ಕಾಂಗ್ರೆಸ್ನಲ್ಲಿ ಈ ಬಾರಿ ದೊಡ್ಡ ದೊಡ್ಡ ಹುದ್ದೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿದ್ದು ಕೆಳಗಿಳೀತಿದ್ದಂತೆ ಡಿಸಿಎಂ ಆಸೆ ಬಹುತೇಕರಲ್ಲಿ ಚಿಗುರೊಡೆದಿದೆ. ಮೂರು ವರ್ಷದಿಂದ ಡಿಕೆ ಅಧಿಕಾರದಲ್ಲಿದ್ದ ಹುದ್ದೆಗೆ ಡಜನ್ ನಾಯಕರು ಬೇಡಿಕೆ ಇಟ್ಟಿದ್ದಾನೆ. ಉಪಮುಖ್ಯಮಂತ್ರಿ ಆಗೋದಕ್ಕೆ ಸರಥಿ ಸಾಲು ಹಚ್ಚಿದ್ದು, ಒಬ್ಬರ ಮೇಲೊಬ್ಬರಂತೆ ಮನದ ಮಾತನ್ನ ಬಿಚ್ಚಿಡ್ತಿದ್ದಾರೆ. ಸಿದ್ದು ಆಡಳಿತದಲ್ಲಿ ಸ್ಪೀಕರ್ ಆಗಿದ್ದ ಯುಟಿ ಖಾದರ್, ಈ ಬಾರಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳೊ ಆಸೆಯಲ್ಲಿದ್ದಾರೆ. ಡಿಕೆಶಿ ಸಂಪುಟದಲ್ಲಿ ಮಂತ್ರಿ ಮಾಡೋದಕ್ಕೆ ಹೈಕಮಾಂಡ್ ಮನಸ್ಸು ಮಾಡಿದೆ. ಆದ್ರೆ, ಖಾದರ್ ಮಂತ್ರಿಗಿರಿ ಜೊತೆಗೆ ಅಲ್ಪಸಂಖ್ಯಾತರ ಕೋಟಾದಲ್ಲಿ ಡಿಸಿಎಂ ಹುದ್ದೆಗೂ ಪೈಪೋಟಿ ನಡೆಸ್ತಿದ್ದಾರಂತೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಭಾವಿ ಖಾತೆ ನಿರ್ವಹಿಸಿದ್ದ ಈಶ್ವರ್ ಖಂಡ್ರೆ, ಈ ಬಾರಿ ದೊಡ್ಡ ಹುದ್ದೆಗೇರೋ ಕಾತರದಲ್ಲಿದ್ದಾರೆ. ಈ ಬಗ್ಗೆ ನ್ಯೂಸ್18 ಜೊತೆ ಮಾತನಾಡಿದ ಈಶ್ವರ್ ಖಂಡ್ರೆ, ವೀರಶೈವ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡ್ಬೇಕು. ಯಾಕಂದ್ರೆ, ನಮ್ಮ ಸಮುದಾಯದಿಂದ 36 ಮಂದಿ ಶಾಸಕರಾಗಿದ್ದಾರೆ. ಹೀಗಾಗಿ KPCC ಅಧ್ಯಕ್ಷ ಸ್ಥಾನ ಇಲ್ಲವೇ, ಡಿಸಿಎಂ ಹುದ್ದೆ ನೀಡ್ಬೇಕು ಅಂತಾ ಆಗ್ರಹಿಸಿದ್ದಾರೆ.
ಯಾವಾಗ ಈಶ್ವರ್ ಖಂಡ್ರೆ ಡಿಸಿಎಂ ಸ್ಥಾನಕ್ಕೆ ರೇಸ್ಗಿಳಿದ್ರೋ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಖಂಡ್ರೆಗೆ ಡಿಸಿಎಂ ಸ್ಥಾನ ನೀಡುವಂತೆ ಬೀದರ್ನ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ. ಭಾಲ್ಕಿ ತಾಲೂಕಿನ ಖಾನಾಪುರ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 51 ತೆಂಗಿನಕಾಯಿ ಒಡೆದಿದ್ದಾರೆ.
ಅಹಿಂದ ಉತ್ತರಾಧಿಕಾರಿ ಅಂತಾ ಹೇಳ್ಕೊಳ್ತಿರೋ ಸತೀಶ್ ಜಾರಕಿಹೊಳಿ ಜಗಜಟ್ಟಿ ಪಟ್ಟನ್ನ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿಗಿರಿಗೆ ಇನ್ನಿಲ್ಲದ ಲಾಬಿ ಮಾಡ್ತಿದ್ದಾರೆ. ಒಂದ್ವೇಳೆ ಮಂತ್ರಿ ಸ್ಥಾನ ಕೈತಪ್ಪಿದ್ರೆ ಜಿಲ್ಲೆಯ ಮೇಲೆ ಹಿಡಿತ ತಪ್ಪಿದಂತಾಗುತ್ತೆ ಅಂತಾ ರಣತಂತ್ರ ರೂಪಿಸ್ತಿದ್ದಾರೆ. ಈಗಾಗ್ಲೇ ಮಂತ್ರಿಗಿರಿ ರೇಸ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸವದಿ ಮುಂಚೂಣಿಯಲ್ಲಿದ್ದಾರೆ. ಸತೀಶ್ಗೆ ಮಂತ್ರಿ ಸ್ಥಾನ ತಪ್ಪಿದ್ರೆ ಡಿಕೆಶಿ ಆಪ್ತರ ಎಂಟ್ರಿಯಾಗ್ತಾರೆ. ಇದರಿಂದ ಜಿಲ್ಲೆಯಲ್ಲಿ ಹಿಡಿತ ಕಮ್ಮಿ ಆಗುತ್ತೆ ಅನ್ನೋ ಆತಂಕ ಜಾರಕಿಹೊಳಿಯನ್ನ ಕಾಡ್ತಿದೆ.
ಡಿಕೆಶಿ ಸರ್ಕಾರದಲ್ಲಿ ಮೂರ್ನಾಲ್ಕು ಮಂದಿಯನ್ನ ಡಿಸಿಎಂ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಒನ್ ಮ್ಯಾನ್ ಒನ್ ಪೋಸ್ಟ್ ಬಗ್ಗೆ ಚರ್ಚೆ ಆಗ್ತಿದೆ. ಮೂರ್ನಾಲ್ಕು ಜನರನ್ನ ಡಿಸಿಎಂ ಮಾಡೋದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡ್ತಾರೋ ಗೊತ್ತಿಲ್ಲ. ನಮ್ಮದೇನೂ ಡಿಮ್ಯಾಂಡ್ ಇಲ್ಲ ಎಂದಿದ್ದಾರೆ.
ಡಿಕೆಶಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ರಚನೆಯಾಗುತ್ತೆ. ನಾವೇ ಡಿಸಿಎಂ ಆಗ್ತೀವಿ ಅಂತಾ ಒಂದಿಷ್ಟು ಮಂದಿ ಪಟ್ಟು ಹಿಡಿದು ಕೂತಿದ್ದಾರೆ. ಇದು ಹೈಕಮಾಂಡ್ಗೂ ತಲೆನೋವಾಗಿದೆ. ಹೀಗಾಗಿ ಅನಗತ್ಯ 4 ಪವರ್ ಸೆಂಟರ್ ಬೇಡ ಅನ್ನೋ ಲೆಕ್ಕಾಚಾರ ನಡೀತಿದ್ಯಂತೆ. ಡಿಸಿಎಂ ಸ್ಥಾನ ರಚನೆಗೆ ಹೈಕಮಾಂಡ್ ಜೊತೆಗೆ ಡಿಕೆಶಿಗೂ ಒಲವಿಲ್ವಂತೆ. ಒಂದ್ವೇಳೆ ಡಿಸಿಎಂ ಸ್ಥಾನ ರಚಿಸಿದ್ರೆ ಹಿರಿಯ ಸಚಿವರ ಕೋಪಕ್ಕೆ ಗುರಿಯಾಗ್ಬೇಕಾಗುತ್ತೆ ಅಂತಾ ಅಎಳದು ತೂಗಿ ಹೊಸ ಲೆಕ್ಕಾಚಾರ ಹಾಕ್ತಿದ್ದಾರೆ.
ಕೆಪಿಸಿಸಿ ಸ್ಥಾನದ ಮೇಲೆ ಕಾಂಗ್ರೆಸ್ನ ಘಟಾನುಘಟಿಗಳೇ ಕಣ್ಣಿಟ್ಟಿದ್ದಾರೆ. ಈ ಸ್ಥಾನದ ಜೊತೆಗೆ ಮಂತ್ರಿಗಿರಿಯೂ ಬೇಕು ಅಂತಾ ಬೇಡಿಕೆ ಶುರು ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಒಬಿಸಿ ನಾಯಕರಾಗಿರೋ ಬಿ.ಕೆ ಹರಿಪ್ರಸಾದ್ಗೆ ಪಟ್ಟ ಕಟ್ಟೋದಕ್ಕೆ ಹೈಕಮಾಂಡ್ ಒಲವು ತೊರಿಸಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಡಿಕೆಶಿ ಪದಗ್ರಹಣಕ್ಕೆ ಕೌಂಟ್ಡೌನ್ ಶುರುವಾಗಿರೋ ಹೊತ್ತಲ್ಲೇ ಸಿದ್ದು ಮೌನಕ್ಕೆ ಜಾರಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಮೇಲೆ ಎಲ್ಲೂ ಮಾತಾಡಿಲ್ಲ. ಇದೇ ಹೊತ್ತಲ್ಲೇ ಈಗ ಕಾವೇರಿ ನಿವಾಸದಲ್ಲಿ ಸಿದ್ದು ಮಹತ್ವದ ಸಭೆ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಭೈರತಿ ಸುರೇಶ್, ಜಾರ್ಜ್, ಹೆಚ್.ಕೆ ಪಾಟೀಲ್, ಜಮೀರ್ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.
ಯಾವಾಗ ಮಂತ್ರಿಗಿರಿ ಕುಸ್ತಿ ಶುರುವಾಯ್ತೋ ಕಾಂಗ್ರೆಸ್ನ ಬಹುತೇಕ ಶಾಸಕರು ಕುರ್ಚಿ ಆಸೆ ಬಿಚ್ಚಿಡ್ತಿದ್ದಾರೆ. ನಾವು ಕೂಡಾ ಮಂತ್ರಿಸ್ಥಾನದ ಅಕಾಂಕ್ಷಿಗಳು ಅಂತಾ ತಮ್ಮ ಮನದಾಳದ ಮಾತನ್ನ ಹೊರ ಹಾಕ್ತಿದ್ದಾರೆ. ಒಟ್ನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕುರ್ಚಿ ಪೈಪೋಟಿ ಜೋರಾಗಿದ್ದು, ಯಾರಿಗೆ ಅದೃಷ್ಟ ಖುಲಾಯಿಸುತ್ತೋ ಕಾದು ನೋಡ್ಬೇಕು. (ವರದಿ: ಬ್ಯೂರೋ ರಿಪೋರ್ಟ್ ನ್ಯೂಸ್18)












