Last Updated:
NEET-UG Paper Leak: ಮೇ 3, 2026ರಂದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ ಬರೆದು ಹೊರಬಂದಿದ್ದರು. ಆದರೆ ಅದೇ ದಿನ ಅವರ ಕೈಯಲ್ಲಿದ್ದ ಒಂದು ಪಿಡಿಎಫ್ ದೇಶದ ಅತಿ ದೊಡ್ಡ ಪರೀಕ್ಷಾ ಮಂಡಳಿಯ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಯಾರು ಗೊತ್ತಾ ಆ ವ್ಯಕ್ತಿ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.
ಮೇ 3, 2026ರಂದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ಬರೆದು ಹೊರಬಂದಿದ್ದರು. ಆದರೆ ಅದೇ ದಿನ ರಾಜಸ್ಥಾನದ ಪ್ರಸಿದ್ಧ ಕೋಚಿಂಗ್ ಹಬ್ ಸೀಕರ್ನ ರಸಾಯನಶಾಸ್ತ್ರದ (Chemistry) ಶಿಕ್ಷಕರೊಬ್ಬರ ಕೈಯಲ್ಲಿದ್ದ ಒಂದು ಪಿಡಿಎಫ್ ದೇಶದ ಅತಿ ದೊಡ್ಡ ಪರೀಕ್ಷಾ ಮಂಡಳಿಯ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಅವರೇ ಶಶಿಕಾಂತ್ ಸುತಾರ್ ವ್ಯವಸ್ಥೆ ಕರಾಳ ಮುಖವನ್ನು ಜಗತ್ತಿನ ಮುಂದೆ ಬೆತ್ತಲು ಮಾಡಿ, ಲಕ್ಷಾಂತರ ಬಡ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳ ಪಾಲಿಗೆ ರಕ್ಷಕನಾಗಿ ನಿಂತ ನಿಜವಾದ ದುರಂಧರ.
ಸೀಕರ್ನ ಪ್ರಸಿದ್ಧ ಗುರುಕೃಪಾ ಕೆರಿಯರ್ ಇನ್ಸ್ಟಿಟ್ಯೂಟ್ನಲ್ಲಿ ರಸಾಯನಶಾಸ್ತ್ರ ಶಿಕ್ಷಕರಾಗಿರುವ ಶಶಿಕಾಂತ್ ಸುತಾರ್, ಪರೀಕ್ಷೆ ಮುಗಿದ ತಕ್ಷಣ ಎಂದಿನಂತೆ ವಿದ್ಯಾರ್ಥಿಗಳಿಗಾಗಿ ಆನ್ಸರ್ ಕೀ ಸಿದ್ಧಪಡಿಸುತ್ತಿದ್ದರು. ಈ ವೇಳೆ ಅವರ ಮನೆ ಮಾಲೀಕರು ಬಂದು, ಟೆಲಿಗ್ರಾಂ ಗ್ರೂಪ್ಗಳಲ್ಲಿ ಪರೀಕ್ಷೆಗೂ ಮುನ್ನವೇ ಹರಿದಾಡುತ್ತಿದ್ದ ‘ಗೆಸ್ ಪೇಪರ್’ ಎನ್ನಲಾದ ಪಿಡಿಎಫ್ ಒಂದನ್ನು ತೋರಿಸಿದರು. ಕುತೂಹಲದಿಂದ ಶಶಿಕಾಂತ್ ಆ ಪಿಡಿಎಫ್ ಅನ್ನು ಅಸಲಿ ಪ್ರಶ್ನೆ ಪತ್ರಿಕೆಯೊಂದಿಗೆ ಹೋಲಿಸಲು ಆರಂಭಿಸಿದರು. ಮೊದಲ ಪ್ರಶ್ನೆ ಮ್ಯಾಚ್ ಆಯಿತು, ಎರಡನೆಯದ್ದೂ ಆಯಿತು. ನೋಡನೋಡುತ್ತಿದ್ದಂತೆ ರಸಾಯನಶಾಸ್ತ್ರದ 45 ಪ್ರಶ್ನೆಗಳು ಮತ್ತು ಜೀವಶಾಸ್ತ್ರದ 90 ಪ್ರಶ್ನೆಗಳು ಯಾವುದೇ ಬದಲಾವಣೆಯಿಲ್ಲದೆ ಯಥಾವತ್ತಾಗಿ ಅಸಲಿ ಪತ್ರಿಕೆಯಲ್ಲಿದ್ದವು.
ಅದು ಕೇವಲ ಗೆಸ್ ಪೇಪರ್ ಆಗಿರಲಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿಗಳ ದಂಧೆಯ ಭಾಗವಾಗಿ ಮುಂಚಿತವಾಗಿಯೇ ಲೀಕ್ ಆಗಿದ್ದ ಅಸಲಿ ಪ್ರಶ್ನೆ ಪತ್ರಿಕೆ ಎಂಬ ಕಹಿ ಸತ್ಯ ಆ ಶಿಕ್ಷಕನಿಗೆ ಮನವರಿಕೆಯಾಯಿತು. ಆ ಕ್ಷಣದಲ್ಲಿ ಶಶಿಕಾಂತ್ ಸುತಾರ್ ಅವರ ಮುಂದೆ ಎರಡು ದಾರಿಗಳಿದ್ದವು. ಒಂದು, ತಮಗೇಕೆ ಉಸಾಬರಿ ಎಂದು ಮೌನವಾಗಿರುವುದು. ಎರಡನೆಯದ್ದು, ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವುದು. ಶಶಿಕಾಂತ್ ಎರಡನೇ ದಾರಿಯನ್ನು ಆರಿಸಿಕೊಂಡರು.
ಹಗರಣದ ಪುರಾವೆ ರವಾನೆ!
ಲಕ್ಷಾಂತರ ಬಡ ಪೋಷಕರ ಹಣ, ಹಗಲಿರುಳು ಓದಿದ ವಿದ್ಯಾರ್ಥಿಗಳ ಕಣ್ಣೀರು ಅವರ ಕಣ್ಣಮುಂದೆ ಬಂತು. ತಡಮಾಡದೆ ಸೀಕರ್ನ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಅಲುಗಾಡಿಸಲಾಗದ ಸಾಕ್ಷ್ಯಗಳನ್ನು ಒದಗಿಸಿದರು. ಜೊತೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಇಮೇಲ್ ಮೂಲಕ ಇಡೀ ಹಗರಣದ ಪುರಾವೆಗಳನ್ನು ರವಾನಿಸಿದರು.
ಶಿಕ್ಷಕ ಶಶಿಕಾಂತ್ ಸುತಾರ್ ನೀಡಿದ ಆ ತಾಂತ್ರಿಕ ಸಾಕ್ಷ್ಯಗಳು ಎಷ್ಟು ಬಲವಾಗಿದ್ದವೆಂದರೆ, ಆರಂಭದಲ್ಲಿ ಪೇಪರ್ ಲೀಕ್ ಆಗಿಲ್ಲ ಎಂದು ವಾದಿಸುತ್ತಿದ್ದ ಎನ್ಟಿಎ ಮತ್ತು ಕೇಂದ್ರ ಸರ್ಕಾರ ಮಂಡಿಯೂಡಬೇಕಾಯಿತು. ತನಿಖೆ ತೀವ್ರಗೊಂಡಂತೆ ದೇಶಾದ್ಯಂತ ಪೇಪರ್ ಲೀಕ್ ದಂಧೆಯ ಕಿಂಗ್ಪಿನ್ಗಳ ಜಾಲ ಬಯಲಿಗೆ ಬಂತು. ಪರಿಣಾಮವಾಗಿ, ಲಕ್ಷಾಂತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಬೆಲೆ ಸಿಕ್ಕಿ, ದೋಷಪೂರಿತವಾಗಿದ್ದ ನೀಟ್-ಯುಜಿ 2026 ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೆ, ಜೂನ್ 21, 2026 ರಂದು ಮರುಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿತು. ಅರ್ಹ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಮತ್ತೆ ನ್ಯಾಯ ಸಿಗುವಂತಾಯಿತು.
ಇಂದು ದೇಶದ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ಶಶಿಕಾಂತ್ ಸುತಾರ್ ಅವರನ್ನು ದೇಶದ ‘ರಿಯಲ್ ಹೀರೊ’ ಎಂದು ಕೊಂಡಾಡುತ್ತಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ನಾನು ಯಾವುದೇ ದೊಡ್ಡ ಕೆಲಸ ಮಾಡಿಲ್ಲ, ಒಬ್ಬ ಶಿಕ್ಷಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ದಿನಕ್ಕೆ 15 ಗಂಟೆಗಳ ಕಾಲ ಕಷ್ಟಪಟ್ಟು ಓದುವ ಬಡ ವಿದ್ಯಾರ್ಥಿಗಳ ತ್ಯಾಗ ಮತ್ತು ಅವರ ಪೋಷಕರ ಕನಸುಗಳು ಈ ಭ್ರಷ್ಟ ದಂಧೆಯಿಂದಾಗಿ ಹರಾಜಾಗಬಾರದು ಅಷ್ಟೇ” ಎಂದು ವಿನಮ್ರವಾಗಿ ನುಡಿದಿದ್ದಾರೆ.
ಹಣ ಮತ್ತು ಅಧಿಕಾರದ ಬಲದ ಮುಂದೆ ಒಬ್ಬ ಸಾಮಾನ್ಯ ಶಿಕ್ಷಕ ತನ್ನ ಪ್ರಾಮಾಣಿಕತೆಯಿಂದ ಇಡೀ ದೇಶದ ಗಮನ ಸೆಳೆದ ಕಥೆ ಇದು. ವ್ಯವಸ್ಥೆ ಕೆಟ್ಟಾಗ ಮೂಕಪ್ರೇಕ್ಷಕರಾಗುವ ಬದಲು, ಧೀಮಂತನಾಗಿ ನಿಂತು ಹೋರಾಡಿದ ಶಶಿಕಾಂತ್ ಸುತಾರ್ ಅವರ ನಡೆ ಇಂದಿನ ಇಡೀ ಸಮಾಜಕ್ಕೆ ಪ್ರೇರಣೆಯಾಗಿದೆ.













