Agriculture
oi-Lavakumar B M

ಮೈಸೂರು, ಜುಲೈ, 15: ಜಿಲ್ಲೆಯ ಬಂಡಿಪುರ ಹುಲಿ ಯೋಜನೆ ವ್ಯಾಪ್ತಿಯ ಮೊಳೆಯೂರು ಅರಣ್ಯ ವಲಯದ ಕಾಡಹಂಚಿನ ಕೆಬ್ಬೆಪುರ ಹಾಡಿ, ಮೊಳೆಯೂರು ಗ್ರಾಮ ಹಾಗೂ ಅಕ್ಕ ಪಕ್ಕ ಗ್ರಾಮಗಳಲ್ಲಿ ಹುಲಿ ಅಡ್ಡಾಡುತ್ತಿರುವ ಬಗ್ಗೆ ಸುದ್ದಿಗಳು ಸದ್ದು ಮಾಡುತ್ತಿವೆ. ಅಲ್ಲದೆ ಹುಲಿ ಹೆಜ್ಜೆಯನ್ನು ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಸರಗೂರು ತಾಲೂಕಿನ ಸರ್ವೆ ನಂಬರ್ 35ರ ಕೆಬ್ಬೆಪುರ ಎಲ್ಲೆಯ ಕಮಲಮ್ಮ ಎಂಬುವರಿಗೆ ಸೇರಿದ ಸುಮಾರು ನಾಲ್ಕು ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಕಾಡಾನೆ, ಹಂದಿಗಳು ನಾಶಪಡಿಸಿವೆ. ಇನ್ನು ವನ್ಯ ಪ್ರಾಣಿಗಳಿಂದ ಜೋಳದ ಬೆಳೆಯನ್ನು ಕಾಪಾಡುವ ಸಲುವಾಗಿ ರೈತರು ರಾತ್ರಿ, ಹಗಲು ಎನ್ನದೆ ಕಾವಲು ಕಾಯುತ್ತಿದ್ದು, ಇದೀಗ ಕಾಡಾನೆ ಮತ್ತು ಕಾಡುಹಂದಿಗಳ ನಡುವೆ ಹುಲಿಯ ಸಂಚಾರವೂ ಕಂಡುಬಂದಿದೆ. ಇದರಿಂದ ಇಲ್ಲಿನ ರೈತರ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಈ ನಡುವೆ ನೆಮ್ಮನಳ್ಳಿ ಕಾಂತ ಎಂಬುವವರು ಹೊಲದಲ್ಲಿ ಕಾವಲು ಕಾಯಲು ಜಮೀನಿನ ಅಟ್ಟಣಿಗೆಯಲ್ಲಿದ್ದ ವೇಳೆ ರಾತ್ರಿ ಊಟ ಮಾಡಲು ಕೈ ತೊಳೆಯುತ್ತಿದ್ದಾಗ ಶಬ್ದ ಬಂದಿದ್ದು, ಈ ವೇಳೆ ಇದೇನು ಶಬ್ದವೆಂದು ನೋಡಿದಾಗ ಅವರಿಗೆ ಭಾರಿ ಗಾತ್ರದ ಹುಲಿ ರಾಜಾರೋಷವಾಗಿ ತೆರಳುತ್ತಿದ್ದ ದೃಶ್ಯ ಕಂಡುಬಂದಿದೆ. ಹುಲಿ ಚೆಂಡು ಮಲ್ಲಿಗೆ ಹೂವಿನ ತೋಟ, ಮೆಣಸಿನಕಾಯಿ ತೋಟದ ಒಳಗಡೆ ನುಗ್ಗಿ ಎತ್ತರವಾಗಿ ಬೆಳೆದಿರುವ ಮುಸುಕಿನ ಜೋಳದ ಒಳಗೆ ಹೋಗಿದೆ. ಜಮೀನಿನಲ್ಲಿ ಹುಲಿ ಅಡ್ಡಾಡುತ್ತಿರುವ ವಿಚಾರ ಇದೀಗ ಸುತ್ತಮುತ್ತಲಿನ ಗ್ರಮಾಗಳ ರೈತರನ್ನು ಆತಂಕಕ್ಕೆ ತಳ್ಳಿದೆ.
ಕೋಲಾರದಷ್ಟೇ ದಾವಣಗೆರೆ ಟೊಮೆಟೊಗೂ ಬಂತು ಭಾರೀ ಬೇಡಿಕೆ, ಜಮೀನುಗಳಿಗೆ ಸೆಕ್ಯೂರಿಟಿ ಹೇಗಿದೆ ಗೊತ್ತಾ?
ಹುಲಿ ಅಡ್ಡಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ರೈತರು ಜಮೀನಿಗೆ ತೆರಳಲು ಭಯಪಡುತ್ತಿದ್ದು, ಈ ವಿಚಾರವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಜಮೀನಿನಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾಗಲೇ ಕಾಡಾನೆಯೊಂದು ಹಾದು ಹೋಗಿದೆ. ಇನ್ನು ಜಮೀನಿನಲ್ಲಿ ಹುಲಿ ಹೋಗಿರುವುದಕ್ಕೆ ಕುರುಹು ಆಗಿ ಅಲ್ಲಲ್ಲಿ ಹೆಜ್ಜೆಯ ಗುರುತು ಕಂಡುಬಂದಿದೆ. ಇದೆಲ್ಲವನ್ನು ಗಮನಿಸಿದ ಅರಣ್ಯಾಧಿಕಾರಿಗಳು ಬೋನಿಟ್ಟು ಹುಲಿಯನ್ನು ಸೆರೆಹಿಡಿಯುವ ಭರವಸೆ ನೀಡಿದ್ದಾರೆ.
ಇದುವರೆಗೆ ಕಾಡಾನೆ, ಕಾಡುಹಂದಿಗಳ ಹಾವಳಿಯಿಂದ ತತ್ತರಿಸಿದ ರೈತರಿಗೆ ಈಗ ಹುಲಿ ಇನ್ನಷ್ಟು ಭಯವನ್ನುಂಟು ಮಾಡಿದೆ. ಹುಲಿ ಹೆಜ್ಜೆ ನೋಡಿದ ಮೇಲೆ ಕಾರ್ಮಿಕರು ಜಮೀನು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಜಮೀನಿನಲ್ಲಿ ರೈತರು ಚೆಂಡು ಹೂವು, ಜೋಳ ಬೆಳೆದಿದ್ದಾರೆ. ಈ ಚೆಂಡು ಹೂವು ಕೊಯ್ಲುಗೆ ಬಂದಿದ್ದು, ಅದನ್ನು ಬಿಡಿಸಲು ಕಾರ್ಮಿಕರು ಜಮೀನಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಜಮೀನಿಗೆ ತೆರಳಲು ಕಾರ್ಮಿಕರ ಹಿಂದೇಟು
ಹುಲಿಯ ಕುರಿತಂತೆ ಮಾತನಾಡಿರುವ ರೈತರು ಕಳೆದ ಕೆಲವು ದಿನಗಳಿಂದ ಹುಲಿ ಈ ಭಾಗದಲ್ಲಿ ಓಡಾಡುತ್ತಿದೆ. ಇದರಿಂದ ರೈತರು, ಕಾರ್ಮಿಕರು ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದಾರೆ. ಹಾಗೆಯೇ ರೈತರು ಬೆಳೆದ ಫಸಲನ್ನು ಕಾಡಾನೆಗಳು ನಾಶ ಮಾಡಿದರೆ ಅದಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕೋಲಾರದಷ್ಟೇ ದಾವಣಗೆರೆ ಟೊಮೆಟೊಗೂ ಬಂತು ಭಾರೀ ಬೇಡಿಕೆ, ಜಮೀನುಗಳಿಗೆ ಸೆಕ್ಯೂರಿಟಿ ಹೇಗಿದೆ ಗೊತ್ತಾ?
ಈ ನಡುವೆ ಮೊಳೆಯೂರಿನ ರೈತರಾದ ಗಣೇಶ, ಸಿದ್ದರಾಜು, ಸುರೇಶ, ರಾಮಚಂದ್ರ ಅವರು ಮಾತನಾಡಿ, ಅರಣ್ಯದಿಂದ ಬರುವ ಕಾಡಾನೆ, ಹುಲಿ ಸೇರಿದಂತೆ ವನ್ಯಪ್ರಾಣಿಗಳ ತಡೆಗೆ ಅರಣ್ಯ ಇಲಾಖೆ ಗಮನಹರಿಸಬೇಕು. ಜೊತೆಗೆ ವನ್ಯ ಪ್ರಾಣಿಗಳನ್ನು ಮರಳಿ ಕಾಡಿಗೆ ಅಟ್ಟಲು ಅನುಕೂಲವಾಗುವಂತೆ ಅರಣ್ಯ ಸಿಬ್ಬಂದಿಗೆ ಬಂದೂಕು, ಪಟಾಕಿ ಇನ್ನಿತರ ಸಲಕರಣೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಸಮರ್ಪಕ ನಿರ್ವಹಣೆಯಿಂದ ಸಮಸ್ಯೆ
ಈಗಾಗಲೇ ಅರಣ್ಯದಿಂದ ಕಾಡಾನೆ ನಾಡಿಗೆ ಬಾರದಂತೆ ಕೆಲವೆಡೆ ರೈಲ್ವೆ ಕಂಬಿಗಳನ್ನು ಅಳವಡಿಸಿದ್ದರೆ, ಮತ್ತೊಂದೆಡೆ ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕಾಡಾನೆಗಳು ಜಮೀನಿಗೆ ನುಗ್ಗುತ್ತಿವೆ. ಹೀಗಾಗಿ ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ನಡೆಸಲು ಅನುವು ಮಾಡಿಕೊಡಬೇಕಾಗಿದೆ.
English summary
Mysuru district’s Saraguru taluk Farmers worried due to tiger attack.
Story first published: Saturday, July 15, 2023, 13:25 [IST]