Last Updated:
ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕೆಲ ಷರತ್ತುಗಳಿಗೆ ಒಳಪಟ್ಟು ಮಾಫಿ ಸಾಕ್ಷಿಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Murder Case) ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಪ್ರಕರಣ 14ನೇ ಆರೋಪಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಲು (Approver) ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಎ14 ಪ್ರದೋಷ್ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ. ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಂದ ಒಪ್ಪಿಗೆ ಮೆಮೋ ಸಲ್ಲಿಕೆ ಮಾಡಲಾಗಿದೆ.
ಎಸ್ಪಿಪಿ ಅವರು ಕೆಲ ಷರತ್ತುಗಳಿಗೆ ಒಳಪಟ್ಟು ಒಪ್ಪಿಗೆ ಸೂಚಿಸಿದ್ದಾರೆ. ಆರೋಪಿ ಪ್ರದೋಷ್ಗೆ ಗೊತ್ತಿರೋ ಎಲ್ಲಾ ಸತ್ಯವನ್ನ ಹೇಳಬೇಕು. ಕೇವಲ ಆತನ ವಿರುದ್ಧ ಮಾತ್ರವಲ್ಲ ಉಳಿದ ಆರೋಪಿಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ವಿಷಯ ಹೇಳಬೇಕು ಎಂದು ಸೂಚನೆ ನೀಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ A14 ಪ್ರದೋಷ್ ಬೆನ್ನಲ್ಲೇ ಆರೋಪಿ 10 ವಿನಯ್ ಕೂಡ ಮಾಫಿ ಸಾಕ್ಷಿ ಆಗೋದಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆರೋಪಿ ವಿನಯ್ ಪರ ವಕೀಲ ರಂಗಾನಾಥ್ ರೆಡ್ಡಿ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸುವ ಮುನ್ನ ಕೆಲ ಕಾನೂನಾತ್ಮಕ ವಾದಕ್ಕೆ ಮನವಿ ಮಾಡಿದ್ರು. ಮಾಫಿ ಸಾಕ್ಷಿ ಅರ್ಜಿಯನ್ನು ಪ್ರಾಸಿಕ್ಯೂಷನ್ನಿಂದ ಸಲ್ಲಿಕೆ ಆಗಬೇಕು. ಆರೋಪಿಗಳಿಂದ ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆ ಆಗಬಾರದು. ಪ್ರಕರಣದಲ್ಲಿ ಯಾವ ಆರೋಪಿಯನ್ನ ಮಾಫಿ ಸಾಕ್ಷಿ ಮಾಡಬೇಕು ಎಂದು ಪ್ರಾಸಿಕ್ಯೂಷನ್ ನಿರ್ಧಾರ ಮಾಡಬೇಕು. ಯಾವುದೋ ಆರೋಪಿ ಸಲ್ಲಿಸಿದ ಮಾಫಿ ಸಾಕ್ಷಿ ಅರ್ಜಿಗೆ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಬಾರದು. ಆರೋಪಿಗಳ ಪಾತ್ರದ ಮೇಲೆ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ನಿರ್ಧಾರ ಮಾಡಬಹುದು ಎಂದು ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿದ್ರು.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka














