Last Updated:
ಚಿತ್ರೀಕರಣ ಸಲಕರಣೆಗಳ ಹಣವನ್ನು ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ತಮಿಳು ನಟ ಆರ್ಯ ವಿರುದ್ಧ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ (Actor Arya) ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲಯಾಳಂ ಸಿನಿಮಾ ಅನಂತನ್ ಕಾಡು (Ananthan Kadu) ಚಿತ್ರೀಕರಣಕ್ಕಾಗಿ ಬಾಡಿಗೆಗೆ ಪಡೆದಿದ್ದ ಚಿತ್ರೀಕರಣ ಸಲಕರಣೆಗಳ ಹಣವನ್ನು ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ನಟನ ವಿರುದ್ಧ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, 2025ರ ಫೆಬ್ರುವರಿಯಲ್ಲಿ ಹೈದರಾಬಾದ್ ಮೂಲದ ತಾಹೆರ್ ಸಿನಿ ಟೆಕ್ನಿಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಅನಂತನ್ ಕಾಡು ಚಿತ್ರದ ಚಿತ್ರೀಕರಣಕ್ಕಾಗಿ ಉನ್ನತ ದರ್ಜೆಯ ಡಿಜಿಟಲ್ ಕ್ಯಾಮೆರಾಗಳು ಹಾಗೂ ಲೈಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.
ಸಿನಿಮಾದ ಚಿತ್ರೀಕರಣಕ್ಕಾಗಿ ಅಗತ್ಯವಿದ್ದ ಎಲ್ಲಾ ತಾಂತ್ರಿಕ ಉಪಕರಣಗಳನ್ನು ಸಂಸ್ಥೆಯೇ ತನ್ನ ವೆಚ್ಚದಲ್ಲಿ ಹೈದರಾಬಾದ್ನಿಂದ ಕೇರಳದ ವಿವಿಧ ಚಿತ್ರೀಕರಣ ಸ್ಥಳಗಳಿಗೆ ಸಾಗಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡ ಬಳಿಕ ಬಾಡಿಗೆ ಮೊತ್ತವನ್ನು ಪಾವತಿಸುವ ಭರವಸೆಯನ್ನೂ ನಿರ್ಮಾಣ ತಂಡ ನೀಡಿತ್ತು ಎನ್ನಲಾಗಿದೆ.
ಬಾಕಿ ಹಣ ಪಾವತಿಸಲು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ. ಈ ಬೆಳವಣಿಗೆ ಬಳಿಕ ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದೆ.
ತಾಹೆರ್ ಸಿನಿ ಟೆಕ್ನಿಕ್ಸ್ ಸಂಸ್ಥೆಯ ಅಕೌಂಟೆಂಟ್ ಜಾವೇದ್ ಅಲಿ ಸಲ್ಲಿಸಿರುವ ದೂರಿನಲ್ಲಿ, ಸಿನಿಮಾ ಬಿಡುಗಡೆಯಾಗುವ ಮುನ್ನ ಬಾಕಿ ಉಳಿದಿರುವ ಸಂಪೂರ್ಣ ಮೊತ್ತವನ್ನು ಪಾವತಿಸಿ, ಸಲಕರಣೆ ಪೂರೈಕೆದಾರರಿಂದ ನೋ ಡ್ಯೂಸ್ ಪ್ರಮಾಣಪತ್ರ ಪಡೆಯುವುದಾಗಿ ನಿರ್ಮಾಣ ತಂಡ ಭರವಸೆ ನೀಡಿತ್ತು ಎಂದು ಹೇಳಲಾಗಿದೆ.
ಬಾಕಿ ಹಣದ ಬಗ್ಗೆ ವಿಚಾರಿಸಲು ಸಂಸ್ಥೆಯ ವ್ಯವಸ್ಥಾಪಕರು ತೆರಳಿದ ವೇಳೆ ನಟ ಆರ್ಯ, ನಿರ್ಮಾಪಕ ವಿನೋದ್ ಸದರು ಹಾಗೂ ಆರ್ಯ ಅವರ ಆಪ್ತ ಸಹಾಯಕ ಕಿಶೋರ್ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನೂ ದೂರುದಾರರು ಮಾಡಿದ್ದಾರೆ.
ಇದಲ್ಲದೆ, ವಿವಾದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸದೇ ಕೇರಳದ ನ್ಯಾಯಾಲಯದಿಂದ ಮಧ್ಯಂತರ ಆದೇಶಗಳನ್ನು ಪಡೆದುಕೊಳ್ಳಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಸೇರಿಸಲಾಗಿದೆ.
ದೂರಿನ ಆಧಾರದ ಮೇಲೆ ಜುಬಿಲಿ ಹಿಲ್ಸ್ ಪೊಲೀಸರು ನಟ ಆರ್ಯ, ನಿರ್ಮಾಪಕ ವಿನೋದ್ ಸದರು ಹಾಗೂ ಕಿಶೋರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಂಚನೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.
Bangalore [Bangalore],Bangalore,Karnataka














