India
oi-Ravindra Gangal
ಹೈದರಾಬಾದ್, ಜೂನ್ 19: ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ‘ಆಪರೇಷನ್ ಆಕರ್ಷ್’ ಅನ್ನು ಗೌಪ್ಯವಾಗಿ ನಡೆಸುತ್ತಿರುವುದು ಬಿಆರ್ಎಸ್ ಮತ್ತು ಬಿಜೆಪಿ ಪಾಳಯದಲ್ಲಿ ತಳಮಳ ಸೃಷ್ಟಿಮಾಡಿದೆ. ಕಾಂಗ್ರೆಸ್ನ ತಂತ್ರಗಾರಿಕೆ ಹಾಗೂ ರಾಜಕೀಯ ನಡೆಗಳ ಬಗ್ಗೆ ವಿರೋಧಿ ನಾಯಕರು ಗೊಂದಲಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೂಲಕ ಆಪರೇಷನ್ ಆಕರ್ಷ್ಗೆ ಕಾಂಗ್ರೆಸ್ ಕೈಹಾಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ವಿರೋಧ ಪಕ್ಷಗಳ ಹಲವಾರು ನಾಯಕರು ಬೆಂಗಳೂರಿನಲ್ಲಿ ಗುಪ್ತವಾಗಿ ಅಲೆದಾಡುತ್ತಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣ ಕಾಂಗ್ರೆಸ್ ನಾಯಕರೂ ಸಹ ನೆರೆಯ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುತ್ತಾಡುತ್ತಿರುವ ವಿಚಾರ ತನ್ನದೇ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ಇದು ಪ್ರತಿಸ್ಪರ್ಧಿ ಪಾಳಯಗಳಲ್ಲಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಆರ್ಎಸ್ನ ಅತೃಪ್ತ ನಾಯಕರು ಕಳೆದ ವಾರ ಬೆಂಗಳೂರಿಗೆ ಭೇಟಿ ನೀಡಿದ್ದರು. ಆದರೆ, ಅವರ ಪ್ರವಾಸಗಳ ಕುರಿತು ಎಲ್ಲವೂ ಗೌಪ್ಯವಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಸಿರುವ ಅವರ ಸಭೆಗಳ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಈ ಕುರಿತು ರಾಜಕೀಯ ನಾಯಕರು ಪ್ರತಿಕ್ರಿಯಿಸಿಲ್ಲ.
ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ತೆಲಂಗಾಣದ ನಾಯಕರಲ್ಲಿ ಬಿಎಸ್ಆರ್ನ ಹಾಲಿ ಎಂಎಲ್ಸಿ ಸಹ ಇದ್ದಾರೆ ಎಂದು ಹೇಳಲಾಗತ್ತಿದೆ. ಅವರಿಗೆ ತಮ್ಮದೇ ಪಕ್ಷದ ಬಗ್ಗೆ ಅತೃಪ್ತಿ ಇದೆ ಎಂದು ವರದಿಯಾಗಿದೆ. ಅವರಾಗಲಿ ಅಥವಾ ಕಾಂಗ್ರೆಸ್ ನಾಯಕರಾಗಲಿ ಸಭೆಯ ಬಗ್ಗೆ ಒಂದು ಮಾತನ್ನೂ ಹೊರಹಾಕಿಲ್ಲವೆಂಬುದು ಕುತೂಹಲ ಮೂಡಿಸಿದೆ.
ಏತನ್ಮಧ್ಯೆ, ಅಮಾನತುಗೊಂಡಿರುವ ಬಿಆರ್ಎಸ್ ಮುಖಂಡರಾದ ಜೂಪಲ್ಲಿ ಕೃಷ್ಣರಾವ್ ಮತ್ತು ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಇತ್ತೀಚಿನ ದಿನಗಳಲ್ಲಿ ಶಿವಕುಮಾರ್ ಅವರನ್ನು ಎರಡು ಬಾರಿ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕುತೂಹಲಕಾರಿಯಾಗಿ, ತೆಲಂಗಾಣ ಕಾಂಗ್ರೆಸ್ ಘಟಕದ ಅಧ್ಯಕ್ಷರು ಭಾನುವಾರ ಬೆಳಿಗ್ಗೆ ಹೈದರಾಬಾದ್ನಲ್ಲಿ ಕೆಲವು ಸಭೆಗಳನ್ನು ನಡೆಸಿದ್ದಾರೆ. ಆ ನಂತರ ಸಂಜೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.
ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ, ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ
ಈ ಭೇಟಿಗಳು ಮತ್ತು ಸಭೆಗಳ ಸುತ್ತಲಿನ ಗೌಪ್ಯತೆಯು ಪಕ್ಷದ ಆಪರೇಷನ್ ಆಕರ್ಷ್ ಅನ್ನು ಬೆಂಗಳೂರಿನಿಂದ ನಡೆಸಲಾಗುತ್ತಿದೆ ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ. ಶಿವಕುಮಾರ್ ಎಐಸಿಸಿ ಉನ್ನತ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ್ದು, ಕಾಂಗ್ರೆಸ್ ಸೇರಲಿರುವ ಆಕಾಂಕ್ಷಿ ನಾಯಕರಿಗೆ ಕೆಲವು ಭರವಸೆಗಳನ್ನು ನೀಡಲಿದ್ದಾರೆ ಎಂದು ನಂಬಲಾಗಿದೆ.
ಬೆಂಗಳೂರಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕರಿಂದಾಗಲೀ, ಬಿಆರ್ಎಸ್ ಅಥವಾ ಬಿಜೆಪಿ ಪಕ್ಷಗಳ ಮುಖಂಡರಿಂದಾಗಲೀ ಯಾವುದೇ ಮಾಹಿತಿ ಹೊರಬರುತ್ತಿಲ್ಲ ಎಂಬುದು ಹೆಚ್ಚು ಆಸಕ್ತಿದಾಯಕ ಸಂಗತಿಯಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಶಿವಕುಮಾರ್ ಅವರನ್ನು ನಿಜವಾಗಿಯೂ ಭೇಟಿ ಮಾಡುತ್ತಿರುವವರು ಯಾರು ಎಂಬ ಬಗ್ಗೆ ಎರಡು ವಿರೋಧಿ ಪಕ್ಷಗಳು ಗೊಂದಲದಲ್ಲಿವೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಎಂಎಲ್ಸಿ ಕೂಚುಕುಳ್ಳ ದಾಮೋದರ್ ರೆಡ್ಡಿ ಅವರು ತಮ್ಮ ಪಕ್ಷಕ್ಕೆ ಹಲವು ಪ್ರಮುಖ ನಾಯಕರು ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆ ನಂತರ ಹೆಚ್ಚಿನ ಬಿಆರ್ಎಸ್ ನಾಯಕರು ಟಿಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ ಮತ್ತು ಶಿವಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಮೂವರು ಬಿಆರ್ಎಸ್ ಶಾಸಕರು ಸಹ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗುತ್ತಿದೆ. ಅವರು ಕಾಂಗ್ರೆಸ್ಗೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
English summary
Operation Aakarsh Congress for Telangana Election 2023: The New Poll strategy by Hyderabad Congress Creates panic situation among BRS and BJP Leaders in Telangana
Story first published: Monday, June 19, 2023, 13:20 [IST]