Last Updated:
ದೆಹಲಿಯ ಐಷಾರಾಮಿ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಸ್ ಸ್ಟೇಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅಪಘಾತದಲ್ಲಿ ಇಪ್ಪತ್ತೊಂದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಸರಿಸುಮಾರು 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ದೆಹಲಿಯ ಮಾಲವಿಯಾ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದಲ್ಲಿ ಒಂದು ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ. ಇದು ಕೊನೆಗೆ ಒಂದು ದೊಡ್ಡ ದುರಂತವಾಗಿ ಮಾರ್ಪಟ್ಟಿದೆ. ಫ್ಲೋರಿಸ್ ಸ್ಟೇ ಎಂಬ ಹೋಟೆಲ್-ಕಮ್-ರೆಸ್ಟೋರೆಂಟ್ನಲ್ಲಿ (Restaurant) ಬೆಂಕಿ ಹೊತ್ತಿಕೊಂಡ ಘಟನೆ ಅಲ್ಲಿನ ಜನರಲ್ಲಿ ಭಯ ಮತ್ತು ಗೊಂದಲ ಉಂಟುಮಾಡಿದೆ. ಕೆಲವೇ ನಿಮಿಷಗಳಲ್ಲಿ ಕಟ್ಟಡದ ಸುತ್ತಮುತ್ತ ದಟ್ಟ ಹೊಗೆ, ಉರಿಯುವ ಜ್ವಾಲೆಗಳು, ಒಳಗಿರುವವರ ಕೂಗು–ಇವು ಎಲ್ಲವೂ ಒಂದೇ ಸಮಯದಲ್ಲಿ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬುಧವಾರ ಬೆಳಿಗ್ಗೆ ಆಕಸ್ಮಿಕವಾಗಿ ಈ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೌಜ್ ರಾಣಿ ಎಂಬುದು ದೆಹಲಿಯ ಐಷಾರಾಮಿ, ಜನಸಂದಣಿ ಪ್ರದೇಶ. ಈ ಕಾರಣದಿಂದ ಬೆಂಕಿ ಕಾಣಿಸಿಕೊಂಡ ಕ್ಷಣದಿಂದಲೇ ಪರಿಸ್ಥಿತಿ ಗಂಭೀರವಾಗಿತ್ತು.
ಆರಂಭದಲ್ಲಿ ಹೋಟೆಲ್ನಲ್ಲಿ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವು ಕ್ಷಣಗಳಲ್ಲಿ ದೊಡ್ಡ ಜ್ವಾಲೆಗಳಾಗಿ ಕಟ್ಟಡದ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿತು. ಬೆಂಕಿ ಮತ್ತು ಹೊಗೆ ಅಷ್ಟೊಂದು ವೇಗವಾಗಿ ಹರಡಿದವು, ಇಡೀ ಕಟ್ಟಡವೇ ಕಪ್ಪು ಹೊಗೆಯಲ್ಲಿ ಮುಳುಗಿತು. ಮೂರನೇ ಮಹಡಿಯಲ್ಲಿ ಇದ್ದವರು ವಿಶೇಷವಾಗಿ ದೊಡ್ಡ ಅಪಾಯಕ್ಕೆ ಸಿಲುಕಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೆಂಕಿ ತೀವ್ರವಾಗುತ್ತಿದ್ದಂತೆ, ಜನರು ಮೇಲ್ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಕಿಟಕಿಗಳತ್ತ, ಕೆಲವರು ಸೀಲಿಂಗ್ನಿಂದ ಅಥವಾ ಕಿಟಕಿಗಳಿಂದ ಕೆಳಗೆ ಜಿಗಿಯಲು ಪ್ರಯತ್ನಿಸಿದರು. ಅವರ ಕಿರುಚಾಟ, ಸಹಾಯಕ್ಕಾಗಿ ಕೂಗು, ಸುತ್ತಮುತ್ತಲಿನವರಲ್ಲಿ ಭೀತಿಯನ್ನು ಹೆಚ್ಚಿಸಿತು.
ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಗುತ್ತಿದ್ದಂತೆಯೇ ತಂಡಗಳು ಸ್ಥಳಕ್ಕೆ ಧಾವಿಸಿದವು. ಬೆಂಕಿಯ ಮಧ್ಯದಲ್ಲೇ ಅವರು ಕಟ್ಟಡದ ಒಳಗೆ ಪ್ರವೇಶಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು. ಸಿಕ್ಕಿಹಾಕಿಕೊಂಡಿದ್ದವರನ್ನು ಹೊರತೆಗೆದು, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸಾಕಷ್ಟು ಹೋರಾಡಿದರು. ಅವರ ಪ್ರಯತ್ನದ ಫಲವಾಗಿ ಸುಮಾರು 37 ಜನರನ್ನು ಬದುಕುಳಿಸಲು ಸಾಧ್ಯವಾಯಿತು. ಆದರೆ ದುಃಖಕರ ಸಂಗತಿ ಎಂದರೆ, ಆ ಹೊತ್ತಿಗಾಗಲೇ 21 ಜನರು ಬೆಂಕಿಯಲ್ಲಿ ಸಾವನ್ನಪ್ಪಿದ್ದರು. ಈ ಸಂಖ್ಯೆ ಎಷ್ಟು ಭೀಕರವಾದ ದುರಂತ ನಡೆದಿದೆ ಎನ್ನುವುದನ್ನು ತೋರಿಸುತ್ತದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬೆಂಕಿ ಹೋಟೆಲ್ ಒಳಗೆ ನಡೆದ ಶಾರ್ಟ್ ಸರ್ಕ್ಯೂಟ್ನಿಂದ ಪ್ರಾರಂಭವಾಗಿದೆ ಎಂದು ಶಂಕಿಸಲಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಬಂದ ದೋಷದಿಂದ ಬೆಂಕಿ ಹೊತ್ತಿಕೊಂಡು, ಕೆಲವೇ ಕ್ಷಣಗಳಲ್ಲಿ ಕೊಠಡಿಗಳಿಂದ ಹಿಡಿದು ಇಡೀ ಕಟ್ಟಡಕ್ಕೆ ಹರಡಿದೆ. ಹೋಟೆಲ್ನ ವಿನ್ಯಾಸ, ಸುರಕ್ಷತಾ ವ್ಯವಸ್ಥೆಗಳ ಕೊರತೆ, ತುರ್ತು ನಿರ್ಗಮನ ಮಾರ್ಗಗಳು ಇವುಗಳ ಕಾರಣದಿಂದ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಎಲ್ಲ ವಿಚಾರಗಳು ಇನ್ನೂ ತನಿಖೆಯಲ್ಲಿವೆ.
ಬೆಳಿಗ್ಗೆಯ ಸಮಯವಾಗಿದ್ದರಿಂದ, ಬಹಳಷ್ಟು ಅತಿಥಿಗಳು ತಮ್ಮ ಕೊಠಡಿಗಳಲ್ಲಿ ನಿದ್ರಿಸುತ್ತಿದ್ದರು. ಅವರಿಗೆ ಬೆಂಕಿ ಹೊತ್ತಿಕೊಂಡಿರುವುದರ ಬಗ್ಗೆ ಸಮಯಕ್ಕೆ ಮುನ್ನ ಅರಿವು ಬಂದಿರಲಿಲ್ಲ ಎನ್ನಲಾಗಿದೆ. ಕೆಲವರು ಹೊಗೆಯಿಂದಲೇ ಮೂರ್ಛೆ ಹೋಗಿದ್ದಿರಬಹುದು, ಕೆಲವರು ಬಾಗಿಲು ತೆರೆಯುವಷ್ಟರಲ್ಲಿ ಬೆಂಕಿ ಅವರನ್ನು ಸುತ್ತಿಕೊಂಡಿರಬಹುದು. ಹಲವರು ಕೊಠಡಿಗಳೊಳಗೇ ಸಿಕ್ಕಿಹಾಕಿಕೊಂಡು ಜೀವಂತವಾಗಿ ಸುಟ್ಟುಹೋಗಿರಬಹುದು ಎಂಬ ಭೀತಿ ವ್ಯಕ್ತವಾಗಿದೆ.
ಘಟನೆಯ ನಂತರ, ಪ್ರಧಾನ ಮಂತ್ರಿ ಕಚೇರಿಯು ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದೆ. ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಂಭವಿಸಿದ ಜೀವಹಾನಿ ದುರಂತ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದಾರೆ. ಮೃತರ ಪ್ರತಿ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.













