ಗುಡ್ಡ ಕುಸಿಯುವ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲ್ಲಾಡಿ ಸುರಂಗ ಕಾಮಗಾರಿ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆಯಲ್ಲಿದ್ದ ವಾಹನಗಳು ಕೊಚ್ಚಿಕೊಂಡು ಹೋಗಿದೆ. ಅಲ್ಲದೇ ಕೆಲವು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಕೆಸರು ಮಿಶ್ರಿತ ಕಲ್ಲುಗಳು ಮನೆಗೆ ಬಂದು ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಭೀಕರ ಭೂ ಕುಸಿತದಿಂದ ಮೀನಾಕ್ಷಿ ಸೇತುವೆಗೆ ಸಂಪೂರ್ಣ ಹಾನಿಯಾಗಿದ್ದು, ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಇನ್ನು, ಈ ಘಟನೆಯಲ್ಲಿ 9 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದ್ದು, ಮೇಪಾಡಿಯ ವಿಮ್ಸ್ ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚುವರಿ ಚಿಕಿತ್ಸೆ ಬೇಕಾದರೆ ಕ್ಯಾಲಿಕಟ್ ಮೆಡಿಕಲ್ ಕಾಲೇಜಿಗೆ ರವಾನಿಸಲು ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ಸೂಚನೆ ನೀಡಿದ್ದಾರೆ.
ಹರಿ ಕುಮಾರ್ (32), ದಿಲೀಪ್ (19), ಸೂರಜ್ ಯಾದವ್ (25), ಸಂಜಯ್ ಠಾಕೂರ್ (35), ರಜನೀಶ್ (27), ತನ್ಮಯ್ ಘೋಷ್ (28), ಕುಪಮಾಲ್ (37), ಕುಂಚು (39), ಸಂತೋಷ್ ಕುಮಾರ್
ವಯನಾಡಿನಲ್ಲಿ ಪದೇ ಪದೇ ಭೂಕುಸಿತಕ್ಕೆ ಕಾರಣ ಅದರ ಭೌಗೋಳಿಕ ಲಕ್ಷಣ ಎಂದು ಹೇಳಲಾಗಿದೆ. ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದಲ್ಲಿ ರಾಜ್ಯದ ಸುಮಾರು 17,000 ಚದರ ಕಿಲೋಮೀಟರ್ ಪ್ರದೇಶವನ್ನು ಭೂಕುಸಿತಕ್ಕೆ ಹೆಚ್ಚು ಒಳಗಾಗುವ ಪ್ರದೇಶವೆಂದು ಗುರುತಿಸಲಾಗಿದೆ.
ಡೆಕ್ಕನ್ ಪ್ರಸ್ಥಭೂಮಿಯ ದಕ್ಷಿಣದಲ್ಲಿರುವ, ವಯನಾಡ್ ಜಿಲ್ಲೆ ಭೂಕುಸಿತಗಳಿಂದ ಅತ್ಯಂತ ಹೆಚ್ಚು ಹಾನಿಗೊಳಗಾಗುತ್ತದೆ. ಅಲ್ಲದೇ ವಯನಾಡು ಜಿಲ್ಲೆಯು ಭೂಕಂಪಗಳಿಗೆ ವಲಯ III ರ ಅಡಿಯಲ್ಲಿ ಬರುತ್ತದೆ, ಅಂದರೆ ಇದು ಭೂಕಂಪನ ಹಾನಿಯ ಮಧ್ಯಮ ಅಪಾಯವನ್ನು ಎದುರಿಸುತ್ತದೆ. ಭೂ ವಿಜ್ಞಾನ ಅಧ್ಯಯನ ಕೇಂದ್ರದ (CESS) ತಜ್ಞರು ವಯನಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶಗಳನ್ನು ಹೆಚ್ಚು ಸೂಕ್ಷ್ಮ ಮತ್ತು ವಿಪತ್ತು ಪೀಡಿತ ಎಂದು ಗುರುತು ಮಾಡಿದ್ದಾರೆ.
2011 ರ ಮಾಧವ್ ಗಾಡ್ಗೀಳ್ ಸಮಿತಿ ವರದಿಯ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ವಿನಾಶದ ಹೆಚ್ಚಿನ ಭಾಗವನ್ನು ಕಡಿಮೆ ಮಾಡಬಹುದಿತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ವರದಿಯಲ್ಲಿ ಪಶ್ಚಿಮ ಘಟ್ಟಗಳ ದೊಡ್ಡ ಭಾಗಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಸ್ಪಷ್ಟವಾಗಿ ವರ್ಗೀಕರಿಸಿತ್ತು, ಈ ದುರ್ಬಲ ಬೆಟ್ಟಗಳಲ್ಲಿ ಮೂಲಸೌಕರ್ಯ ಯೋಜನೆಗಳು ಮತ್ತು ಕಲ್ಲುಗಣಿಗಾರಿಕೆ ಮಾಡದಂತೆ ವಾರ್ನಿಂಗ್ ಕೊಡಲಾಗಿತ್ತು. ಆದ್ರೆ, ಎಚ್ಚರಿಕೆ ನೀಡಿದ್ರು ಗುಡ್ಡಗಾಡು ಪ್ರದೇಶದಲ್ಲಿ ರೆಸಾರ್ಟ್ಗಳ ನಿರ್ಮಿಸಲಾಗಿದೆ.
ಭೂ ಕುಸಿತದ ದುಸ್ವಪ್ನ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿಲ್ಲ, ಕರ್ನಾಟಕದಲ್ಲೂ ಭೀಕರ ಭೂಕುಸಿತ ಸಂಭವಿಸಿ ಹಲವಾರು ಜೀವಗಳನ್ನು ಬಲಿ ಪಡೆದಿದೆ. ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗಿರೋ ಉದಾಹರಣೆಗಳಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಭೂ ಕುಸಿತ ಸಂಭವಿಸಿತ್ತು. ಈ ದುರಂತ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಇನ್ನು, 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತ ಇಡೀ ರಾಜ್ಯವನ್ನು ಮಾತ್ರವಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ದುರ್ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭೂಕುಸಿತ ಪರಿಣಾಮ ಎಷ್ಟಿತ್ತೆಂದರೆ, ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದವು.












