Last Updated:
Anna Hazare: ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಹಜಾರೆ, ‘ಯಾವುದೇ ಚಳುವಳಿ ಅಥವಾ ಸಾರ್ವಜನಿಕ ಸಮಸ್ಯೆಗೆ ಪರಿಹಾರವು ಹಿಂಸಾಚಾರದಲ್ಲಿಲ್ಲ, ಬದಲಾಗಿ ಸಂಭಾಷಣೆ ಮತ್ತು ಶಾಂತಿಯುತ ವಿಧಾನಗಳಲ್ಲಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Protest) ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸಿ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ (CJP Protest) ಕೊನೆಗೊಂಡಿದೆ. ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಈಡೇರಿದೆ, ಉಳಿದ ಬೇಡಿಕೆಗಳನ್ನು ಈಡೇರಿಸುವುದಾಗ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಈತನ್ಮಧ್ಯೆ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಅಣ್ಣಾ ಹಜಾರೆ, ‘ಯಾವುದೇ ಚಳುವಳಿ ಅಥವಾ ಸಾರ್ವಜನಿಕ ಸಮಸ್ಯೆಗೆ ಪರಿಹಾರವು ಹಿಂಸಾಚಾರದಲ್ಲಿಲ್ಲ, ಬದಲಾಗಿ ಸಂಭಾಷಣೆ ಮತ್ತು ಶಾಂತಿಯುತ ವಿಧಾನಗಳಲ್ಲಿದೆ ಎಂದು ಅವರು ಹೇಳಿದ್ದಾರೆ. ತಮ್ಮದೇ ಆದ ಪ್ರತಿಭಟನೆಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಅಣ್ಣಾ ಹಜಾರೆ, ಪ್ರಜಾಪ್ರಭುತ್ವದಲ್ಲಿ ಸಂಭಾಷಣೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು.
ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ ಎಂದು ಹೇಳಿರುವ ಅಣ್ಣಾ ಹಜಾರೆ, ಸಾರ್ವಜನಿಕ ಸಮಸ್ಯೆಗಳನ್ನು ಯಾವಾಗಲೂ ಚರ್ಚೆ, ಸಂವಾದ ಮತ್ತು ಪ್ರಜಾಪ್ರಭುತ್ವ ವಿಧಾನಗಳ ಮೂಲಕ ಪರಿಹರಿಸಬೇಕು. ಯಾವುದೇ ಚಳುವಳಿಯಲ್ಲಿ ಹಿಂಸೆ ಸೂಕ್ತವಲ್ಲ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಶಾಂತಿಯುತ ಪ್ರತಿಭಟನೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಅಣ್ಣಾ ಹಜಾರೆ ಅವರು ತಮ್ಮ ಜೀವನದಲ್ಲಿ ಸಾರ್ವಜನಿಕ ಕಲ್ಯಾಣಕ್ಕಾಗಿ 22 ಬಾರಿ ಉಪವಾಸ ಮಾಡಿದ್ದೇನೆ, ಆದರೆ ಎಂದಿಗೂ ಹಿಂಸಾಚಾರಕ್ಕೆ ಇಳಿಯಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಅಹಿಂಸಾತ್ಮಕ ಮತ್ತು ಶಿಸ್ತುಬದ್ಧ ಪ್ರತಿಭಟನೆಗಳ ಒತ್ತಡವು ದೇಶದಲ್ಲಿ 10 ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಕಾರಣವಾಯಿತು ಎಂದು ವಿವರಿಸಿರುವ ಅವರು, ಪ್ರತಿಭಟನೆಗಳನ್ನು ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ನಡೆಸಿದರೆ, ಅವು ಸರ್ಕಾರದ ಮೇಲೆ ಪ್ರಭಾವ ಬೀರಬಹುದು ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂದು ಹೇಳಿದರು.
ಅಧಿಕಾರದಲ್ಲಿರುವವರು ಮೊದಲು ಜನರ ನಿಜವಾದ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ಆಡಳಿತಕ್ಕೆ ಸಲಹೆ ನೀಡಿರುವ ಅಣ್ಣಾ ಹಜಾರೆ, ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಎರಡು ಹೆಜ್ಜೆ ಮುಂದಿಡಬೇಕಾದರೆ, ಅದು ಹಾಗೆ ಮಾಡಲು ಹಿಂಜರಿಯಬಾರದು, ಸರ್ಕಾರದ ಉದ್ದೇಶ ಯಾವಾಗಲೂ ಸಾರ್ವಜನಿಕ ಕಲ್ಯಾಣವಾಗಿರಬೇಕು ಎಂದು ಅವರು ಹೇಳಿದರು.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ರಾಜೀನಾಮೆ ನಂತರ ಯಾರು ಗೆಲ್ಲುತ್ತಾರೆ ಮತ್ತು ಯಾರು ಸೋಲುತ್ತಾರೆ ಎಂಬುದು ಅತ್ಯಂತ ಮುಖ್ಯವಾದ ವಿಷಯ ಎಂದು ತಾಔಉ ನಂಬುವುದಿಲ್ಲ ಎಂದು ಹೇಳಿದರು. ಸಮಾಜದ ಒಳಿತಿಗಾಗಿ ಸಾಧ್ಯವಾದಷ್ಟು ಕೆಲಸ ಮಾಡುವುದನ್ನು ಮುಂದುವರಿಸುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳಿರುವ ಹಜಾರೆ, ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ಹಿಂಸಾಚಾರವನ್ನು ಆಶ್ರಯಿಸುವುದು ಸೂಕ್ತವಲ್ಲ ಎಂದು ಅಣ್ಣಾ ಹಜಾರೆ ಸ್ಪಷ್ಟವಾಗಿ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಿರಂತರವಾಗಿ ತೀವ್ರಗೊಳ್ಳುತ್ತಿತ್ತು. ಕಳೆದ ಒಂದು ವಾರದಿಂದ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರತಿಭಟನೆಗಳಲ್ಲಿ ಸೇರಿಕೊಂಡಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, ಪ್ರತಿಭಟನಾಕಾರರು ಜಂತರ್ ಮಂತರ್ನಲ್ಲಿ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದರು, ತಮ್ಮ ಪ್ರಮುಖ ಬೇಡಿಕೆ ಈಡೇರಿದೆ ಎಂದು ಹೇಳಿಕೊಂಡರು. ಇದರ ನಂತರ, ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಿದ್ದಾರೆ.
New Delhi,Delhi
Jul 26, 2026 11:23 AM IST














