India
oi-Naveen Kumar N
ಲೋಕಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಇದ್ದು ಈಗಾಗಲೇ ಚುನಾವಣಾ ಸಿದ್ಧತೆ ಆರಂಭವಾಗಿದೆ. ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಲು ಆರಂಭಿಸಿವೆ.
ಪಾಟ್ನಾದಲ್ಲಿ ಮೊದಲ ಸುತ್ತಿನ ವಿಪಕ್ಷಗಳ ಸಭೆಯಲ್ಲಿ 16 ಪಕ್ಷಗಳು ಭಾಗವಹಿಸಿದ್ದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ 26 ಪಕ್ಷಗಳು ಭಾಗವಹಿಸಿವೆ. ವಿಪಕ್ಷಗಳ ಸಭೆ ಬೆನ್ನಲ್ಲೇ ಎಚ್ಚೆತ್ತಿರುವ ಎನ್ಡಿಎ ಕೂಡ ಬಲ ಪ್ರದರ್ಶನಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ವಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿದರೆ, ದೆಹಲಿಯಲ್ಲಿ ಎನ್ಡಿಎ ತನ್ನ ಬಲ ಪ್ರದರ್ಶನ ಮಾಡಲಿದೆ. ಎನ್ಡಿಎ ಸಭೆಯಲ್ಲಿ 38 ಪಕ್ಷಗಳು ಭಾಗವಹಿಸುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂದು ನಡೆಯುವ ಎನ್ಡಿಎ ಮತ್ತು ಯುಪಿಎ ಸಭೆಗಳು ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿರುವುದು ವಿಪಕ್ಷಗಳ ಗುಂಪಿಗೆ ಬಲ ತಂದಿದೆ.
ಬೆಂಗಳೂರಿನಲ್ಲಿ ಒಗ್ಗಟ್ಟಿನ ಮಂತ್ರ
“ಯುನೈಟೆಡ್ ವಿ ಸ್ಟ್ಯಾಂಡ್” ಎನ್ನು ಘೋಷವಾಕ್ಯದೊಂದಿಗೆ ವಿಪಕ್ಷಗಳು ಬೆಂಗಳೂರಿನಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿವೆ. 26 ವಿರೋಧ ಪಕ್ಷಗಳ ನಾಯಕರು ತಾಜ್ ವೆಸ್ಟ್ಎಂಡ್ನಲ್ಲಿ ಜಮಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಏರ್ಪಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೆಹಲಿ ಮತ್ತು ಪಂಜಾಬ್ನಲ್ಲಿ ಆಪ್ ಗೆಲುವು ಸಾಧಿಸಲು ಕಾಂಗ್ರೆಸ್ ಸಹಾಯ ಮಾಡುತ್ತದೆ ಎನ್ನುವುದು ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.
ದೆಹಲಿ ಸುಗ್ರೀವಾಜ್ಞೆ ಕುರಿತು ಆಪ್ಗೆ ಕಾಂಗ್ರೆಸ್ ಬೆಂಬಲ ನೀಡಿರುವುದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಹೇಳಿದ್ದಾರೆ. ಕೇಜ್ರಿವಾಲ್ ಈ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಈ ಷರತ್ತು ಹಾಕಿದ್ದರು.
ಮೊದಲ ದಿನ ಸಭೆಯನ್ನು ತಪ್ಪಿಸಿಕೊಂಡ ಎನ್ಸಿಪಿ ನಾಯಕ ಶರದ್ ಪವಾರ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ತಾನೆ ಶರದ್ ಪವಾರ್ ಸೋದರಳಿಯ ಅಜಿತ್ ಪವಾರ್ ಹಲವು ಶಾಸಕರು, ಸಂಸದರ ಜೊತೆ ಮಹಾರಾಷ್ಟದಲ್ಲಿ ಬಿಜೆಪಿ-ಏಕನಾಥ್ ಶಿಂಧೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ರಾಜ್ಯವಾರು ಬಿಜೆಪಿ ವಿರೋಧಿ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆಗೆ ಒಪ್ಪಿಗೆ ನೀಡುವುದು ವಿಪಕ್ಷಗಳ ಒಗ್ಗಟ್ಟಿನ ಸಭೆಯ ಪ್ರಮುಖ ಉದ್ದೇಶವಾಗಿದೆ.
ಮೋದಿಯನ್ನು ಅಧಿಕಾರಕ್ಕೆ ತರಲು 38 ಪಕ್ಷಗಳು ಒಗ್ಗಟ್ಟು
ದೆಹಲಿಯಲ್ಲಿ ನಡೆಯಲಿರುವ ಇಂದಿನ ಸಭೆಯಲ್ಲಿ 38 ಎನ್ಡಿಎ ಪಾಲುದಾರರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಎಲ್ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದರೊಂದಿಗೆ ಎನ್ಡಿಎ ಸಭೆಗೆ ಉತ್ತೇಜನ ಸಿಕ್ಕಿತು.
ಚಿರಾಗ್ ಎನ್ಡಿಎಗೆ ಮರಳುವ ಬಗ್ಗೆ ಮತ್ತು ಅವರ ತಂದೆಯ ನೆಚ್ಚಿನ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇಬ್ಬರು ನಾಯಕರು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಸಭೆಗೆ ತಮ್ಮನ್ನು ಆಹ್ವಾನಿಸಲಾಗಿದೆ ಎಂದು ಬಿಹಾರದ ಮತ್ತೋರ್ವ ದಿಗ್ಗಜ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. 2024ರಲ್ಲಿ ಪ್ರಧಾನಿ ಮೋದಿಗೆ ಪರ್ಯಾಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿಯಿಂದ ಬೇರ್ಪಟ್ಟ ನಂತರ ಜನ ಸುರಾಜ್ಯ ಶಕ್ತಿ ಪಕ್ಷದ ಮುಖ್ಯಸ್ಥರಾಗಿರುವ ಶಾಸಕ ವಿನಯ್ ಕೋರೆ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಅಧ್ಯಕ್ಷ ಬಚ್ಚು ಕಾಡು ಅವರನ್ನು ಇಂದು ಎನ್ಡಿಎ ಸಭೆಗೆ ಆಹ್ವಾನಿಸಲಾಗಿದೆ.
English summary
Two meetings present a glimpse of the 2024 Lok Sabha election battle. Congress-led opposition unity parties gather in Bengaluru, while the BJP-led side holds a meeting in Delhi to strategize for the upcoming elections.
Story first published: Tuesday, July 18, 2023, 10:11 [IST]