ಗಡಿ ಉದ್ವಿಗ್ನತೆ ಬಗ್ಗೆ ಮೋದಿ ಮೌನ; ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಗೈದ ರಾಹುಲ್ ಗಾಂಧಿ | | ACTPnews

ಗಡಿ ಉದ್ವಿಗ್ನತೆ ಬಗ್ಗೆ ಮೋದಿ ಮೌನ; ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಗೈದ ರಾಹುಲ್ ಗಾಂಧಿ |


Last Updated:

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ವೇಳೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ಆಕ್ಷೇಪಿಸಿದ್ದಾರೆ. ಜತೆಗೆ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದಾರೆ.

ನವದೆಹಲಿ (ಜೂ.18): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾಗಳನ್ನು  ವಿರೋಧ ಪಕ್ಷದ ನಾಯಕನಾಗಿ  ರಾಹುಲ್ ಗಾಂಧಿ ಮೊದಲಿನಿಂದಲೂ ಪ್ರಶ್ನಿಸುತ್ತಾ ಬರುತ್ತಿದ್ದಾರೆ. ಸೋಮವಾರ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಶುರುವಾದ ಮೇಲೆ ಕೇಂದ್ರ ಸರ್ಕಾರದ ಮೇಲೆ ಅವರು ಖಡಕ್ ಪ್ರಶ್ನೆಗಳ ಮಳೆ ಸುರಿಯುತ್ತಿದ್ದಾರೆ‌.

ಇಂದು ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ಮತ್ತು ಸೈನಿಕರನ್ನು ನಿಶಸ್ತ್ರವಾಗಿ ಹುತಾತ್ಮರಾಗಲು ಕಳುಹಿಸಿದ್ದೇಕೆ? ಎಂಬ, ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ. “ಭಾರತ -ಚೀನಾ ಗಡಿಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದು ಏಕೆ? ಮೋದಿ ವಾಸ್ತವವನ್ನು ಏಕೆ ಮುಚ್ಚಿಡುತ್ತಿದ್ದಾರೆ? ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಎಂಬುದನ್ನು ಹೇಳಿ. ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಕ್ಕೆ ಎಷ್ಟು ಧೈರ್ಯ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಕ್ಕೆ ಎಷ್ಟು ಧೈರ್ಯ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ ರಾಹುಲ್ ಗಾಂಧಿ ಅವರ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ‘ನಮ್ಮ ಭೂಮಿ, ನಮ್ಮ ಸಾರ್ವಭೌಮತ್ವಕ್ಕೆ ಬೆದರಿಕೆ ಇದೆ. ನಮ್ಮ ಸೈನಿಕರು ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ನಾವು ಸುಮ್ಮನಿರಲು ಸಾಧ್ಯವೇ? ನಮ್ಮ ಭೂಮಿ ವಾಪಸ್ ಪಡೆಯಲು ಭಾರತದ ನಾಯಕತ್ವ ಇಚ್ಛಾಶಕ್ತಿ ತೋರಬೇಕು. ಅಂಥ‌ ಇಚ್ಛಾಶಕ್ತಿ ತೋರಿಸಿ ನರೇಂದ್ರ ಮೋದಿ ಅವರೇ ಎಂದು ಟ್ವೀಟರ್ ಮೂಲಕ ಪ್ರಿಯಾಂಕಾ ಗಾಂಧಿ ಅವರು ಸವಾಲು ಹಾಕಿದ್ದಾರೆ.

ಇದಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ವೇಳೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ಆಕ್ಷೇಪಿಸಿದ್ದಾರೆ. ಜತೆಗೆ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದಾರೆ.

ಗಡಿಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದರು. ಒಂದೂವರೆ ತಿಂಗಳಿನಿಂದ ಚೀನಾ ಲಡಾಖ್​ನಲ್ಲಿ ನಮ್ಮ ಭೂಭಾಗವನ್ನ ಅತಿಕ್ರಮಿಸಿರುವುದು ಎಲ್ಲರಿಗೂ ಗೊತ್ತು. ಇವತ್ತು ಭಾರತ ಕೋಪೋದ್ರೇಕಗೊಂಡಿದೆ. ಚೀನಾ ನಮ್ಮ ಭಾರತದ ನೆಲವನ್ನ ವಶಪಡಿಸಿಕೊಳ್ಳಲು ಹಾಗೂ 20 ಸೈನಿಕರ ಬಲಿ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಧಾನ ಮಂತ್ರಿಗಳು ವಿವರಿಸಲಿ ಎಂದು ಸೋನಿಯಾ ಗಾಂಧಿ ಸವಾಲು ಹಾಕಿದ್ದಾರೆ.

ನಾಪತ್ತೆಯಾಗಿರುವ ಸೈನಿಕರು ಇದ್ದಾರೆಯೇ? ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಸೈನಿಕರು ಮತ್ತು ಸೇನಾಧಿಕಾರಿಗಳ ಸಂಖ್ಯೆ ಎಷ್ಟು? ಚೀನಾ ಯಾವೆಲ್ಲಾ ಪ್ರದೇಶಗಳನ್ನ ವಶಪಡಿಸಿಕೊಂಡಿದೆ? ಇದರ ಬಗ್ಗೆ ಸರ್ಕಾರದ ಚಿಂತನೆ ಮತ್ತು ತಂತ್ರಗಳೇನು? ಎಂದು ಎಐಸಿಸಿ ಅಧ್ಯಕ್ಷೆ ಪ್ರಶ್ನೆಗಳನ್ನು ಹಾಕಿದ್ದರು‌. ಇದಲ್ಲದೆ  ಈ ಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಭರವಸೆ ನೀಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed