Last Updated:
ಇತ್ತೀಚೆಗೆ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಂದರೆ ವರ್ತಕರಿಂದ ವಸೂಲಿ ಮಾಡುವ ಶುಲ್ಕವನ್ನು ಮರುಪರಿಶೀಲಿಸುವಂತೆ ವಿದೇಶಿ ದೈತ್ಯ ಕಂಪನಿಗಳು ಭಾರತದ ಮೇಲೆ ಒತ್ತಡ ಹೇರುತ್ತಿವೆ ಎಂದು ವಿಪಕ್ಷಗಳು ಟೀಕಿಸಿದ್ದವು. ಇದನ್ನ ಕೇಂದ್ರ ಸಚಿವಾಲಯ ತಿರಸ್ಕರಿಸಿದ್ದು, ಸ್ಪಷ್ಟನೆ ನೀಡಿದೆ.
ಅಮೆರಿಕದ ಕಂಪನಿಗಳ (United States) ಒತ್ತಡಕ್ಕೆ ಮಣಿದು ಭಾರತ ಸರ್ಕಾರ ಯುಪಿಐ (UPI) ಮೇಲಿನ MDR ಶುಲ್ಕಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತ್ತು. ಈ ವಿಷಯದ ಕುರಿತು ಕೇಂದ್ರ ಹಣಕಾಸು ಸಚಿವಾಲಯ ( Finance Ministry) ಅಧಿಕೃತ ಸ್ಪಷ್ಟನೆ ನೀಡಿದ್ದು, ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದೆ. ವಿದೇಶಿ ಒತ್ತಡದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸರ್ಕಾರ, ಡಿಜಿಟಲ್ ಪಾವತಿ ವ್ಯವಸ್ಥೆಯ ಹಿಂದಿರುವ ಅಸಲಿ ತರ್ಕವನ್ನು ಬಿಚ್ಚಿಟ್ಟಿದೆ.
ಇತ್ತೀಚೆಗೆ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಂದರೆ ವರ್ತಕರಿಂದ ವಸೂಲಿ ಮಾಡುವ ಶುಲ್ಕವನ್ನು ಮರುಪರಿಶೀಲಿಸುವಂತೆ ವಿದೇಶಿ ದೈತ್ಯ ಕಂಪನಿಗಳು ಭಾರತದ ಮೇಲೆ ಒತ್ತಡ ಹೇರುತ್ತಿವೆ ಎಂದು ವಿಪಕ್ಷಗಳು ಟೀಕಿಸಿದ್ದವು. ಆದರೆ, ಇದನ್ನು ಖಂಡಿಸಿರುವ ಹಣಕಾಸು ಸಚಿವಾಲಯ, “ಯಾವುದೇ ವಿದೇಶಿ ಅಥವಾ ಅಮೆರಿಕನ್ ಕಂಪನಿಗಳ ಬೆದರಿಕೆ ಹಾಗೂ ಒತ್ತಡಕ್ಕೆ ಭಾರತ ಸರ್ಕಾರ ಬಗ್ಗುವುದಿಲ್ಲ. ದೇಶದ ಹಣಕಾಸು ನೀತಿಗಳನ್ನು ರೂಪಿಸುವುದು ನಮ್ಮ ಸ್ವಾಯತ್ತ ಹಕ್ಕು” ಎಂದು ಹೇಳಿದೆ. ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಜನರಿಗೆ ಡಿಜಿಟಲ್ ಪಾವತಿ ಸುಲಭವಾಗಲಿ ಎಂಬ ಕಾರಣಕ್ಕೇ ರೂಪಿಸಿದ ನಿಯಮ ಇದಾಗಿದ್ದು, ಯಾವುದೇ ಬಾಹ್ಯ ಒತ್ತಡದಿಂದ ನಿರ್ಧಾರ ಬದಲಾಯಿಸಿಲ್ಲ ಎಂದು ವಿವರಿಸಿದೆ.
ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಸಣ್ಣ ವರ್ತಕರಿಗೆ ರಕ್ಷಣೆ ನೀಡಲು ಸರ್ಕಾರ 2020ರಲ್ಲಿ ಯುಪಿಐ ಮತ್ತು ರೂಪೇ (RuPay) ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕವನ್ನು ಶೂನ್ಯ ಮಾಡಿತ್ತು. ಅಂದರೆ ಗ್ರಾಹಕರು ಅಥವಾ ಸಣ್ಣ ವ್ಯಾಪಾರಿಗಳು ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ. ಸಚಿವಾಲಯದ ಪ್ರಕಾರ, “ಯುಪಿಐ ಶುಲ್ಕ ರಹಿತವಾಗಿದ್ದರಿಂದಲೇ ದೇಶದ ಮೂಲೆ ಮೂಲೆಯಲ್ಲೂ ಕ್ಯೂಆರ್ ಕೋಡ್ (QR Code) ತಲುಪಲು ಸಾಧ್ಯವಾಯಿತು. ಒಂದು ವೇಳೆ ಆರಂಭದಲ್ಲೇ ಭಾರಿ ಶುಲ್ಕ ಹೇರಿದ್ದರೆ, ಡಿಜಿಟಲ್ ಪಾವತಿಯ ಕ್ರಾಂತಿ ಭಾರತದಲ್ಲಿ ಇಷ್ಟೊಂದು ವೇಗವಾಗಿ ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದೆ.
ಇನ್ನು, ಬ್ಯಾಂಕುಗಳು ಮತ್ತು ಪಾವತಿ ಆಪ್ಗಳು (App) ಯುಪಿಐ ಮೂಲಸೌಕರ್ಯ ನಿರ್ವಹಣೆ ಮಾಡಲು ತಗಲುವ ವೆಚ್ಚವನ್ನು ಸರಿದೂಗಿಸಲು ಸರ್ಕಾರವೇ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಹಣಕಾಸಿನ ನೆರವು ನೀಡುತ್ತಿದೆ. ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಸರ್ಕಾರದ ಮುಂದಿಲ್ಲ; ಬದಲಾಗಿ ದೇಶದ ಆರ್ಥಿಕತೆಯಲ್ಲಿ ತಳಮಟ್ಟದ ವ್ಯಾಪಾರಿಗಳನ್ನು ಬಲಪಡಿಸುವುದೇ ಮುಖ್ಯ ಗುರಿಯಾಗಿದೆ. ಹೀಗಾಗಿ ಯುಪಿಐ ವಿಷಯದಲ್ಲಿ ಸರ್ಕಾರ ತಳೆದಿರುವ ನಿರ್ಧಾರ ಸಂಪೂರ್ಣವಾಗಿ ದೇಶದ ಹಿತದೃಷ್ಟಿಯಿಂದ ಕೂಡಿದೆ ಎಂದು ಸ್ಪಷ್ಟಪಡಿಸಲಾಗಿದೆ.
ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು














