Last Updated:
ಮಂಡ್ಯ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದ ಘೋಸಾಯಿ ಘಾಟ್ ಬಳಿಯ ಕಾವೇರಿ ನದಿಯಲ್ಲಿ ಎಸ್. ಜಾನಕಿ ಅವರ ಅಸ್ಥಿ ವಿಸರ್ಜನೆ ನೆರವೇರಿಸಲಾಯಿತು. ವೈದಿಕ ಅರ್ಚಕ ರಮೇಶ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಭಾರತೀಯ ಸಂಗೀತ ಲೋಕದ ಅಮರ ಕಂಠವಾಗಿ ಗುರುತಿಸಿಕೊಂಡಿದ್ದ ಗಾನಕೋಗಿಲೆ ಡಾ. ಎಸ್. ಜಾನಕಿ (S Janaki) ಅವರ ಅಂತಿಮ ಧಾರ್ಮಿಕ ವಿಧಿವಿಧಾನಗಳು ಇಂದು ಪೂರ್ಣಗೊಂಡಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಘೋಸಾಯಿ ಘಾಟ್ ಸಮೀಪದ ಕಾವೇರಿ ನದಿಯಲ್ಲಿ ಅವರ ಅಸ್ಥಿ ವಿಸರ್ಜನೆ ನೆರವೇರಿದ್ದು, ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ವೈದಿಕ ಸಂಪ್ರದಾಯದಂತೆ ಪೂಜೆ-ಪುನಸ್ಕಾರಗಳು ನಡೆದವು.
ಮಂಡ್ಯ ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದ ಘೋಸಾಯಿ ಘಾಟ್ ಬಳಿಯ ಕಾವೇರಿ ನದಿಯಲ್ಲಿ ಎಸ್. ಜಾನಕಿ ಅವರ ಅಸ್ಥಿ ವಿಸರ್ಜನೆ ನೆರವೇರಿಸಲಾಯಿತು. ವೈದಿಕ ಅರ್ಚಕ ರಮೇಶ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಎಸ್. ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತಿಮ ಅಪರ ಕ್ರಿಯೆ ಹಾಗೂ ಅಸ್ಥಿ ವಿಸರ್ಜನೆ ವಿಧಿಗಳನ್ನು ನೆರವೇರಿಸಿದರು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಜುಲೈ 11ರಂದು ಸಂಜೆ ಮೈಸೂರಿನಲ್ಲಿ ಎಸ್. ಜಾನಕಿ ಅವರು 92ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು. ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದ್ದು, ದೇಶದ ವಿವಿಧ ಭಾಗಗಳಿಂದ ಸಂಗೀತ ಕಲಾವಿದರು, ಸಿನಿಮಾ ಗಣ್ಯರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಜುಲೈ 12ರಂದು ಮೈಸೂರಿನ ಮಹಾರಾಜ ಗ್ರೌಂಡ್ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅವರ ಪಾರ್ಥಿವ ಶರೀರವನ್ನು ಹೆಚ್.ಡಿ. ಕೋಟೆ ತಾಲ್ಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ಫಾರಂ ಹೌಸ್ಗೆ ಕೊಂಡೊಯ್ಯಲಾಯಿತು. ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಇದೇ ಜಮೀನಿನಲ್ಲಿ ತಮ್ಮ ಅಂತ್ಯಸಂಸ್ಕಾರ ನಡೆಯಬೇಕು ಎಂಬುದು ಎಸ್. ಜಾನಕಿ ಅವರ ಕೊನೆಯ ಆಸೆಯಾಗಿತ್ತು. ಅದರಂತೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಎಸ್. ಜಾನಕಿ ಅವರ ಸಂಗೀತ ಪಯಣ ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮವಾಗಿದೆ. ಸುಮಾರು 65 ವರ್ಷಗಳ ಕಾಲ ಸಾವಿರಾರು ಹಾಡುಗಳ ಮೂಲಕ ಅವರು ಸಂಗೀತಾಭಿಮಾನಿಗಳ ಮನ ಗೆದ್ದಿದ್ದರು. ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ಪ್ರತಿಯೊಂದು ಹಾಡಿನಲ್ಲೂ ಜೀವ ತುಂಬುವ ಶೈಲಿಯೇ ಅವರನ್ನು ಇತರ ಗಾಯಕರಿಗಿಂತ ವಿಭಿನ್ನರನ್ನಾಗಿಸಿತು.
ಬಹುಭಾಷಾ ಗಾಯಕಿಯಾಗಿದ್ದರೂ ಎಸ್. ಜಾನಕಿ ಅವರಿಗೆ ಕನ್ನಡದೊಂದಿಗೆ ವಿಶೇಷ ಭಾವನಾತ್ಮಕ ಸಂಬಂಧವಿತ್ತು. ಅವರು ಅತಿ ಹೆಚ್ಚು ಹಾಡುಗಳನ್ನು ಕನ್ನಡದಲ್ಲೇ ಹಾಡಿರುವುದು ವಿಶೇಷ. ಕನ್ನಡ ಚಿತ್ರರಂಗದ ಅನೇಕ ಸಂಗೀತ ನಿರ್ದೇಶಕರು, ಗಾಯಕರು ಹಾಗೂ ಕಲಾವಿದರು ಅವರನ್ನು ಪ್ರೀತಿಯಿಂದ ‘ಜಾನಕಮ್ಮ’ ಎಂದು ಕರೆಯುತ್ತಿದ್ದರು. ಅವರ ಧ್ವನಿಯಲ್ಲಿ ಮೂಡಿಬಂದ ಅನೇಕ ಕನ್ನಡ ಹಾಡುಗಳು ಇಂದಿಗೂ ಜನಮನದಲ್ಲಿ ಉಳಿದಿವೆ.
ಒಟ್ಟಾರೆಯೆಯಾಗಿ ಎಸ್. ಜಾನಕಿ ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಮುಂದಿನ ಪೀಳಿಗೆಗಳಿಗೂ ಸಂಗೀತದ ಸ್ಫೂರ್ತಿಯಾಗಿ ಉಳಿಯಲಿವೆ.
Bangalore [Bangalore],Bangalore,Karnataka














