Last Updated:
ಉತ್ತರ ಪ್ರದೇಶದ ಫಿರೋಜಾಬಾದ್ ಶಿಕೋಹಾಬಾದ್ನಲ್ಲಿ ವಿರಾಜ್ ಅಲಿಯಾಸ್ ಜಿತೇಂದ್ರ ಅಮಾಯಕ ಮಗುವಿನ ಕೊಲೆ, ಸಿಸಿಟಿವಿ ವಿಡಿಯೋ ವೈರಲ್, ಪೊಲೀಸ್ ಎನ್ಕೌಂಟರ್ ತನಿಖೆ ಮುಂದುವರಿದಿದೆ.
ಒಂದೂವರೆ ವರ್ಷದ ಮಗುವನ್ನು (Child) ಹೊಂದಿದ್ದ ಮಹಿಳೆಯೊಂದಿಗೆ (Woman) ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ (Illegal Relationship) ಮಗುವನ್ನು ವ್ಯಕ್ತಿಯೋರ್ವ ಅಮಾನುಷವಾಗಿ ನಡುರಸ್ತೆಯಲ್ಲಿ ಬಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನ (Firozabad) ಶಿಕೋಹಾಬಾದ್ ನಗರದಲ್ಲಿ ನಡೆದಿದೆ. ಮಗುವನ್ನು ಕೊಲೆಗೈದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳಲ್ಲಿ (CCTV Video) ಸೆರೆಯಾಗಿದೆ.
ಸಿಸಿಟಿವಿ ವಿಡಿಯೋಗಳು ವೈರಲ್ ಆದ ಬಳಿಕ ಮಗುವಿನ ಕೊಲೆ ಮಾಡಿರೋದು ಬೆಳಕಿಗೆ ಬಂದಿದ್ದು, ಇದರಂತೆ ಕೂಡಲೇ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯ ಕಾಲಿಗೆ ಗುಂಡಿಟ್ಟಿದ್ದಾರೆ. ಪೊಲೀಸ್ ಎನ್ಕೌಂಟರ್ನಲ್ಲಿ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದು, ಆತನಿಗೆ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಪೊಲೀಸರು ನೀಡಿರುವ ವರದಿಯ ಅನ್ವಯ, ಬಂಧಿತ ಆರೋಪಿ ವಿರಾಜ್ ಅಲಿಯಾಸ್ ಜಿತೇಂದ್ರ ಎಂದು ಗುರುತಿಸಲಾಗಿದೆ. ಆರೋಪಿ ಬಳಿಯಿಂದ ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶದಾದ್ಯಂತ ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿರೋದಾಗಿ ಪೊಲೀಸರು ತಿಳಿಸಿರೋದಾಗಿ ಎಬಿಪಿ ಹಿಂದಿ ಸುದ್ದಿ ವಾಹಿನಿ ವರದಿ ಮಾಡಿದೆ.
ಪೊಲೀಸ್ ಎನ್ಕೌಂಟರ್
ಆರೋಪಿ ಹೇಳಿರುವಂತೆ ಮೃತ ಮಗುವಿನ ತಾಯಿಯೊಂದಿಗೆ ಆರೋಪಿ ಅಕ್ರಮ ಸಂಬಂಧವಿತ್ತಂತೆ. ಆದರೆ ಆಕೆಯೊಂದಿಗೆ ಮದುವೆಯಾಗಲು ಒಂದೂವರೆ ವರ್ಷದ ಮಗು ಅಡ್ಡಿಯಾಗಿತ್ತು ಎಂದು ಆರೋಪಿ ಕೃತ್ಯ ಎಸಗಿದ್ದನಂತೆ. ಶುಕ್ರವಾರ ಮಗುವಿನ ತಾಯಿಯ ಕುಟುಂಬಸ್ಥರೊಂದಿಗೆ ಮಾತನಾಡಲು ಬಂದಿದ್ದು, ಈ ವೇಳೆ ಮಗುವಿಗೆ ಚಾಕೋಲೇಟ್ ಖರೀದಿಸಿ ಕೊಡುವ ನೆಪದಲ್ಲಿ ಮಗುವನ್ನು ಮನೆಯಿಂದ ಕರೆದುಕೊಂಡು ಬಂದು, ನಡುರಸ್ತೆಗೆ ಬರುತ್ತಿದ್ದಂತೆ ಮಗುವನ್ನು ನೆಲಕ್ಕೆ 10ಕ್ಕೂ ಹೆಚ್ಚು ಬಾರಿ ಅಮಾನವೀಯವಾಗಿ ಬಡಿದು ಕೊಲೆ ಮಾಡಿದ್ದಾನೆ. ಆ ಬಳಿಕ ಏನು ಗೊತ್ತಿಲ್ಲ ಎಂಬಂತೆ ಮಗುವನ್ನು ಕರೆದುಕೊಂಡು ಹೋಗಿ, ಮಗು ನೆಲಕ್ಕೆ ಬಿದ್ದು ಗಾಯಗೊಂಡಿದೆ ಎಂದು ಕುಟುಂಬಸ್ಥರಿಗೆ ಹೇಳಿದ್ದನಂತೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದ್ದರಂತೆ.
ಸದ್ಯ ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿಸಿದ್ದು, ಆರೋಪಿ ನಗರದಲ್ಲಿ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್ ಪ್ರಸಾದ್, ಆರೋಪಿಯನ್ನು ಬಂಧನ ಮಾಡುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ದಾಳಿ ಮಾಡಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
Crime News: ಅಕ್ರಮ ಸಂಬಂಧಕ್ಕೆ ಅಡ್ಡಿ, ವರ್ಷದ ಮಗುವನ್ನು ನೆಲಕ್ಕೆ ಬಡಿದುಕೊಂದವನ ಕಾಲಿಗೆ ಗುಂಡಿಟ್ಟ ಪೊಲೀಸರು!













