India
oi-Ravindra Gangal
ನವದೆಹಲಿ, ಜುಲೈ 22: ಮಣಿಪುರದಲ್ಲಿ ಇಬ್ಬರು ಕುಕಿ-ಜೋ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಕಿರುಕುಳ ನೀಡಿರುವ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬೆತ್ತಲೆ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ ಭೀಕರ ಘಟನೆಯು ಎರಡು ತಿಂಗಳ ನಂತರ ಬಯಲಿಗೆ ಬಂದಿದೆ.
ಜೂನ್ 19ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೊ ವೈರಲ್ ಆಗಿದ್ದು, ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿರುವುದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ಒಂದು ತಿಂಗಳ ನಂತರ ಮೊದಲ ಬಂಧನವನ್ನು ಗುರುವಾರ ಮಾಡಲಾಗಿದೆ. ಆ ನಂತರ ಮತ್ತೆ ಮೂವರ ಬಂಧನವಾಗಿದೆ ಎಂದು ಸರ್ಕಾರ ತಿಳಿಸಿದೆ.
ಹುಯಿರೆಮ್ ಹೆರೋಡಾಸ್ ಮೈತೆಯ್ ಈ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿಯಾಗಿದ್ದು, ವಿಡಿಯೊದ 26 ಸೆಕೆಂಡುಗಳ ಕ್ಲಿಪ್ನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ಎಎನ್ಐ ವಿವಾದವೊಂದನ್ನು ಹುಟ್ಟುಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮೊದಲ ಆರೋಪಿ ಅಬ್ದುಲ್ ಹಿಲ್ಮಿ (ಹುಯಿರೆಮ್ ಹೆರೋಡಾಸ್ ಮೈತೆಯ್) ಎಂದು ಟ್ವೀಟ್ ಮಾಡಿದೆ.
Manipur Horror: 140 ಕೋಟಿ ಭಾರತೀಯರು ಅವಮಾನ ಅನುಭವಿಸುತ್ತಿದ್ದಾರೆ- ಮಣಿಪುರ ಘಟನೆ ಖಂಡಿಸಿದ ಬಿಜೆಪಿ ಸಂಸದ ಗೌತಮ್ ಗಂಭೀರ್
ಇದಕ್ಕೆ ಪ್ರತಿಕ್ರಿಯಿಸಿರುವ ಮಣಿಪುರ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಹಿಲ್ಮಿಯನ್ನು ಬಂಧಿಸಿದ್ದಾರೆ ತಿಳಿಸಿದ್ದಾರೆ. ಹಿಲ್ಮಿಗೂ ವಿಡಿಯೊ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲವೆಂದು ಮಣಿಪುರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಎಎನ್ಐ ಮಾಡಿರುವ ಟ್ವೀಟ್ ಸದ್ದು ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಟ್ವೀಟ್ ಮಾಡಿ 12 ಗಂಟೆಯಾದ ಬಳಿಕ ಎಎನ್ಐ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಇದಾದ ಮೇಲೆ ಕ್ಷಮೆಯನ್ನೂ ಕೇಳಿದೆ.
ಮಣಿಪುರದಲ್ಲಿ ಮೇ 3 ರಿಂದ ಇಂಫಾಲ್ ಕಣಿವೆಯಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು, ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಇಂದು ಮತ್ತೊಬ್ಬನನ್ನು ಬಂಧಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಕಾಣಬಹುದಾದ ಒಂದು ಡಜನ್ ಶಂಕಿತರನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶೋಧ ಕಾರ್ಯಾಚರಣೆಯನ್ನು ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಲವು ಶಂಕಿತ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಹಲವೆಡೆ ಶಾಂತಿಯುತವಾಗಿ ಧರಣಿ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಹುಯಿರೆಮ್ ಹೆರೋಡಾಸ್ ಮೈತೆ ಸೇರಿದಂತೆ ನಾಲ್ವರನ್ನು ನಿನ್ನೆ ಬಂಧಿಸಲಾಗಿತ್ತು. ಹೆರೋದಾಸ್ ಮನೆಗೆ ನಿನ್ನೆ ಪೆಚ್ಚಿ ಗ್ರಾಮದ ಮಹಿಳೆಯರು ಬೆಂಕಿ ಹಚ್ಚಿದ್ದಾರೆ.
ವದಂತಿಗಳನ್ನು ನಂಬಬೇಡಿ ಎಂದು ರಾಜ್ಯ ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರಿಗೆ ನೀಡುವಂತೆ ಸರ್ಕಾರ ಮನವಿ ಮಾಡಿದೆ.
English summary
Manipur Video: The tweet Shared by ANI has caused a stir on social media
Story first published: Saturday, July 22, 2023, 17:04 [IST]