Karnataka
oi-Malathesha M
ಬೆಂಗಳೂರು: ಕರ್ನಾಟಕದಲ್ಲಿ 135 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ತನ್ನ ಮೊದಲ ಬಜೆಟ್ ಮಂಡನೆ ಮಾಡಿದೆ. ಈ ಬಗ್ಗೆ ಅನೇಕರು ಅನೇಕ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಈ ಹೊಸ ಸರ್ಕಾರದ ಬಜೆಟ್ ಬಗ್ಗೆ ಮಾತನಾಡಿದ್ದು, ಕಟೀಲ್ ಏನ್ ಹೇಳಿದ್ದಾರೆ ತಿಳಿಯಿರಿ.
ಅಂದಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ‘ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯದ್ದೇ ಆದರೂ ಕೇಂದ್ರ ಬಿಜೆಪಿ ಸರಕಾರವನ್ನು ಗುರಿ ಮಾಡಿದ್ದು ಕಂಡುಬರುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ. ಅಲ್ಲದೆ ‘ಇದು ನಿರಾಶಾದಾಯಕ, ಪ್ರಗತಿಹೀನ ಬಜೆಟ್. ಬಜೆಟ್ ಮಂಡಿಸುವಾಗ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅವರನ್ನು ಟೀಕಿಸುವುದಕ್ಕಾಗಿಯೇ ಈ ಅವಕಾಶ ಉಪಯೋಗ ಮಾಡಿಕೊಂಡಿದ್ದಾರೆ.’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಜೊತೆ ಸಂಘರ್ಷ
‘ರಾಜ್ಯಗಳ ಒಕ್ಕೂಟದ ಒಳಗಡೆ ಕೇಂದ್ರದ ಜೊತೆ ಸಂಘರ್ಷ ಹಾಗೂ ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟನ್ನು ಬಳಸಿಕೊಂಡಿರುವುದು ಕಾಣಿಸಿದೆ. ರಾಜ್ಯದ ಪ್ರಗತಿಗೆ ಪೂರಕ ಅಂಶ ಬಜೆಟ್ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ’ ಎಂದಿದ್ದಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ಗೆ ದೆಹಲಿ ಕೋರ್ಟ್ ಸಮನ್ಸ್
ಸಾಲದ ಬಲೆಯ ಒಳಗೆ ರಾಜ್ಯ?
‘ಮುಂದಿನ ಕರ್ನಾಟಕ ನಿರ್ಮಾಣ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿ ಸುಗಮವಾಗಿ ಕಂಡುಬಂದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಮಾಡಿ ತೋರಿಸಿದೆ. ಕೆಲ ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶ ಸೇರಿಸಿದ್ದಾರೆ. ದೊಡ್ಡ ರೀತಿ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಬಜೆಟ್ ಕುರಿತು ಆಕ್ರೋಶ ಹೊರಹಾಕಿದ್ದಾರೆ.
ಗ್ಯಾರಂಟಿ ಅನುಷ್ಠಾನಕ್ಕೆ ಸಾಲ ಏಕೆ?
ಅಲ್ಲದೆ ‘ಕರ್ನಾಟಕ ಹಿಂದೊಮ್ಮೆ ಕೋವಿಡ್ ನಿರ್ವಹಣೆಯೂ ಸೇರಿ ಅಭಿವೃದ್ಧಿಯ ಹೂಡಿಕೆಗೆ ಸಾಲ ತೆಗೆದುಕೊಂಡದಿದ್ದಿದೆ. ಆದರೆ ಚುನಾವಣೆ ಗ್ಯಾರಂಟಿ ಅನುಷ್ಠಾನಕ್ಕೆ ಸಾಲ ಮಾಡುವಂಥ ದಯನೀಯ ಸ್ಥಿತಿಗೆ ಸರಕಾರ ತೆಗೆದುಕೊಂಡು ಹೋಗಿದೆ. ಇದರಡಿ ಅಭಿವೃದ್ಧಿಯ ಯಾವುದೇ ಮುನ್ನೋಟಗಳು ಕಾಣುತ್ತಿಲ್ಲ. ಭವಿಷ್ಯದ ಭಾರತ ನಿರ್ಮಾಣದ ಯಾವ ಭೂಮಿಕೆಯೂ ಕೂಡ ಈ ಬಜೆಟ್ನಲ್ಲಿ ಕಾಣುತ್ತಿಲ್ಲ. ಒಂದಷ್ಟು ಸಮುದಾಯಗಳ ಓಲೈಕೆ ಒಂದು ಸಮುದಾಯವನ್ನ ಓಲೈಸಲು ಕೇಂದ್ರ ಸರ್ಕಾರವನ್ನು ದೂಷಿಸುವುದು, ರಾಜಕೀಯ ಬಂಡವಾಳ ಮಾಡಿಕೊಂಡು ಮುಂದಿನ ಲೋಕಸಭೆ ಚುನಾವಣೆ ಲಾಭದತ್ತ ನೋಡುವುದು ಕಾಣಿಸುತ್ತಿದೆ’ ಎಂದಿದ್ದಾರೆ.
ಹಣದ ಸೋರಿಕೆಗೆ ದಾರಿ?
ಹಾಗೇ ‘ಈ ದೊಡ್ಡ ಪ್ರಮಾಣದ ಯೋಜನೇತರ ವೆಚ್ಚದ ಮೂಲಕ ಹಣದ ಸೋರಿಕೆ ಆಗಲಿದೆ. ಕರ್ನಾಟಕವನ್ನು ಎಟಿಎಂ ಮಾಡಲು ಬೇಕಾದ ಫಾರ್ಮುಲಾವನ್ನು ಈ ಗ್ಯಾರಂಟಿ ಮೂಲಕ ಮಾಡಿಕೊಂಡಿದ್ದಾರೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕಿದೆ; ದೂರದರ್ಶಿತ್ವದ ಯಾವುದೇ ಅಂಶಗಳು ಈ ಬಜೆಟ್ನಲ್ಲಿ ಕಾಣುತ್ತಿಲ್ಲ.’ ಎಂದಿದ್ದಾರೆ ಕಟೀಲ್. ಹಾಗೇ ಇನ್ನೂ ಅನೇಕ ಆರೋಪಗಳನ್ನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದ್ದಾರೆ.
ಕರ್ನಾಟಕಕ್ಕೆ ‘ಬಿಮಾರು’ ಕಂಟಕ?
ಇನ್ನು ‘ಕರ್ನಾಟಕದ ಬೆಳವಣಿಗೆಗೆ ವಿಪುಲ ಅವಕಾಶಗಳು ಇದ್ದಾಗಲೇ ಭಾರಿ ಬಂಡವಾಳವನ್ನ ಕರ್ನಾಟಕದಲ್ಲಿ ಹೂಡುವಂಥ ಕಾಲಘಟ್ಟದಲ್ಲಿ, ಪ್ರಗತಿಯ ವಿಚಾರದಲ್ಲಿ ರಾಜ್ಯ ವೇಗವಾಗಿ ಮುನ್ನಡೆಯುತ್ತಿರುವ ಅವಧಿಯಲ್ಲಿ, ತಲಾದಾಯದಲ್ಲೂ ಮುಂದಿರುವ ಕಾಲಘಟ್ಟದಲ್ಲಿ ನಿರ್ವಹಣೆ ನೋಡಿದಾಗ ಮುಂದೊಂದು ದಿನ, ಹಿಂದೆಲ್ಲ ಹಲವು ರಾಜ್ಯಗಳಿಗೆ ಬಿಮಾರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದರೋ ಆ ರಾಜ್ಯಗಳ ಸ್ಥಾನಕ್ಕೆ ನಮ್ಮ ರಾಜ್ಯ ಹೋಗುತ್ತದೇನೋ ಎಂಬ ಭಯ ಕಾಡುವಂತಾಗಿದೆ’ ಎಂದು ತಿಳಿಸಿದ್ದಾರೆ.
‘GST, ಆಡಳಿತಾತ್ಮಕ ಸುಧಾರಣೆ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಸಾಧನೆ ಮಾಡಿತ್ತು. ಅವೆಲ್ಲವೂ ದಾರಿ ತಪ್ಪಬಹುದೇನೋ ಎಂಬ ಭಯ ಕಾಡುತ್ತಿದೆ. ಬೇವಿನ ಗಿಡ ನೆಟ್ಟು ಮಾವಿನ ಫಲ ನಿರೀಕ್ಷಿಸಲು ಸಾಧ್ಯವಿಲ್ಲವೋ ಹಾಗೇ ದ್ವೇಷಪೂರಿತ ಸಂಘರ್ಷದ ಅಂಶವನ್ನು ರಾಜಕೀಯ ವ್ಯವಸ್ಥೆಯೊಳಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪ್ರಯೋಜನ ಲಭಿಸದು. ಪರಸ್ಪರ ಸಹಕಾರದ ಮೂಲಕವೇ ಜನಮಾನ್ಯತೆ ಪಡೆಯಲು ಸಾಧ್ಯವಿದೆ ಎಂದು ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡಿಲ್ಲ’ ಎಂದು ಆರೋಪಿಸಿದ್ದಾರೆ.
ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ಬಗ್ಗೆ ವಿರೋಧ ಪಕ್ಷಗಳು ಈ ರೀತಿ ಪ್ರತಿಕ್ರಿಯೆ ನೀಡಿವೆ. ಬಜೆಟ್ ಬಗ್ಗೆ ವಿಪಕ್ಷ ನಾಯಕರು ತೀವ್ರ ಆಕ್ರೋಶ ಹೊರಹಾಕಿ, ಬೇಸರ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಹೀಗೆ ಮುಂದಿನ ದಿನಗಳಲ್ಲಿ ಬಜೆಟ್ ಅಧಿವೇಶನ ರಣರಂಗವಾಗುವ ಮುನ್ಸೂಚನೆ ಸಿಕ್ಕಿದೆ. ಬಜೆಟ್ ಮೇಲೆ ಚರ್ಚೆ ಇನ್ನೇನು ಆರಂಭವಾಗಲಿದ್ದು, ವಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ಗುಡುಗಲು ಸಜ್ಜಾಗಿವೆ.
English summary
Karnataka Budget 2023: Nalin Kumar Kateel reaction on Siddaramaiah budget.
Story first published: Friday, July 7, 2023, 19:03 [IST]