India
oi-Ravindra Gangal

ನವದೆಹಲಿ, ಜೂನ್ 19: ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ನೀಡಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನು ಬದಲಿಸುವ ಮಸೂದೆಯ ವಿರುದ್ಧ ಮತ ಚಲಾಯಿಸಲು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ. ಆದರೆ, ಈ ಯತ್ನದಲ್ಲಿ ಬಿಜೆಪಿ ಹಾಗೂ ಅದರ ಅಂಗಪಕ್ಷಗಳನ್ನು ಸೋಲಿಸಲು ಕೇಜ್ರಿವಾಲ್ ಸಫಲರಾಗುತ್ತಾರಾ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಬಿಜು ಜನತಾ ದಳದಂತಹ ಬೆಂಬಲಿತ ಪಕ್ಷಗಳನ್ನು ಹೊಂದಬಹುದು. ಆದರೂ ಸಂಖ್ಯೆಯ ದೃಷ್ಟಿಯಿಂದ ಬಿಜೆಪಿಗೆ ಅಷ್ಟು ಸುಲಭದ ಹಾದಿಯಲ್ಲ ಎಂಬ ಅಭಿಪ್ರಾಯವನ್ನು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಹೊಸ ಶಾಸನಬದ್ಧ ಪ್ರಾಧಿಕಾರವನ್ನು ರಚಿಸಲು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವು ಸಿಎಂ ನೇತೃತ್ವದಲ್ಲಿರುತ್ತದೆ. ಆದರೂ, ಹೆಚ್ಚಿನ ಅಧಿಕಾರವನ್ನು ಕೇಂದ್ರ ಉಳಿಸಿಕೊಂಡಿರುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಗಳ ವರ್ಗಾವಣೆ ಮತ್ತು ಪೋಸ್ಟಿಂಗ್ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಿರ್ಧರಿಸಲು ಕೇಂದ್ರದ ಅನುಮತಿಯನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕಾಗುತ್ತದೆ.
ಈ ಸುಗ್ರೀವಾಜ್ಞೆ ಮೂಲಕ ಹೆಚ್ಚಿನ ಶಾಸಕಾಂಗ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ರಾಜ್ಯ ಸರ್ಕಾರ ಹೊಂದಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೂ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ರಾಜ್ಯ ಸರ್ಕಾರದ ಅಧಿಕಾರವನ್ನು ಕಿತ್ತು ಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ರಾಜ್ಯಸಭೆಯ ಪ್ರಸ್ತುತ ಬಲವು 238 ಆಗಿದ್ದು, ಅದರಲ್ಲಿ ಏಳು ಖಾಲಿ ಸ್ಥಾನಗಳಿವೆ. ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಎರಡು ನಾಮನಿರ್ದೇಶಿತ ಮತ್ತು ಪಶ್ಚಿಮ ಬಂಗಾಳದಿಂದ ಒಂದು ಸ್ಥಾನ ಖಾಲಿ ಇದೆ. ಮೇಲ್ಮನೆಯಲ್ಲಿ ಬಹುಮತದ ಸಂಖ್ಯೆ 120 ಆಗಿದೆ.

ಬಿಜೆಪಿ ನೇತೃತ್ವದ ಎನ್ಡಿಎ ಲೋಕಸಭೆಯಲ್ಲಿ ಬಹುಮತವನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಅದು ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) ಮತ್ತು ಬಿಜು ಜನತಾ ದಳ (ಬಿಜೆಡಿ) ನಂತಹ ವಿರೋಧ ಪಕ್ಷಗಳ ಬೆಂಬಲ ದೊರೆತಾಗ ಮಾತ್ರ ಬಿಜೆಪಿಗೆ ನೇತೃತ್ವದ ಒಕ್ಕೂಟಕ್ಕೆ ಬಹುಮತ ಸಿಗಬಹುದು.
ಪ್ರಸ್ತುತ ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯೆ 106 ಆಗಿದೆ. ಇದರಲ್ಲಿ ಬಿಜೆಪಿಯು 93 ಸದಸ್ಯರನ್ನು ಹೊಂದಿದೆ. ಇದರಲ್ಲಿ ಐದು ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಮಹೇಶ್ ಜೇಠ್ಮಲಾನಿ, ರಾಕೇಶ್ ಸಿನ್ಹಾ, ಸೋನಾಲ್ ಮಾನ್ಸಿಂಗ್, ರಾಮ್ ಶಕಲ್ ಮತ್ತು ಗುಲಾಮ್ ಅಲಿ ಖತಾನಾ ಐವರು ನಾಮನಿರ್ದೇಶಿತ ಸದಸ್ಯರು.
ಉಳಿದ ಐದು ನಾಮನಿರ್ದೇಶಿತ ಸದಸ್ಯರೆಂದರೆ, ರಂಜನ್ ಗೊಗೊಯ್, ವೀರೇಂದ್ರ ಹೆಗ್ಗಡೆ, ಪಿ.ಟಿ. ಉಷಾ, ವಿ. ವಿಜಯೇಂದ್ರ ಪ್ರಸಾದ್ ಮತ್ತು ಇಳಯರಾಜ. ಇವರು ಯಾವುದೇ ಪಕ್ಷಕ್ಕೆ ಸಂಬಂಧಿಸದಿದ್ದರೂ, ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯಿದೆ. ಆಗ ಮೇಲ್ಮನೆಯಲ್ಲಿ ಎನ್ಡಿಎ ಒಟ್ಟು ಸಂಖ್ಯೆ 111 ಆಗಿರಲಿದೆ.

ವೈಎಸ್ಆರ್ಸಿಪಿ, ಬಿಜೆಡಿ, ಬಿಎಸ್ಪಿ, ಟಿಡಿಪಿ ಮತ್ತು ಜನತಾದಳದ (ಜಾತ್ಯತೀತ) 21 ಸದಸ್ಯರನ್ನು ಹೊರತುಪಡಿಸಿ ಪ್ರತಿಪಕ್ಷಗಳ ಸಂಖ್ಯೆ 106 ಆಗಿದೆ. ರಾಜ್ಯಸಭೆಯಲ್ಲಿ ಎಎಪಿ 10 ಸದಸ್ಯರನ್ನು ಒಳಗೊಂಡಿದೆ.
ವೈಎಸ್ಆರ್ಸಿಪಿ, ಬಿಜೆಡಿ, ಬಿಎಸ್ಪಿ, ಟಿಡಿಪಿ ಮತ್ತು ಜನತಾ ದಳ (ಜಾತ್ಯತೀತ) ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸಲಿಲ್ಲ. ಆದಾಗ್ಯೂ, ಸುಗ್ರಿವಾಜ್ಞೆಯು ರಾಜ್ಯದ ಹಕ್ಕನ್ನು ಒಳಗೊಂಡಿರುವ ಕಾರಣ ಸುಗ್ರೀವಾಜ್ಞೆ ವಿಷಯದ ಬಗ್ಗೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.
ವೈಎಸ್ಆರ್ ಕಾಂಗ್ರೆಸ್ ಮತ್ತು ಬಿಜೆಡಿ ರಾಜ್ಯಸಭೆಯಲ್ಲಿ ತಲಾ ಒಂಬತ್ತು ಸದಸ್ಯರನ್ನು ಒಳಗೊಂಡಿದೆ. ಬಿಜೆಪಿಯೊಂದಿಗೆ ಹೋದರೆ, ಎನ್ಡಿಎ ಸಂಖ್ಯೆಗಳು 129 ಕ್ಕೆ ಏರುತ್ತದೆ. ಹಿಂದೆ, ವೈಎಸ್ಆರ್ಸಿಪಿ ಮತ್ತು ಬಿಜೆಡಿ ಬಿಜೆಪಿಯನ್ನು ಬೆಂಬಲಿಸಿದ್ದವು ಉದಾಹರಣೆ ಇದೆ. ಆದರೂ, ಮೋದಿ ನೇತೃತ್ವದ ಸರ್ಕಾರಕ್ಕೆ ಇದು ಸುಗಮದ ಹಾದಿ ಅಲ್ಲ.
English summary
Delhi Ordinance: Bill is likely to be introduced in Parliament during the upcoming monsoon session
Story first published: Monday, June 19, 2023, 12:44 [IST]