Last Updated:
ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು.
ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ ತೆಗೆದುಹಾಕಿ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡದ ಹೊಸ ನಾಯಕರನ್ನಾಗಿ ನೇಮಿಸುವ ನಿರ್ಧಾರಕ್ಕೆ ಬಿಸಿಸಿಐ ತಲುಪಿದೆ ಎಂದು ESPNcricinfo ಹಾಗೂ ಇಂಡಿಯಾ ಟುಡೆ ವರದಿ ಮಾಡಿವೆ. ಗುರುವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಶಾಕಿಂಗ್ ವಿಚಾರವೆಂದರೆ, ಮಾರ್ಚ್ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ್ದ, ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬೀಳಲಿದ್ದಾರೆ ಎಂದು ವರದಿ ತಿಳಿಸಿವೆ. ಸೂರ್ಯಕುಮಾರ್ ವಿಶ್ವಕಪ್ನಲ್ಲಿ 9 ಇನ್ನಿಂಗ್ಸ್ನಲ್ಲಿ 242 ರನ್ (ಸ್ಟ್ರೈಕ್ ರೇಟ್ 136.72) ಮತ್ತು ಐಪಿಎಲ್ 2026ರಲ್ಲಿ 13 ಇನ್ನಿಂಗ್ಸ್ನಲ್ಲಿ ಕೇವಲ 270 ರನ್ (ಸರಾಸರಿ 20.76) ಗಳಿಸಿದ್ದಾರೆ. ಇದೇ ಕಾರಣದಿಂದ 35 ವರ್ಷದ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಹೊರಗಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು, ಕೊನೆಯ ಟಿ20I ಪಂದ್ಯವನ್ನು 2023 ಡಿಸೆಂಬರ್ನಲ್ಲಿ ಆಡಿದ್ದರು. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ಗೆ ಸ್ಥಾನ ಸಿಗುತ್ತಿರಲಿಲ್ಲ. ಆದರೆ ಅಯ್ಯರ್ ಸತತ 3 ಐಪಿಎಲ್ನಲ್ಲಿ ಉತ್ತಮ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ. 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಮಾಡಿದ್ದರು. 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ದರು. 2026ರಲ್ಲೂ ಮೊದಲಾರ್ಧದಲ್ಲಿ ಪಂಜಾಬ್ ಅಯ್ಯರ್ ನಾಯಕತ್ವದಲ್ಲಿ ಪ್ರಾಬಲ್ಯ ಸಾಧಿಸಿತ್ತು. ದುರದೃಷ್ಟವಶಾತ್ ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್ನಿಂದ ಪ್ಲೇಆಫ್ ಸ್ಥಾನ ಕಳೆದುಕೊಂಡಿತ್ತು.
ಐಪಿಎಲ್ 2025ರಲ್ಲಿ 604 ರನ್ (ಸ್ಟ್ರೈಕ್ ರೇಟ್ 175) ಮತ್ತು 2026ರಲ್ಲಿ 498 ರನ್ (ಸ್ಟ್ರೈಕ್ ರೇಟ್ 168) ಗಳಿಸಿದ್ದಾರೆ. ಶ್ರೇಯಸ್ ಅವರ ನಾಯಕತ್ವದ ಅನುಭವ ಮತ್ತು ಫಾರ್ಮ್ ಅವರನ್ನು ಭಾರತ ತಂಡವನ್ನ ಮುನ್ನಡೆಸಲು ಪ್ರಮುಖ ಆಯ್ಕೆ ಎಂದು ಆಯ್ಕೆ ಸಮಿತಿ ನಿರ್ಧರಿಸಿದೆ.
ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು.
ಐಪಿಎಲ್ ಸೆನ್ಷೇಷನ್ ಆಗಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಬಾರಿಗೆ ಭಾರತ ತಂಡದ ಕರೆ ಬರಲಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ. ಐಪಿಎಲ್ 2026ರಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಈ ಯುವಕ ಸಚಿನ್ ತೆಂಡೂಲ್ಕರ್ ನಂತರ ಅತ್ಯಂತ ಕಿರಿಯ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಅವರು ಶ್ರೀಲಂಕಾದಲ್ಲಿ ಭಾರತ A ತಂಡಕ್ಕಾಗಿ ಆಡಲಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಶನಿವಾರ ಘೋಷಿಸಲಾಗುತ್ತದೆ. ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳು, ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳು ನಡೆಯಲಿವೆ.
ಈ ಬದಲಾವಣೆ ಭಾರತ ತಂಡವು 2028 ಲಾಸ್ ಏಂಜಲೀಸ್ ಒಲಂಪಿಕ್ಸ್ ಮತ್ತು ಅದೇ ವರ್ಷ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ತಯಾರಿಕೆ ಮುನ್ಸೂಚನೆಯಾಗಿದೆ. ಆಯ್ಕೆ ಸಮಿತಿ ಭವಿಷ್ಯದತ್ತ ಗಮನ ಹರಿಸುತ್ತಿದ್ದು, ತಂಡದಲ್ಲಿ ಪ್ರಮುಖ ಬದಲಾವಣೆಯನ್ನ ತಂದಿದೆ.
Jun 04, 2026 11:33 PM IST













