ಕಾಂಗ್ರೆಸ್ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ವರ್ಷದೊಳಗೆ ಬೀಳುತ್ತದೆ” ಎಂದಿದ್ದರು. ಇದಾದ ನಂತರ ರಾಹುಲ್ ಅವರ ಹೇಳಿಕೆಯು ರಾಷ್ಟ್ರರಾಜಕೀಯದಲ್ಲಿ ಚರ್ಚಾ ವಿಷಯವಾಯಿತು. ಇದರ ಬೆನ್ನಲ್ಲೇ, ಈ ಹೇಳಿಕೆಯನ್ನ ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಹತಾಶೆ ಎಂದು ಬಿಜೆಪಿ ಬಣ್ಣಿಸಿತು. ಈಗ ಪ್ರಶ್ನೆ ಏನಂದ್ರೆ, “ರಾಹುಲ್ ಗಾಂಧಿ ಅವರ ಹೇಳಿಕೆಯ ಹಿಂದೆ ಯಾವುದೇ ದೊಡ್ಡ ರಾಜಕೀಯ ಮಾಹಿತಿಯಿದೆಯಾ ಅಥವಾ ಇದು ಕೇವಲ ತಮ್ಮ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಪ್ರಯತ್ನನಾ?” ಎಂದು. ಅದಕ್ಕೆ ಉತ್ತರ ಇಲ್ಲಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಇಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ರಾಹುಲ್ ಗಾಂಧಿಯವರ ಹೇಳಿಕೆಯು ರಾಜಕೀಯ ತಂತ್ರಗಾರಿಕೆಗಿಂತಲೂ ಹೆಚ್ಚಾಗಿ ರಾಜಕೀಯ ವಾಕ್ಚಾತುರ್ಯದಂತೆ ಕಾಣುತ್ತದೆ. ಇದಕ್ಕೆ ದೊಡ್ಡ ಕಾರಣವೆಂದರೆ ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರವು ಬಲಿಷ್ಠ ಸಂಖ್ಯಾ ಬಲದೊಂದಿಗೆ ಅಧಿಕಾರದಲ್ಲಿದೆ. ಅದರಲ್ಲೂ, ಬಿಜೆಪಿಯ ಬಳಿ ಮೊದಲಿನಂತೆ ಮ್ಯಾಜಿಕ್ ನಂಬರ್ ಇಲ್ಲದಿದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಗಟ್ಟಿಯಾಗಿರುವಂತೆ ಕಾಣುತ್ತದೆ. ಅದರಂತೆ, ಕೇಂದ್ರ ಸರ್ಕಾರದಲ್ಲಿ ಯಾವುದೇ ತಕ್ಷಣದ ರಾಜಕೀಯ ಬಿಕ್ಕಟ್ಟು ಇಲ್ಲ ಎಂದು ಕಾಣುತ್ತದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ
ವಾಸ್ತವವಾಗಿ, ಇತ್ತೀಚಿನ ಕೆಲ ವಿಧಾನಸಭಾ ಚುನಾವಣೆಗಳು ಬಿಜೆಪಿಯನ್ನ ಬಲಿಷ್ಠವಾಗಿಸಿದೆ. ಅದರಲ್ಲೂ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಪಕ್ಷಕ್ಕೆ ಭಾರಿ ಜನಬೆಂಬಲ ದೊರೆತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬಂಗಾಳದಲ್ಲಿ ಬಿಜೆಪಿ ತನ್ನ ರಾಜಕೀಯ ಅಸ್ತಿತ್ವವನ್ನು ಗಮನಾರ್ಹವಾಗಿ ಸ್ಥಾಪಿಸಿದರೆ. ಅಸ್ಸಾಂನಲ್ಲಿಯೂ ಸಹ, ಪಕ್ಷ ಮತ್ತು ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ, ಈ ವಿಧಾನಸಭಾ ಚುನಾವಣೆಗಳು ಬಿಜೆಪಿ ಇನ್ನು ಮುಂದೆ ಕೇವಲ ಹಿಂದಿ ಭಾಷೆಗೆ ಸೀಮಿತವಾಗಿಲ್ಲ; ಬದಲಾಗಿ ಈಶಾನ್ಯ ಮತ್ತು ಪೂರ್ವ ಭಾರತದಲ್ಲಿಯೂ ಅದರ ಪ್ರಭಾವ ದೊಡ್ಡದಾಗುತ್ತಿದೆ ಎಂಬ ಸಂದೇಶವನ್ನು ರವಾನಿಸಿದೆ.
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೇ ಇಂದಿಗೂ ಬಿಜೆಪಿಯ ದೊಡ್ಡ ಶಕ್ತಿಯಾಗಿದೆ. ರಾಷ್ಟ್ರಮಟ್ಟದಲ್ಲಿ, ಮೋದಿಯವರ ಇಮೇಜ್ ಪ್ರತಿಪಕ್ಷಗಳ ಯಾವುದೇ ನಾಯಕರಿಗಿಂತಲೂ ಹೆಚ್ಚು ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಇದರ ನಡುವೆ, ಹಣದುಬ್ಬರ, ನಿರುದ್ಯೋಗ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ವಿಷಯಗಳನ್ನು ವಿರೋಧ ಪಕ್ಷಗಳು ಎತ್ತುತ್ತಲೇ ಇವೆ, ಆದರೂ ಮೋದಿಯವರ ವೈಯಕ್ತಿಕ ಜನಪ್ರಿಯತೆ ಕಡಿಮೆಯಾಗಿಲ್ಲ. ಅದರಂತೆ, ಸಾರ್ವಜನಿಕರು ಮೋದಿ ಮೇಲೆ ಇಟ್ಟಿರುವ ನಂಬಿಕೆ ಅಚಲವಾಗಿದೆ.
ಮತ್ತೊಂದೆಡೆ, ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ, ಆರ್ಥಿಕ ಅಸಮಾಧಾನ ಮತ್ತು ಯುವಜನರ ಕೋಪವು ಸರ್ಕಾರ ವಿರೋಧಿ ಭಾವನೆಗೆ ಕಾರಣಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ. ನೀಟ್ ಪತ್ರಿಕೆ ಸೋರಿಕೆಯಂತಹ ವಿಷಯಗಳ ಮೇಲೆ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಸರ್ಕಾರವು ಈ ವಿಷಯಗಳ ಬಗ್ಗೆ ತ್ವರಿತ ಕ್ರಮ ಕೈಗೊಂಡು, ಪರೀಕ್ಷೆಯನ್ನು ರದ್ದುಗೊಳಿಸಿತು. ಇದರ ಪರಿಣಾಮವಾಗಿ, ಈ ಸಮಸ್ಯೆಗಳು ಇನ್ನು ಮುಂದೆ ಪ್ರಸ್ತುತವಾಗಿಲ್ಲ. ಇದಲ್ಲದೆ, ಸರ್ಕಾರಗಳು ಕೇವಲ ಸಮಸ್ಯೆಗಳ ಮೇಲೆ ಮಾತ್ರ ಬೀಳುವುದಿಲ್ಲ ಎಂದು ಭಾರತೀಯ ರಾಜಕೀಯ ಇತಿಹಾಸ ತೋರಿಸುತ್ತದೆ. ಅದರಂತೆ, ಇದೇನಾದರೂ ಸಂಭವಿಸಬೇಕಾದರೆ, ಆಡಳಿತ ಪಕ್ಷದೊಳಗೆ ಒಂದು ದೊಡ್ಡ ಒಡಕು, ಎನ್ಡಿಎ ಒಕ್ಕೂಟದಲ್ಲಿ ಬಿರುಕು ಇರಬೇಕು. ಆದರೆ, ಪ್ರಸ್ತುತ, ಅಂತಹ ಯಾವುದೇ ಪರಿಸ್ಥಿತಿ ಗೋಚರಿಸುತ್ತಿಲ್ಲ.
ಏತನ್ಮಧ್ಯೆ, ಸರ್ಕಾರ ಬೀಳುತ್ತದೆ ಎನ್ನುವ ರಾಹುಲ್ ಗಾಂಧಿಯವರ ಹೇಳಿಕೆಯು ವಿರೋಧ ಪಕ್ಷದ ನಿಲುವನ್ನು ದುರ್ಬಲಗೊಳಿಸುತ್ತದೆ. ಯಾಕೆಂದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದೊಳಗಿನ ಅನೇಕ ಪಕ್ಷಗಳು ತಮ್ಮದೇ ಆದ ಪ್ರಾದೇಶಿಕ ಹಿತಾಸಕ್ತಿಗಳನ್ನು ಹೊಂದಿವೆ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ, ವಿರೋಧ ಪಕ್ಷಗಳು ಇನ್ನೂ ಸ್ಪಷ್ಟವಾಗಿ ತಮ್ಮ ನಾಯಕ ಎಂದು ಯಾರನ್ನು ಬಿಂಬಿಸುತ್ತಿಲ್ಲ. ಜೊತೆಗೆ ಅದಕ್ಕೆ ಪರ್ಯಾಯ ಕಾರ್ಯಸೂಚಿಯನ್ನು ಸಹ ಪ್ರಸ್ತುತಪಡಿಸಿಲ್ಲ. ಇದರ ನಡುವೆ, ದೇಶದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯು ಸ್ಥಿರವಾಗಿ ದುರ್ಬಲಗೊಂಡಿದೆ. ಇದರ ಪರಿಣಾಮವಾಗಿ, ಬಿಜೆಪಿಗೆ ವಿರೋಧ ಪಕ್ಷದ ಸವಾಲು ಪ್ರಸ್ತುತ ಏನೂ ಅಲ್ಲ ಎನ್ನಬಹುದು! ಹಾಗಾಗಿಯೇ, ಬಿಜೆಪಿ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಟೀಕಿಸುತ್ತಾ, “ವಿರೋಧ ಪಕ್ಷವು ಸಾರ್ವಜನಿಕ ಜನಾದೇಶವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಮತ್ತು ಆದ್ದರಿಂದ ಅಂತಹ ಹೇಳಿಕೆಗಳನ್ನು ನೀಡುತ್ತಿದೆ” ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರಂತಹವರು ಹೇಳಿದರು.
ಒಟ್ಟಾರೆಯಾಗಿ, ರಾಹುಲ್ ಗಾಂಧಿಯವರ ಹೇಳಿಕೆಯು ಹೆಚ್ಚು ರಾಜಕೀಯ ಸಂದೇಶವನ್ನು ನೀಡುವ ಪ್ರಯತ್ನದಂತೆ ಕಾಣುತ್ತದೆ. ಅದರಂತೆ, ಬಿಜೆಪಿಗೆ ಸವಾಲು ಹಾಕಲು ತಮ್ಮಿಂದ ಮಾತ್ರ ಸಾಧ್ಯ ಎಂಬ ವಿಶ್ವಾಸವನ್ನು ಕಾಂಗ್ರೆಸ್ ತನ್ನ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಕಾಪಾಡಿಕೊಳ್ಳಲು ಬಯಸುತ್ತದೆ. ಆದಾಗ್ಯೂ, ಪ್ರಸ್ತುತ ರಾಜಕೀಯ ಸ್ಥಿತಿಗತಿ ಅರ್ಥಾತ್ ಮೋದಿಯವರ ಜನಪ್ರಿಯತೆ, ಎನ್ಡಿಎಯ ಸಂಖ್ಯಾ ಬಲ ಮತ್ತು ವಿರೋಧ ಪಕ್ಷದ ದೌರ್ಬಲ್ಯವನ್ನು ಗಮನಿಸಿದರೆ, ರಾಹುಲ್ ಅವರ ಈ ಹೇಳಿಕೆಯು ವಾಸ್ತವಕ್ಕಿಂತಲೂ ರಾಜಕೀಯ ಫ್ಯಾಂಟಸಿಯಂತೆ ಕಾಣುತ್ತದೆ.












