Last Updated:
ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಈಗ ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳಿಂದ ತಿಳಿದುಬಂದಿದೆ.
ನವದೆಹಲಿ(ಸೆ. 08): ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ಚೀನಾದ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಗಳು ಕೇಳಿಬರುತ್ತಿವೆ. ಈಗಾಗಲೇ ಚೀನಾದ ಸೇನೆ ಗಡಿಯಲ್ಲಿ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆ ಎಂಬ ಬಗ್ಗೆ ದಟ್ಟವಾದ ಅನುಮಾನಗಳು ಮೂಡಿವೆ. ಇದೇ ವೇಳೆ ಈಗ ಭಾರತೀಯ ಸೇನೆಯಿಂದಲೇ ಚೀನಾ ಸೇನೆ ಪಂಗೊಗನ್ ಸರೋವರದ ದಕ್ಷಿಣ ಭಾಗದ ಬಳಿ ಮತ್ತೆ ಒಳನುಸುಳುವ ಪ್ರಯತ್ನ ಮಾಡುತ್ತಿದೆ ಎಂದು ಗೊತ್ತಾಗಿದೆ.
ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಈಗ ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಮೇಲೆಯೇ ಚೀನಾ ಗಂಭೀರ ಆರೋಪ ಮಾಡಿದೆ. ಭಾರತದ ಸೇನೆ ಶೆನ್ ಪಾವೊ ಪರ್ವತಗಳ ಬಳಿ LOC ಉಲ್ಲಂಘನೆ ಮಾಡಿದೆ. ಪಾಂಗೊಂಗ್ ಸರೋವರದಲ್ಲಿ ಭಾರತೀಯ ಸೇನೆಯಿಂದ ಗುಂಡಿನ ದಾಳಿ ನಡೆದಿದೆ. ಭಾರತದ ಈ 2 ಕ್ರಮಗಳು ಗಡಿಯಲ್ಲಿ ಪ್ರಚೋದನಕಾರಿ ಹೆಜ್ಜೆಗಳಾಗಿವೆ. ಗಡಿ ದಾಟಿ ಬಂದು ಚೀನಾದ ಪ್ರದೇಶವಾದ ಬಾಂಗೋಂಗ್ ಹುನಾನ್ಗೆ ಬಂದಿದ್ದರು ಎಂಬ ಗಂಭೀರ ಆರೋಪ ಹೊರಿಸಿದೆ. ಆದರೆ, ಚೀನಾ ಆರೋಪಗಳನ್ನು ಭಾರತ ಸಾರಾಸಗಟಾಗಿ ತಳ್ಳಿಹಾಕಿದೆ.
ಇನ್ನೊಂದೆಡೆ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರ ನಡುವೆಯೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಇಂದು ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿಯಾಗುವ ಸಂಭವ ಇದೆ. ಎರಡೂ ದೇಶಗಳ ವಿದೇಶಾಂಗ ಸಚಿವರು ಮಾಸ್ಕೋದಲ್ಲಿ ಭೇಟಿ ಸಾಧ್ಯತೆಯಿದ್ದು ಈಗಾಗಲೇ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಸ್ಕೋ ತಲುಪಿದ್ದಾರೆ. ಅವರು ಎಸ್ಸಿಒ ಸಭೆಯಲ್ಲಿ ಭಾಗವಹಿಸಲು ಮಾಸ್ಕೋಗೆ ಭೇಟಿ ನೀಡಿದ್ದಾರೆ.
– ಧರಣೀಶ್ ಬೂಕನಕೆರೆ














