Last Updated:
Marriage Scam: ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಕ್ಷಣ. ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯ ಕನಸು ಹೊತ್ತು ಪೇಟ ಕಟ್ಟಿ, ಬ್ಯಾಂಡ್ ಬಾಜಾ ಸಮೇತ 42 ಯುವಕರು ವರರಾಗಿ ಮಂಟಪಕ್ಕೆ ಬಂದರೂ ಒಬ್ಬಳೇ ಒಬ್ಬ ವಧು ಅಲ್ಲಿಗೆ ಬರಲೇ ಇಲ್ಲ. ಆ ಕುರಿತ ವರದಿ ಇಲ್ಲಿದೆ.
Marriage Scam: ದೇವಾಸ್ (ಮಧ್ಯಪ್ರದೇಶ): ಸಾವಿರ ಸುಳ್ಳು ಹೇಳಿ ಒಂದು ಮದುವೆ (Marriage) ಮಾಡು ಅಂತಾರೆ. ಆದರೆ ಮಧ್ಯಪ್ರದೇಶದ (Madhya Pradesh) ದೇವಾಸ್ನಲ್ಲಿ (Dewas) ಒಂದು ಸುಳ್ಳು ಹೇಳಿ 42 ಮದುವೆ ಮಾಡೋ ಪ್ಲಾನ್ ಮಾಡಿ ಇಡೀ ಊರನ್ನೇ ಯಾಮಾರಿಸಿದ್ದಾರೆ! ಹೌದು, ಸಾಮೂಹಿಕ ವಿವಾಹ (Mass Marriage) ಮಹೋತ್ಸವ ಅಂತ 42 ಯುವಕರಿಗೆ ಮದುವೆ ಮಾಡಿಸುವುದಾಗಿ ಆಸೆ ತೋರಿಸಿ ಮದುವೆ ಮಂಟಪಕ್ಕೂ ಕರೆಸಿದ್ದಾರೆ. ಕೊನೆಗೆ ಆ ಯುವಕರಿಗೆ ಹೆಣ್ಣು ಇಲ್ಲಾ ಹೊನ್ನು ಇಲ್ಲಾ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಆ ಕುರಿತ ವರದಿ ಇಲ್ಲಿದೆ.
ಮಧ್ಯಪ್ರದೇಶದಲ್ಲಿ ಮದುವೆ ಹೆಸರಿನ ಸ್ಕ್ಯಾಮ್ ದೊಡ್ಡದಾಗಿ ಬೆಳೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮದುವೆ ಹೆಸರಿನಲ್ಲಿ, ಗಂಡನೇ ತನ್ನ ಹೆಂಡತಿಯ ಅಣ್ಣನಾಗಿ ನಟಿಸಿ ಮತ್ತೊಬ್ಬ ವ್ಯಕ್ತಿಗೆ ಮದುವೆ ಮಾಡಿಸಿದ್ದ. ಇದರ ಬೆನ್ನಲ್ಲೇ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ದೇವಾಸ್ ಕ್ಲಬ್ ಮೈದಾನದಲ್ಲಿ, ಮೇ 25, 2026 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು 42 ಯುವಕರಿಗೆ ನಂಬಿಸಲಾಗಿತ್ತು.

ಅದರಂತೆ, ದೇವಾಸ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಯುವಕರು ಬೆಳಗ್ಗೆಯೇ ವರನ ವೇಷದಲ್ಲಿ ಮೆರವಣಿಗೆಯೊಂದಿಗೆ ಮೈದಾನಕ್ಕೆ ಆಗಮಿಸಿದ್ದರು. ಮದುವೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಗಂಟೆಗಟ್ಟಲೆ ಕಾದರೂ ವಧುಗಳು ಅಥವಾ ಅವರ ಕುಟುಂಬದವರು ಸ್ಥಳಕ್ಕೆ ಬರಲೇ ಇಲ್ಲ. ಸಂಜೆಯಾದರೂ ಯಾರೂ ಬಾರದಿದ್ದಾಗ ತಾವು ಮೋಸ ಹೋಗಿದ್ದೇವೆ ಎಂದು ಯುವಕರಿಗೆ ಅರಿವಾಯಿತು.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ವಿದಿಶಾದ ಒಬ್ಬ ಯುವಕ ತಾನು ಮಧ್ಯವರ್ತಿ ಎಂದು ಹೇಳಿಕೊಂಡು ಈ ವಂಚನೆಯ ಜಾಲ ಹೆಣೆದಿದ್ದ. ಇಂದೋರ್ನ ಅನಾಥಾಶ್ರಮದ ಹುಡುಗಿಯರಿಗೆ ಸಾಮೂಹಿಕ ವಿವಾಹ ಮಾಡಿಸಲಾಗುವುದು ಎಂದು 42 ಯುವಕರಿಗೆ ಆಮಿಷವೊಡ್ಡಿದ್ದ. ಇದಕ್ಕಾಗಿ ಪ್ರತಿಯೊಬ್ಬರಿಂದ 15,000 ರಿಂದ 25,000 ರೂಪಾಯಿವರೆಗೆ ಹಣವನ್ನೂ ಕೂಡ ವಸೂಲಿ ಮಾಡಿದ್ದ. ಇದರೊಂದಿಗೆ, ನಂಬಿಕೆ ಬರಲು ರಿಜಿಸ್ಟರ್ ಆದ ಯುವಕರ ಮೊಬೈಲ್ಗೆ ಹುಡುಗಿಯರ ಫೋಟೋಗಳನ್ನು ಕಳುಹಿಸಿ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗಿತ್ತು. ಅದರಲ್ಲೂ, ಹಲವು ಯುವಕರು ಮದುವೆ ಖರ್ಚಿಗೆ ಸಾಲವನ್ನೂ ಮಾಡಿದ್ದರು.

ಏತನ್ಮಧ್ಯೆ, ತಾವು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ವರರು ಮತ್ತು ಅವರ ಕುಟುಂಬಸ್ಥರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಭಾವನೆಗಳ ಜೊತೆ ಆಟವಾಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು, ಘಟನೆ ಸಂಬಂಧ ದೇವಾಸ್ನ ಬಿಎನ್ಪಿ ಪೊಲೀಸ್ ಠಾಣೆಯ ಪ್ರೀತಿ ಕಟಾರೆ ಅವರು ಮಾತನಾಡಿ, “ಮದುವೆಯ ಹೆಸರಿನಲ್ಲಿ ವಂಚನೆ ನಡೆದಿರುವುದು ಸ್ಪಷ್ಟವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದ್ದು, ಅನಾಥಾಶ್ರಮದ ನಿರ್ವಾಹಕರನ್ನೂ ವಿಚಾರಣೆಗೆ ಒಳಪಡಿಸಲಾಗುವುದು” ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಒಟ್ಟು 42 ಯುವಕರಿಂದ ವಸೂಲಿ ಮಾಡಿದ ಹಣ ಲಕ್ಷಾಂತರ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಂಚನೆ ಪ್ರಕರಣ ವೈರಲ್ ಆಗಿದ್ದು, ಜನರಿಂದ ತೀವ್ರ ಟೀಕೆಗೆ ಒಳಗಾಗಿದೆ.
Dewas,Madhya Pradesh













