India
oi-Naveen Kumar N

ನವದೆಹಲಿ, ಜೂನ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಕೇಂದ್ರದ ನೀತಿಯಿಂದ ಬಡವರಿಗೆ ಅಕ್ಕಿ ಪೂರೈಕೆ ಮಾಡಲು ಆಗಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು.
ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ, “ಇತ್ತೀಚೆಗೆ ಕೇಂದ್ರ ಸರ್ಕಾರ ಮಾಡಿರುವ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ಬಡವರ ಎರಡು ಹೊತ್ತಿನ ಊಟಕ್ಕೂ ಸಮಸ್ಯೆ ಮಾಡುತ್ತದೆ. ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಕೇಂದ್ರ ಧೋರಣೆ ಬದಲಾದರೆ ಒಳ್ಳೆಯದು” ಎಂದು ಅಮಿತ್ ಶಾ ಅವರ ಬಳಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಮಾತುಗಳನ್ನು ಕೇಳಿದ ಅಮಿತ್ ಗುರುವಾರ ಇದರ ಬಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜೊತೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
5 ಕೆ.ಜಿ. ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರದ ನಿರಾಕರಣೆ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ನಡೆಸಿದ ಮೊದಲ ಸಭೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅನ್ನಭಾಗ್ಯ: ಗೃಹಸಚಿವ ಅಮಿತ್ ಶಾ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ, ಅಕ್ಕಿ ಸರಬರಾಜು ಪ್ರಸ್ತಾಪ ಸಾಧ್ಯತೆ
ಆದರೆ ಇದಕ್ಕೆ ಬೇಕಾದ ಹೆಚ್ಚುವರಿ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೇಂದ್ರದ ನೀತಿಯ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬೇರೆ ರಾಜ್ಯಗಳಿಂದ ಖರೀದಿಸಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತಿಸಿದೆಯಾದರೂ, ಸಾಗಾಣಿಕ ವೆಚ್ಚ ದುಬಾರಿಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಆಹಾರ ನಿಗಮದಿಂದ ರಾಜ್ಯಕ್ಕೆ ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡದೆ ಕಾಂಗ್ರೆಸ್ ಆಡಳಿತದ ಚುನಾವಣಾ ಭರವಸೆಯನ್ನು “ವಿಫಲಗೊಳಿಸಲು” ಸಂಚು ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನ ಸಚಿವರು ಕಳೆದ ಕೆಲವು ದಿನಗಳಿಂದ ಆರೋಪಿಸುತ್ತಿದ್ದಾರೆ.
ಹೆಚ್ಚಿನ ಪ್ರಮಾಣದ ದಾಸ್ತಾನು ಹೊಂದಿರುವ ಎಫ್ಸಿಐ ಕರ್ನಾಟಕದಲ್ಲಿ ಜೂ.12ರಂದು ಕೆ.ಜಿ.ಗೆ 34 ರೂ. ಬೆಲೆಯಲ್ಲಿ 2,28,425.750 ಮೆಟ್ರಿಕ್ ಟನ್ ಅಕ್ಕಿಯನ್ನು ನೀಡಲು ಒಪ್ಪಿಗೆ ನೀಡಿದ ಒಂದು ದಿನದ ನಂತರ, ರಾಜ್ಯ ಸರ್ಕಾರಗಳಿಗೆ ಒಎಂಎಸ್ಎಸ್ (ಡಿ) ಅಡಿಯಲ್ಲಿ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಕೇಂದ್ರವು ಸ್ಥಗಿತಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಅಕ್ಕಿಯನ್ನು ಪೂರೈಸುವಂತೆ ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್, ಛತ್ತೀಸ್ಗಢ, ಆಂಧ್ರಪ್ರದೇಶದಂತಹ ವಿವಿಧ ರಾಜ್ಯಗಳನ್ನು ಸಂಪರ್ಕಿಸಿದೆ. ಆದರೂ, ರಾಜ್ಯಕ್ಕೆ ಅಗತ್ಯವಿರುವ 2,28,000 ಮೆಟ್ರಿಕ್ ಟನ್ ಅನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಈ ರಾಜ್ಯಗಳಿಂದ ಅಕ್ಕಿ ಕೊಂಡರೂ ಸಾಗಾಣಿಕ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.
“ನಾವು ಎನ್ಸಿಸಿಎಫ್, ಎನ್ಎಎಫ್ಇಡಿ, ಕೇಂದ್ರೀಯ ಭಂಡಾರ್ನಂತಹ ಕೇಂದ್ರ ಸರ್ಕಾರದ ಏಜೆನ್ಸಿಗಳಿಂದ ಕೊಟೇಶನ್ಗಳನ್ನು ಕರೆದಿದ್ದೇವೆ. ಅವರಿಂದ ಮಾಹಿತಿ ತಿಳಿದ ನಂತರ ಮುಂದಿನ ಯೋಜನೆ ಬಗ್ಗೆ ನಿರ್ಧರಿಸುತ್ತೇವೆ. ಯೋಜನೆಯನ್ನು ಜಾರಿಗೆ ತರಲು ಸ್ವಲ್ಪ ವಿಳಂಬವಾಗಬಹುದು. ಕೇಂದ್ರ ಸರ್ಕಾರ ರಾಜಕೀಯ ಮಾಡಿದ್ದಾರೆ,” ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
English summary
Karnataka Chief Minister Siddaramaiah discusses rice supply with Union Home Minister Amit Shah, focusing on the state’s ‘Anna Bhagya’ scheme. which provides additional 5 kg of rice for each member of BPL families.
Story first published: Thursday, June 22, 2023, 7:12 [IST]