Karnataka
oi-Naveen Kumar N

ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಹಾಕುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ಕೊನೆಗೂ ಸಮಯ ನಿಗದಿ ಮಾಡಲಾಗಿದೆ. ಜುಲೈ 17 ಅಥವಾ 19ರಂದು ಅರ್ಜಿ ಸ್ವೀಕರಿಸುವುದು ಖಚಿತವಾಗಿದೆ. 1.28 ಕೋಟಿ ಕುಟುಂಬಗಳು ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಬೇಕಾದ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು, ಎಲ್ಲಾ ಗೊಂದಲಗಳಿಗೆ ತೆರ ಎಳೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಗೃಹಜ್ಯೋತಿಯಂತೆ ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ಅಲ್ಲಿಗೆ ತೆರಳಿ ನೀವು ಯೋಜನೆಗೆ ಅರ್ಜಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಎಲ್ಲಿ?
ಗೃಹಜ್ಯೋತಿಗೆ ನಿಮ್ಮ ಮೊಬೈಲ್ನಲ್ಲೇ ಅರ್ಜಿ ಸಲ್ಲಿಕೆ ಮಾಡಬಹುದಿತ್ತು. ಆದರೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಅದು ಸಾಧ್ಯವಿಲ್ಲ. ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲು ಅನುಮತಿ ನೀಡಲಾಗಿದೆ. ನಿಮ್ಮ ಸಮೀಪವಿರುವ ಈ ಕೇಂದ್ರಗಳಿಗೆ ತೆರಳಿ ನೀವು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.
ಹಾಗಂತ ಯಾವಾಗ ಅಂದರೆ ಆಗ ನೀವು ಹೋಗುವಂತಿಲ್ಲ, ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ, ಜನ ದಟ್ಟಣೆ ತಪ್ಪಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಫಲಾನುಭವಿಗಳಿಗೆ ತಾವು ಯಾವಾಗ ಅರ್ಜಿ ಸಲ್ಲಿಸಬೇಕೆನ್ನುವ ಸಂದೇಶ ಬರಲಿದೆ.
ಹೌದು, ನಿಮ್ಮ ಪಡಿತರ ಚೀಟಿಯ ಮಾಹಿತಿಯನ್ನು ಆಧರಿಸಿ ನಿಮ್ಮ ಮೊಬೈಲ್ ಸಂಖ್ಯೆಗೆ ನೀವು ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಸಮಯದ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ, ಆ ಸಮಯಕ್ಕೆ ತೆರಳಿ ನಿಮ್ಮ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸರ್ಕಾರ ನಿಗದಿ ಮಾಡಿದ ಸಮಯದಲ್ಲಿ ಅರ್ಜಿ ಸಲ್ಲಿಸಲು ವಿಫಲವಾದರೆ, ಸಂಜೆ 5 ಗಂಟೆಯ ನಂತರ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಬೇಕಾದ ದಾಖಲೆಗಳೇನು?
ಅರ್ಜಿ ಸಲ್ಲಿಕೆ ಮಾಡಲು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಹಣ ಪಡೆಯಲು ಅರ್ಜಿ ಸಲ್ಲಿಸಬಹುದು. ನಿಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು), ಆಧಾರ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ.
ಒಂದು ವೇಳೆ ಆಧಾರ್ ಲಿಂಕ್ ಆಗಿರದ ಖಾತೆಗೆ ಹಣ ಬರಬೇಕು ಎಂದರೆ ಬೇರೆ ಪಾಸ್ ಬುಕ್ ಅನ್ನು ಕೂಡ ನೀಡಬಹುದು. ಆ ಪಾಸ್ಬುಕ್ಅನ್ನು ಸಾಫ್ಟ್ವೇರ್ ನಲ್ಲಿ ಅಪ್ ಲೋಡ್ ಮಾಡಿದ ಬಳಿಕ ಅದು ಸಿಡಿಪಿಒ, ತಹಶೀಲ್ದಾರ್, ತಾಲೂಕ್ ಪಂಚಾಯತ್ ಇಒಗಳ ಲಾಗಿನ್ಗೆ ಮಾಹಿತಿ ಹೋಗಲಿದ್ದು, ಈ ಪಾಸ್ಬುಕ್ ಪಡಿತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥೆಯ ಜೊತೆ ಹೊಂದಾಣಿಕೆಯಾದರೆ ಅಲ್ಲಿ ಆರ್ಡರ್ ಕಾಪಿ ಕೊಡಲಾಗುವುದು. ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಲುಪಿಸಲಾಗುವುದು ಎಂದು ಹೇಳಿದರು.
ಪ್ರಜಾ ಪ್ರತಿನಿಧಿಗಳ ನೇಮಕ
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿ ನೋಂದಣಿ ಪ್ರಕ್ರಿಯೆ ಸುಲಭವಾಗಿಸಲು ಪ್ರಜಾಪ್ರತಿನಿಧಿ ಎಂದು ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. 1000 ಜನಸಂಖ್ಯೆ ಇದ್ದಾಗ ಇಬ್ಬರು (ಒಬ್ಬರು ಮಹಿಳೆ, ಒಬ್ಬರು ಪುರುಷ) ನೇಮಕ ಮಾಡಲಾಗುತ್ತದೆ. ಮನೆ ಬಾಗಿಲಿಗೆ ತೆರಳಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದು, ನೋಂದಣಿ ಪ್ರಕ್ರಿಯೆಗೆ ಸಹಾಯ ಮಾಡಲಿದ್ದಾರೆ.
ಗೊಂದವಿದ್ದರೆ ಸಹಾಯವಾಣಿ
ಯಾವುದೇ ಗೊಂದಲವಿದ್ದರೂ ಮೊಬೈಲ್ ಸಂಖ್ಯೆ: 8147500500 ಎಸ್ಎಂಎಸ್ ಮಾಡುವುದರ ಮುಖಾಂತರ ಬಗೆ ಹರಿಸಿಕೊಳ್ಳಬಹುದು. 1902 ಸಹಾಯವಾಣಿಗೆ ಕರೆ ಮಾಡಿ ಕೂಡ ಈ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ, ಯಾರಾದರೂ ಹಣ ಕೇಳಿದರೆ ಸಿಡಿಪಿಒಗಳ ಗಮನಕ್ಕೆ ತರುವಂತೆ ಕೋರಲಾಗಿದೆ.
English summary
Check out How to Apply for Gruha Lakshmi Yojana, Get Step-by-Step guide on how and where to apply for 2000 monthly allowances for Women in Kannada, Gruha Lakshmi Helpline.
Story first published: Saturday, July 15, 2023, 13:18 [IST]