Last Updated:
ಐಪಿಎಲ್ ಪ್ಲೇ ಆಫ್ಸ್ ವೇಳಾಪಟ್ಟಿ ಹೊರಬಂದಿದೆ, ಫೈನಲ್ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್, ನಿಖಿಲ್ ಕುಮಾರಸ್ವಾಮಿ ಟಿಕೆಟ್ ವ್ಯಾಮೋಹ ಆರೋಪ, ಡಿಕೆ ಶಿವಕುಮಾರ್ ತಳ್ಳಿ ಹಾಕಿದ್ದಾರೆ.
ಬೆಂಗಳೂರು: ಐಪಿಎಲ್ 19ನೇ ಆವೃತ್ತಿ ಫೈನಲ್ (IPL 2026 Final) ಹಾಗೂ ಎಲಿಮಿನೇಟರ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. BCCI ಪ್ಲೇ ಆಫ್ಸ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಮೇ 26 ರಂದು ಧರ್ಮಶಾಲಾ ಮೈದಾನದಲ್ಲಿ (Dharamshala Stadium) ನಡೆಯಲಿದೆ. ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2 ಪಂದ್ಯ ಮೇ 27 ಹಾಗೂ ಮೇ 29 ರಂದು ನ್ಯೂ ಚಂಡೀಗಢದ ಮೈದಾನದಲ್ಲಿ (Chandigarh Stadium) ನಡೆಯಲಿದೆ. ಇನ್ನು ಫೈನಲ್ ಪಂದ್ಯ ಮೇ 31 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಇದರ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ಗೆ ಶಿಫ್ಟ್ ಆಗಿರೋದು ರಾಜಕೀಯ ವಾಕ್ ಸಮರಕ್ಕೆ ಕಾರಣವಾಗಿದೆ. ಈ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಶಾಸಕರ ವಿವಿಐಪಿ ಟಿಕೆಟ್ ವ್ಯಾಮೋಹವೇ ಪಂದ್ಯ ಸ್ಥಳಾಂತರವೆಂದು ಆರೋಪಿಸಿದ್ದಾರೆ.
ಐಪಿಎಲ್ ಟೂರ್ನಿಯ ಆರಂಭದಲ್ಲಿ ವಿಧಾನಸಭೆಯಲ್ಲಿಯೇ ಶಾಸಕರು ಉಚಿತ ಟಿಕೆಟ್ಗೆ ಬೇಡಿಕೆ ಇಟ್ಟಿದ್ದರು. ವಿಧಾನ ಸಭೆಯಲ್ಲಿ ಈ ವಿಚಾರವನ್ನು ಎಂಎಲ್ಎ ವಿಜಯಾನಂದ ಕಾಶಪ್ಪನವರ್ ಪ್ರಸ್ತಾಪಿಸಿದ್ದರು. ಇದಕ್ಕೆ ಪಕ್ಷಾತೀತವಾಗಿ ಹಲವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಸ್ವತಃ ಜೆಡಿಎಸ್ ಪಕ್ಷದ ಎಂಎಲ್ಸಿ ಯಿಂದಲೂ ಟಿಕೆಟ್ಗೆ ಬೇಡಿಕೆ ಕೇಳಿ ಬಂದಿತ್ತು. ಜೆಡಿಎಸ್ ಪರಿಷತ್ ಸದಸ್ಯ ಶರವಣ ಅವರು ಕೂಡ ವಿಐಪಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ರು. ಆದರೆ ಈಗ ಈ ವಿಚಾರ ಪ್ರಸ್ತಾಪಿಸಿ ನಿಖಿಲ್ ಕುಮಾರ್ ಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪೋಸ್ಟ್
ಇನ್ನು, ಶಾಸಕರಿಂದ ಐಪಿಎಲ್ ಟಿಕೆಟ್ ಬೇಡಿಕೆಯಿಂದಾಗಿ ಬೆಂಗಳೂರಿನಿಂದ RCB ಪ್ಲೇ ಆಫ್ ಪಂದ್ಯ ಅಹಮದಾಬಾದ್ಗೆ ಶಿಫ್ಟ್ ಮಾಡಲಾಗಿದೆ ಅಂತ ಚರ್ಚೆಯಾಗ್ತಿದೆ. ಈ ಕುರಿತು ಪ್ರತಿಕ್ರಿಯಿಸಿರೋ ಡಿಸಿಎಂ ಡಿಕೆ ಶಿವಕುಮಾರ್, ಈ ಆರೋಪಗಳೆಲ್ಲಾ ಸುಳ್ಳು, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ದೊಡ್ಡ ಸ್ಟೇಡಿಯಂ, ಒಂದು ಲಕ್ಷ ಜನ ಸೇರಬಹುದು ಅಂತ ಶಿಫ್ಟ್ ಮಾಡಿರಬಹುದು ಅಷ್ಟೇ ಎಂದಿದ್ದಾರೆ.
IPL ಫೈನಲ್, ಪ್ಲೇ ಆಪ್ ಪಂದ್ಯ ಚಿನ್ನಸ್ವಾಮಿಯಿಂದ ಶಿಫ್ಟ್ ಆಗಿರುವ ಬಗ್ಗೆ ಕೆಎಸ್ಸಿಎ ಬೇಸರ ವ್ಯಕ್ತಪಡಿಸಿದ್ದು, ಬಿಸಿಸಿಐ ಅಧಿಕಾರ ಮತ್ತು ನಿರ್ಧಾರವನ್ನ ಗೌರವಿಸುತ್ತೇವೆ ಎಂದು ಹೇಳಿದೆ. ಆದರೆ ಐಪಿಎಲ್ ಆರಂಭಕ್ಕೂ ಮುನ್ನವೇ ಕೆಎಸ್ಸಿಎ ಪಂದ್ಯ ಆಯೋಜನೆಯ ಸಿದ್ದತೆ ಕುರುತು ವರದಿ ನೀಡಿತ್ತು. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಈ ವರದಿಯನ್ನು ಬಿಸಿಸಿಐಗೆ ಸಲ್ಲಿಕೆ ಮಾಡಿದ್ದರು. ಆದರೆ ಕೆಎಸ್ಸಿಎ ಮನವಿ ಲೆಕ್ಕಿಸದೇ ಬಿಸಿಸಿಐ ಏಕಪಕ್ಷೀಯ ನಿರ್ಣಯ ಕೈಗೊಂಡಿದೆ ಎಂಬ ಬೇಸರ ವ್ಯಕ್ತವಾಗಿದೆ. (ವರದಿ: ಕಾರ್ತಿಕ್, ನ್ಯೂಸ್18 ಕನ್ನಡ, ಬೆಂಗಳೂರು)
Bangalore [Bangalore],Bangalore,Karnataka













