Bengaluru News: ರೈತರಿಗೆ ಶುದ್ಧ ನೀರು ಕೊಡಲು ಸರ್ಕಾರದ ಮಾಸ್ಟರ್ ಪ್ಲಾನ್, ಇನ್ಮುಂದೆ ಡ್ರೈನೇಜ್ ನೀರಿಗೆ ಬ್ರೇಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ರೈತರಿಗೆ ಶುದ್ಧೀಕರಿಸಿದ ಒಳಚರಂಡಿ ನೀರು ಒದಗಿಸಲು ರಾಜ್ಯ ಸರ್ಕಾರ ನಿರ್ಧಾರ. BWSSB, KWSSB ಗೆ ಪ್ರಸ್ತಾವನೆ ಸಲ್ಲಿಸಲು ತೋಟಗಾರಿಕೆ ಇಲಾಖೆ ನಿರ್ಧಾರ.
ತ್ಯಾಜ್ಯನೀರು ಸಂಸ್ಕರಣೆ
ಬೆಂಗಳೂರು: ರೈತರಿಗೆ (Farmer) ಕೃಷಿ ಮತ್ತು ತೋಟಗಾರಿಕೆ (Horticulture) ಚಟುವಟಿಕೆಗಳಿಗೆ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ (Govt) ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಪ್ರಮುಖ ನಗರಗಳ ಒಳಚರಂಡಿ (ಸೆವರೇಜ್) ನೀರನ್ನು ಶುದ್ಧೀಕರಿಸಿ ತೋಟಗಾರಿಕೆ ಬೆಳೆಗಳಿಗೆ ಬಳಸುವ ಸಂಬಂಧ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KWSSB)ಗೆ ಪ್ರಸ್ತಾವನೆ ಸಲ್ಲಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಅಪಾಯಕಾರಿ ಒಳಚರಂಡಿ ನೀರಿಗೆ ಮುಕ್ತಿ
ಹಲವೆಡೆ ರೈತರಿಗೆ ನೀರಿನ ತೀವ್ರ ಸಮಸ್ಯೆಯಿರುವುದರಿಂದ, ಕೆಲ ಕೃಷಿಕರು ಸಂಸ್ಕರಿಸದ ಒಳಚರಂಡಿ ನೀರನ್ನೇ ನೇರವಾಗಿ ಬಳಸಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಆ ಉತ್ಪನ್ನಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ವಿಷಕಾರಿ ಅಂಶಗಳು ಸೇರುತ್ತಿರುವುದು ವರದಿಗಳಿಂದ ತಿಳಿದುಬಂದಿದೆ. ಇದನ್ನು ತಡೆಯಲು, ನಾವೇ ರೈತರಿಗೆ ಎಸ್ಟಿಪಿ ಘಟಕಗಳ ಮೂಲಕ ಶುದ್ಧೀಕರಿಸಿದ ಸುರಕ್ಷಿತ ನೀರನ್ನು ಒದಗಿಸಿದರೆ ಆರೋಗ್ಯ ಸಮಸ್ಯೆಗಳಿಗೆ ಸಂಪೂರ್ಣ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ಚಿಂತನೆಯಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಮತ್ತು ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಆಯಾ ಜಿಲ್ಲಾ ತೋಟಗಾರಿಕೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಲಾಲ್ಬಾಗ್, ಕಬ್ಬನ್ಪಾರ್ಕ್ ಮಾದರಿ ಅನುಸರಣೆ
ರಾಜ್ಯಾದ್ಯಂತ ನಿತ್ಯ ಕೋಟ್ಯಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ಮರುಬಳಕೆ ಮಾಡಿಕೊಳ್ಳುವ ಮೂಲಕ ನೂರಾರು ರೈತರಿಗೆ ಅನುಕೂಲ ಕಲ್ಪಿಸಬಹುದು. ಈಗಾಗಲೇ ಲಾಲ್ಬಾಗ್ ಮತ್ತು ಕಬ್ಬನ್ಪಾರ್ಕ್ನಲ್ಲಿ ಎಸ್ಟಿಪಿ ಘಟಕದ ಮೂಲಕ ಶುದ್ಧೀಕರಿಸಿದ ನೀರನ್ನೇ ಗಿಡ-ಮರಗಳಿಗೆ ಬಳಸಲಾಗುತ್ತಿದೆ. ಇದೇ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದರೆ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ ಮತ್ತು ಇಳುವರಿ ಗಣನೀಯವಾಗಿ ಹೆಚ್ಚಾಗಲಿದೆ.
80 ಸಾವಿರ ಕೋಟಿ ರೂ. ಮೌಲ್ಯದ ವಹಿವಾಟು
ರಾಜ್ಯದಲ್ಲಿ ವಾರ್ಷಿಕ ಬರೋಬ್ಬರಿ 80 ಸಾವಿರ ಕೋಟಿ ರೂ. ಮೌಲ್ಯದ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಯಲಾಗುತ್ತಿದ್ದು, ಈ ಬಾರಿಯೂ ಅದೇ ಮಟ್ಟದ ಇಳುವರಿ ನಿರೀಕ್ಷಿಸಲಾಗಿದೆ. ಇದರೊಂದಿಗೆ, ಗುಣಮಟ್ಟದ ಸಂಶೋಧನಾ ತಳಿಗಳು ರೈತರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ನರ್ಸರಿಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಲು ಇಲಾಖೆ ಮುಂದಾಗಿದೆ. ಜತೆಗೆ, ತರಕಾರಿಗಳಲ್ಲಿ ಕೀಟನಾಶಕಗಳ ಅತಿಬಳಕೆ ತಡೆಯಲು ವಿಶೇಷ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ ತಿಳಿಸಿದ್ದಾರೆ.