Last Updated:
ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯದ ಪಿಳ್ಳೈಯಾರ್ ಗುಹೆಯಲ್ಲಿ ಸಿಲುಕಿ ಆಂಧ್ರ ಪ್ರದೇಶದ ಭಕ್ತ ಮಣಿಕುಮಾರ್ ಸಾವು. ಕುಟುಂಬಸ್ಥರ ಆಕ್ರಂದನ.
ತಮಿಳುನಾಡಿನ (Tamil Nadu) ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯದ (Arunachaleswarar Temple) ಬಳಿ ವಿಷಾದ ಘಟನೆಯೊಂದು ವರದಿಯಾಗಿದೆ. ಮೋಕ್ಷ ಮಾರ್ಗ ಎಂದೇ ಭಕ್ತರು ಭಾವಿಸಿರುವ ಇಲ್ಲಿನ ಪಿಳ್ಳೈಯಾರ್ ಗುಹೆಯಲ್ಲಿ (Idukku Pillaiyar) ಸಿಲುಕಿ ಆಂಧ್ರ ಪ್ರದೇಶ (Andhra Pradesh) ಮೂಲದ 36 ವರ್ಷದ ಭಕ್ತ ಮಣಿಕುಮಾರ್ ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರು, ಇತರ ಭಕ್ತರು ಆತನನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರು, ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ಘೋಷಣೆ ಮಾಡಿದ್ದರು.
ನ್ಯೂಸ್18 ತಮಿಳು ವರದಿ ಮಾಡಿರುವಂತೆ, ತಮಿಳುನಾಡಿನ ಪ್ರಸಿದ್ಧ ಅರುಣಾಚಲೇಶ್ವರ ಸ್ವಾಮಿ ಆಲಯದಲ್ಲಿ ದುರ್ಘಟನೆ ನಡೆದಿದೆ. ಗಿರಿಪ್ರದಕ್ಷಿಣೆ ಮಾರ್ಗದಲ್ಲಿರುವ ಇಡಕ್ಕು ಪಿಳ್ಳೈಯಾರ್ ದೇಗುಲದ ಗುಹೆಯಲ್ಲಿ ಸಿಲುಕಿ ಭಕ್ತನೋರ್ವ ಸಾವನ್ನಪ್ಪಿದ್ದಾನೆ. ಇದು ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ. ಆಂಧ್ರ ಪ್ರದೇಶದ ಮಣಿಕುಮಾರ್ ಶುಕ್ರವಾರ ರಾತ್ರಿ ಕುಟುಂಬದೊಂದಿಗೆ ತಿರುವಣ್ಣಾಮಲೈನ ಶ್ರೀ ಉನ್ನಾಮುಲಮ್ಮನ್ ಸಮೇತ ಅರುಣಾಚಲೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದ್ದರು. ಆ ಬಳಿಕ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಗಿರಿಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ, ಮಾರ್ಗದಲ್ಲಿದ್ದ ಪಿಳ್ಳೈಯಾರ್ ದೇವಾಲಯಕ್ಕೆ ತೆರಳಿದ್ದರು. ಇದನ್ನು ಭಕ್ತರು ಮೋಕ್ಷ ಮಾರ್ಗ ಅಂತಲೇ ಭಾವಿಸುತ್ತಾರೆ.
ಈ ಗುಹೆಯ ಆಕಾರದ ದೇವಾಲಯದಲ್ಲಿ, ಭಕ್ತರು ಮಲಗಿ, ಕಿರಿದಾದ ದಾರಿಯ ಮೂಲಕ ತೆವಳುತ್ತಾ ಹಿಂಬಾಗಿಲಿನ ಮೂಲಕ ಪ್ರವೇಶಿಸುತ್ತಾರೆ. ಆದರೆ, ಮಣಿಕುಮಾರ್ ದಪ್ಪವಿದ್ದ ಕಾರಣ ಗುಹೆಯ ಮಧ್ಯದಲ್ಲಿ ಸಿಲುಕಿಕೊಂಡರು. ಕುಟುಂಬ ಸದಸ್ಯರು ಮತ್ತು ಇತರ ಭಕ್ತರು ಅವನನ್ನು ಹೊರಗೆಳೆಯಲು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು. ಇದರೊಂದಿಗೆ ಆತನಿಗೆ ಉಸಿರಾಡಲು ಕಷ್ಟಸಾಧ್ಯವಾಗಿ ಪ್ರಜ್ಞೆ ತಪ್ಪಿದ್ದನಂತೆ. ಇದರೊಂದಿಗೆ ಇತರ ಭಕ್ತರು, ಕುಟುಂಬ ಸದಸ್ಯರೊಂದಿಗೆ ಸೇರಿ ಆತನನ್ನು ಗುಹೆಯಿಂದ ಹೊರತೆಗೆದಿದ್ದು, ಕೂಡಲೇ 108 ಆ್ಯಂಬುಲೆನ್ಸ್ ಕರೆ ಮಾಡಿ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆದರೆ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿಯೇ ಭಕ್ತ ಸಾವನ್ನಪ್ಪಿರೋದಾಗಿ ವೈದ್ಯರು ಹೇಳಿದ್ದರು. ಇದರೊಂದಿಗೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯದ ಗಿರಿಪ್ರದಕ್ಷಿಣ ಮಾರ್ಗದಲ್ಲಿರುವ ಇಡುಕ್ಕು ಪಿಳ್ಳೈಯಾರ್ ದೇವಾಲಯವು ಒಂದು ಸಣ್ಣ ಗುಹೆಯ ಆಕಾರದಲ್ಲಿದೆ. ಭಕ್ತರು ಹಿಂಭಾಗದಲ್ಲಿರುವ ಪ್ರವೇಶದ್ವಾರದ ಮೂಲಕ ಮಲಗಿ, ಕಿರಿದಾದ ಗುಹೆಯ ಮೂಲಕ ತೆವಳುತ್ತಾ ಮತ್ತು ಎದುರಿನ ಪ್ರವೇಶದ್ವಾರದ ಮೂಲಕ ನಿರ್ಗಮಿಸುವ ಮೂಲಕ ದೇವಾಲಯಕ್ಕೆ ಪ್ರವೇಶಿಸುತ್ತಾರೆ. ಗುಹೆಯಿಂದ ಹೊರಗೆ ಬಂದ ನಂತರ ನಂದಿ ಮತ್ತು ಇಡುಕ್ಕು ಪಿಳ್ಳೈಯಾರ್ ಅವರ ದರ್ಶನ ಪಡೆದುಕೊಳ್ಳುವುದು ವಾಡಿಕೆ. ಈ ಆಚರಣೆಯ ಸಮಯದಲ್ಲಿ ಮಣಿಕುಮಾರ್ ಗುಹೆಯಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.














