Last Updated:
ಆಟಗಾರರ ಆಯ್ಕೆ ಮತ್ತು ವೈಭವ್ ಅವರ ಭವಿಷ್ಯದ ಕುರಿತು ಮಾತನಾಡಿದ ಕೋಚ್ ಗೌತಮ್ ಗಂಭೀರ್ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ:
ಭಾರತ ಮತ್ತು ಅಫ್ಘಾನಿಸ್ತಾನ (India and Afghanistan) ನಡುವಿನ ಟಿ20 ಸರಣಿ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ (Team India) ಈ ಸರಣಿಯನ್ನು 3-0 ಅಂತರದಿಂದ ಗೆದ್ದು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಸರಣಿಯಲ್ಲಿ ಭಾರತದ ಭರ್ಜರಿ ಗೆಲುವಿನ ನಡುವೆಯೂ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಒಂದು ದೊಡ್ಡ ನಿರಾಶೆ ಹಾಗೇ ಉಳಿದುಕೊಂಡಿದೆ.
ಸಾವಿರಾರು ಜನರು ಕೇವಲ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೋಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ವೈಭವ್ ಸೂರ್ಯವಂಶಿ ಅಫ್ಘಾನಿಸ್ತಾನ ವಿರುದ್ಧದ ಮೂರೂ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಇದೀಗ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ವೈಭವ್ಗೆ ತಂಡದಲ್ಲಿ ಅವಕಾಶ ನೀಡದಿರುವ ಬಗ್ಗೆ ಮಾತನಾಡಿದ್ದು, ಇನ್ನು ಎಷ್ಟು ಕಾಲ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿಯಬೇಕಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಂಜು ಸ್ಯಾಮ್ಸನ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಗಂಭೀರ್, ಅವರು ಎಷ್ಟು ಅದ್ಭುತ ಪ್ರತಿಭೆ ಮತ್ತು ಏನು ಮಾಡಲು ಸಮರ್ಥರಾಗಿದ್ದಾರೆ ಎಂಬುದು ನಮಗೆ ತಿಳಿದಿದೆ. ಆದರೆ ಕಳೆದ 2-3 ವರ್ಷಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರನಿಗೆ, ತಂಡಕ್ಕೆ ಹೊಸದಾಗಿ ಬಂದವರಿಗಿಂತ ಯಾವಾಗಲೂ ಮುಂಚೂಣಿ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಸಂಜು ಸ್ಯಾಮ್ಸನ್ ಮೂರು ಪಂದ್ಯಗಳಲ್ಲಿ ಒಟ್ಟು 117 ರನ್ ಗಳಿಸಿದರು. ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಕೇವಲ 10 ರನ್ ಗಳಿಸಿ ಔಟ್ ಆಗಿದ್ದರು. ಎರಡನೇ ಟಿ20 ಪಂದ್ಯದಲ್ಲಿ 22 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳ ನೆರವಿನಿಂದ 57 ರನ್ಗಳ ಬಿರುಗಾಳಿಯಂತಹ ಇನ್ನಿಂಗ್ಸ್ ಆಡಿದ್ದರು.
ಕಳೆದ ರಾತ್ರಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 35 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಸರಣಿಯಲ್ಲಿ ಸತತ ಎರಡನೇ ಅರ್ಧಶತಕ ದಾಖಲಿಸಿದರು ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ 9,000 ರನ್ಗಳನ್ನು ಸಹ ಪೂರ್ಣಗೊಳಿಸಿದರು. ಹೀಗಾಗಿ, ಜಪಾನ್ ಟಿ20ಐ ಅಥವಾ ಏಷ್ಯನ್ ಗೇಮ್ಸ್ ವೇಳೆಯಾದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ತಮಗೆ ಅವಕಾಶ ಸಿಗಬಹುದು ಎಂದು ವೈಭವ್ ಸೂರ್ಯವಂಶಿ ಅಭಿಮಾನಿಗಳು ನಿರೀಕ್ಷಿಸುತ್ತಿರಬಹುದು.














