India
oi-Malathesha M

ಬೆಂಗಳೂರು: ಭಾರತದ ಕನಸಿನ ಯೋಜನೆ ಇಂದು ಬಾಹ್ಯಾಕಾಶಕ್ಕೆ ಹಾರಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವೇ ಕಿಂಗ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಈ ನಡುವೆ ಹಲವು ಗಣ್ಯರು ‘ಚಂದ್ರಯಾನ -3’ರ ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ರೀತಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ‘ಚಂದ್ರಯಾನ -3’ರ ಬಗ್ಗೆ ಮಾತನಾಡಿದ್ದಾರೆ.
ಹೌದು, ಇಸ್ರೋ ಸಕ್ಸಸ್ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಎಚ್ಡಿಕೆ ಚಂದ್ರಯಾನ-3 ನೌಕೆಯನ್ನ ಉಡಾವಣೆ ಮಾಡಿ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ ಮಾಡಿದ ಇಸ್ರೋ ಸಂಸ್ಥೆಯನ್ನ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿವೆ. ದೇಶವೇ ಹೆಮ್ಮೆಪಡುತ್ತದೆ. 45 ದಿನದ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. ಅಪರಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದಿರನ ಅಂಗಳಕ್ಕೆ ನೌಕೆಯನ್ನ ಉಡ್ದಯನ ಮಾಡಿದ ಇಸ್ರೋ ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದೆಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೋ ಸಾಧನೆಗೆ ಕರ್ನಾಟಕದ ಕೊಡುಗೆ
ಇಸ್ರೋದ ಪ್ರತಿ ಯೋಜನೆಗೂ ಕರ್ನಾಟಕದ ಕೊಡುಗೆ ಇರುತ್ತದೆ. ಹೀಗೆ ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರ. ಜಗತ್ತು ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣವನ್ನು ದೃಶ್ಯ ಮಾಧ್ಯಮದ ಮೂಲಕ ನಾನೂ ಕಣ್ತುಂಬಿಕೊಂಡಿದ್ದೇನೆ ಎಂದಿದ್ದಾರೆ ಎಚ್ಡಿಕೆ. ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಸೇರಿ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಇತರೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ಭಾರತದ ಯಶಸ್ವಿ ಯಾತ್ರೆ
ಇಂದು ಮಧ್ಯಾಹ್ನ ಸರಿಯಾಗಿ 2:35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ‘ಚಂದ್ರಯಾನ-3’ ರಾಕೆಟ್ ಲಾಂಚ್ ಆಗಿ ಯಶಸ್ಸು ಕಂಡಿದೆ. 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿದೆ. ಭೂಮಿಯಿಂದ 3,84,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್.
ಚಂದ್ರನ ಮೇಲೆ ಭಾರತದ ಹೆಜ್ಜೆ
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು ‘ಚಂದ್ರಯಾನ -3’ ಕೆಲವೇ ತಿಂಗಳಲ್ಲಿ ತನ್ನ ಗುರಿ ತಲುಪಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.
ಒಟ್ನಲ್ಲಿ ಭಾರತದ ಗೆಲುವಿಗೆ ಇಡೀ ಜಗತ್ತೇ ಸಂಭ್ರಮಿಸುತ್ತಿದೆ. ಏಕೆಂದರೆ ಅಕಸ್ಮಾತ್ ನಮ್ಮ ಹೆಮ್ಮೆಯ ‘ಇಸ್ರೋ’ ಸಂಸ್ಥೆ ಚಂದ್ರನ ಮೇಲೆ ಮಾನವರು ಬದುಕುವ ಸಾಧ್ಯತೆಗಳ ಕುರಿತು ಪತ್ತೆ ಹಚ್ಚಿದರೆ, ಭವಿಷ್ಯದಲ್ಲಿ ಹೊಸ ಯುಗವೇ ಆರಂಭವಾಗುತ್ತದೆ. ಹೀಗಾಗಿ ಪ್ರಪಂಚವೇ ಇಸ್ರೋ ಯೋಜನೆ ಮೇಲೆ ಕಣ್ಣಿಟ್ಟು ಕೂತಿತ್ತು. ಇದೀಗ ಯಶಸ್ವಿಯಾಗಿ ಉಡಾವಣೆಯಾದ ‘ಚಂದ್ರಯಾನ -3’ ಇನ್ನು ಕೆಲವೇ ವಾರದಲ್ಲಿ ಯಶಸ್ವಿಯಾಗಿ ತನ್ನಲ್ಲಿರುವ ರೋವರ್ನ ಕೂಡ ಚಂದ್ರನ ಮೇಲೆ ಇಳಿಸಲಿದೆ.
English summary
HD Kumaraswamy reaction on Chandrayaan 3 Launch
Story first published: Friday, July 14, 2023, 19:01 [IST]