Last Updated:
ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಜೂ.01): ಭಾರತೀಯ ಜನತಾ ಪಕ್ಷವು (BJP) ಪ್ರಸ್ತುತ ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷವಾಗಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ (Candidates) ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ ಸಭೆ ನಡೆದಿದ್ದು, ಎರಡು-ಮೂರು ದಿನಗಳಲ್ಲಿ ಪಟ್ಟಿ ಪ್ರಕಟಗೊಳ್ಳಲಿದೆ. ಮೈತ್ರಿ ಕಾರಣಕ್ಕೆ ಜೆಡಿಎಸ್ ನಾಯಕ ಹೆಚ್.ಡಿ ದೇವೇಗೌಡ (HD Devegowda) ಅವರನ್ನ ಕಣಕ್ಕಿಳಿಸಲು ಬಿಜೆಪಿ ಒಲವು ತೋರಿದೆ ಎಂದು ತಿಳಿದು ಬಂದಿದೆ.
ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದು ಬಂದಿದೆ. ದೇವೇಗೌಡರ ಸ್ಪರ್ಧೆ ಚರ್ಚೆ ನಡುವೆ ಸುಮಲತಾ ಅಂಬರೀಶ್ ಬಗ್ಗೆ ವರಿಷ್ಠರು ಮಾತಾಡಿದ್ದಾರೆ ಎನ್ನಲಾಗ್ತಿದೆ.
ಇಂದು ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟವಾಗಲಿದ್ದು, ಎನ್ಡಿಎಯಿಂದ ಸುಮಲತಾ ಅಂಬರೀಶ್ ಹೆಸರು ಘೋಷಣೆ ಆದರೂ ಆಶ್ಚರ್ಯ ಇಲ್ಲ ಎನ್ನುವಂತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹೆಚ್ ಡಿ ಕುಮಾರಸ್ವಾಮಿಗೆ ಸುಮಲತಾ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇದೇ ಜೂನ್ 18 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ.
ರಾಜ್ಯಸಭೆಗೆ ಮಾಜಿ ಸಿಎಂ ಡಿವಿ ಸದಾನಂದಗೌಡ ಹೆಸರನ್ನ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. ಅತ್ತ ರಾಜ್ಯಸಭೆ ಸೀಟು ಪಡೆಯಲು ಸುಮಲತಾ ಅಂಬರೀಶ್ ಪ್ರಯತ್ನ ಮಾಡ್ತಿದ್ದು, ಇದೇ ವೇಳೆ ಸುಮಲತಾಗೆ ಅವಕಾಶದ ಬಗ್ಗೆ ಬಿಜೆಪಿ ಹೈಕಮಾಂಡ್ ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಪರಿಷತ್ಗೆ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಇಂದು ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಈಗಾಗಲೇ ಐದು ಹೆಸರನ್ನ ರಾಜ್ಯ ಬಿಜೆಪಿ ಕೇಂದ್ರಕ್ಕೆ ಕಳುಹಿಸಿದೆ. ರಘು ಕೌಟಿಲ್ಯ, ನಳೀನ್ ಕುಮಾರ್ ಕಟೀಲ್, ಲಿಂಗರಾಜ್ ಪಾಟೀಲ್, ಎನ್ ಮಹೇಶ್, ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೆಸರು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.
(ವರದಿ: ಕೃಷ್ಣ, ನ್ಯೂಸ್18 ಕನ್ನಡ, ಬೆಂಗಳೂರು)













