Gruha Lakshmi : ‘ಗೃಹ ಲಕ್ಷ್ಮಿ’ ಅರ್ಜಿ ಸ್ವೀಕರಿಸಲು ಮುಹೂರ್ತ ಫಿಕ್ಸ್: ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ | Gruha Lakshmi: Application Process Will Commence from July 17th or 19th

Karnataka

oi-Naveen Kumar N

|

Google Oneindia Kannada News

ಕರ್ನಾಟಕ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ಮುಹೂರ್ತ ಫಿಕ್ಸ್ ಮಾಡಲಾಗಿದೆ. ಜುಲೈ 17 ಅಥವಾ 19ರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹತ್ವದ ಯೋಜನೆಗೆ ಜುಲೈ 17ರಂದು ಕೇಂದ್ರದ ಕಾಂಗ್ರೆಸ್ ನಾಯಕರು ಚಾಲನೆ ನೀಡಬೇಕು ಎಂದು ಕೇಳಲಾಗಿದೆ. ಸಮಯ ಹೊಂದಾಣಿಕೆ ಆದರೆ ಕೇಂದ್ರದ ಕಾಂಗ್ರೆಸ್ ನಾಯಕರು ಸೋಮವಾರ (ಜುಲೈ 17) ಸಂಜೆ 5ಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಅವರು ಬರದೇ ಇದ್ದಲ್ಲಿ ಬುಧವಾರ (ಜುಲೈ 19) ಸಂಜೆ 5ಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನ 2 ಗಂಟೆಯ ನಂತರ ಬಗ್ಗೆ ಸ್ಪಷ್ಟನೆ ನೀಡಲಾಗುವುದು ಎಂದರು.

 Gruha Lakshmi: Application Process Will Commence from July 17th or 19th

ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ನೋಂದಾಯಿಸಿಕೊಂಡವರು, ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು, ಟ್ಯಾಕ್ಸ್ ಮತ್ತು ಜಿಎಸ್‌ಟಿ ಕಟ್ಟದೇ ಇರುವವರು ಈ ಯೋಜನೆಯ ಲಾಭ ಪಡೆಯಬಹುದು.

ಆಧಾರ್ ಲಿಂಕ್ ಆಗದವರು ಪಾಸ್‌ಬುಕ್ ಕೊಡಬೇಕು

ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿ, ಆಧಾರ್ ನಂಬರ್ ಇರುವುದು ಕಡ್ಡಾಯವಾಗಿರುತ್ತದೆ. ಆಧಾರ್ ಲಿಂಕ್ ಆಗಿರದ ಖಾತೆಗೆ ಹಣ ಬರಬೇಕು ಎಂದರೆ ಬೇರೆ ಪಾಸ್ ಬುಕ್ ಅನ್ನು ಕೂಡ ನೀಡಬಹುದು. ಆ ಪಾಸ್‌ಬುಕ್‌ಅನ್ನು ಸಾಫ್ಟ್‌ವೇರ್ ನಲ್ಲಿ ಅಪ್‌ಲೋಡ್ ಮಾಡುತ್ತೇವೆ, ಆ ಮಾಹಿತಿ ನಮ್ಮ ಸಿಡಿಪಿಒ ಲಾಗಿನ್‌ಗೆ ಹೋಗಲಿದೆ, ಅದರ ಜೊತೆಯಲ್ಲಿ ತಹಶೀಲ್ದಾರ್ ತಾಲೂಕ್ ಪಂಚಾಯಿತ್ ಇಒ ಲಾಗಿನ್‌ಗೂ ಹೋಗಲಿದೆ.

ಈ ಪಾಸ್‌ಬುಕ್ ಪಡಿತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥೆಯ ಜೊತೆ ಹೊಂದಾಣಿಕೆಯಾದರೆ ಅಲ್ಲಿ ಆರ್ಡರ್ ಕಾಪಿ ಕೊಡಲಾಗುವುದು. ಸಿಡಿಪಿಒ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ತಲುಪಿಸಲಾಗುವುದು ಎಂದು ಹೇಳಿದರು.

ಏನೇನು ದಾಖಲೆ ಬೇಕು?

ಆಧಾರ್ ಲಿಂಕ್ ಇರುವ ಅಕೌಂಟ್‌ಗೆ ಹಣ ಬರಲಿ ಎಂದಾಗ ಅವರು ಅರ್ಜಿ ಸಲ್ಲಿಕೆ ವೇಳೆ ಪಾಸ್‌ಬುಕ್ ತರುವ ಅಗತ್ಯವಿರುವುದಿಲ್ಲ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತಂದರೆ ಸಾಕು, ಅದರ ಜೊತೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

1.28 ಕೋಟಿ ಕುಟುಂಬಗಳು ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಆಧಾರ್ ಕಾರ್ಡ್, ಪಡಿತರ ಚೀಟಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಅರ್ಜಿ ಸಲ್ಲಿಸುವ ಸಮಯ, ದಿನಾಂಕ, ಸ್ಥಳದ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ನೀಡಲಾಗುವುದು. ಆ ಸಮಯದಲ್ಲಿ ಅವರು ತಮಗೆ ಸಮೀಪದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಜನಸಂದಣಿಯನ್ನು ತಪ್ಪಿಸಬಹುದು ಎಂದು ಹೇಳಿದರು.

ಒಂದು ವೇಳೆ ನೀಡಿರುವ ದಿನಾಂಕ, ಸಮಯವನ್ನು ತಪ್ಪಿಸಿಕೊಂಡರೆ ಅಂತಹವರು ನಿಗರದಿಪಡಿಸಿದ ಕೇಂದ್ರದಲ್ಲಿ ಸಂಜೆ 5 ಗಂಟೆಯ ನಂತರ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ ಇದು ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.

ಹಣ ಕೊಡಬೇಡಿ

ಯೋಜನೆ ಬಗ್ಗೆ ಯಾವುದೇ ಗೊಂದಲವಿದ್ದರೂ ಮೊಬೈಲ್ ಸಂಖ್ಯೆ: 8147500500 ಈ ಸಂಖ್ಯೆಗೆ ಎಸ್ಎಂಎಸ್‌ ಮಾಡುವುದರ ಮುಖಾಂತರ ಬಗೆ ಹರಿಸಿಕೊಳ್ಳಬಹುದು ಎಂದು ಹೇಳಿದರು. 1902 ಸಹಾಯವಾಣಿಗೆ ಕರೆ ಮಾಡಿ ಕೂಡ ಈ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಇದರ ಜೊತೆಗೆ ಪ್ರಜಾಪ್ರತಿನಿಧಿ ಎಂದು ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರನ್ನು 1000 ಜನಸಂಖ್ಯೆ ಇದ್ದಾಗ ಇಬ್ಬರು (ಒಬ್ಬರು ಮಹಿಳೆ, ಒಬ್ಬರು ಪುರುಷ) ನೇಮಕ ಮಾಡಲಾಗುತ್ತದೆ. ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಿಕೊಳ್ಳಲಿದ್ದಾರೆ. ಇದು ಸಂಪೂರ್ಣ ಉಚಿತವಾಗಿರುತ್ತದೆ, ಯಾವುದೇ ಕಾರಣಕ್ಕೂ ಇದಕ್ಕೆ ಹಣ ಕೊಡಬಾರದು ಎಂದು ಅವರು ಮನವಿ ಮಾಡಿದರು.

ಯಾರೇ ಹಣ ಕೇಳಿದರೂ ತಕ್ಷಣ ಸಿಡಿಪಿಒಗಳ ಗಮನಕ್ಕೆ ತೆಗೆದುಕೊಂಡು ಬನ್ನಿ, ಇಲ್ಲ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿದರು ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಗೃಹಜ್ಯೋತಿ ರೀತಿ ಇದನ್ನು ತಾವೇ ಸ್ವತಃ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ, ನಿಗದಿತ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

English summary

Karnataka’s Women and Child Development Minister, Laxmi Hebbalkar, has confirmed that the application process for the Gruha Lakshmi scheme will commence on July 17th or 19th.

Story first published: Saturday, July 15, 2023, 12:01 [IST]

Source link