಕಾಯಂ ಉದ್ಯೋಗ ಸಿಕ್ಕಿಲ್ಲ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೌಶಿಕ್ ತಂದೆ, “ನಾವು ಇರುವವರೆಗೂ ಹೇಗೋ ಮಕ್ಕಳನ್ನು ನೋಡಿಕೊಳ್ಳುತ್ತೇವೆ, ಆದರೆ ನಮ್ಮ ನಂತರ ಅವರ ಭವಿಷ್ಯ ಏನು ಎಂಬುದೇ ನಮಗೆ ಕಾಡುತ್ತಿರುವ ಅತಿದೊಡ್ಡ ನೋವಾಗಿದೆ” ಎಂದು ಭಾವುಕರಾಗಿದ್ದಾರೆ. ಏನೇ ಆಗಲಿ, ಸ್ಥಳೀಯ ನಿವಾಸಿಗಳೆಲ್ಲರೂ ಸೇರಿ ನವಜೋಡಿಗೆ ಸುಖಮಯ ಹಾಗೂ ಸ್ವಾವಲಂಬಿ ಬದುಕಿಗಾಗಿ ಆಶೀರ್ವದಿಸಿದ್ದು, ಪ್ರೀತಿಯ ಈ ಅದ್ಭುತ ಗೆಲುವು ಇಂದು ಅನೇಕರಿಗೆ ಸ್ಫೂರ್ತಿಯ ಕಥೆಯಾಗಿ ಮಾರ್ಪಟ್ಟಿದೆ.













