Karnataka
oi-Reshma P
ಬೆಂಗಳೂರು, ಜುಲೈ 12: ವಿಧಾನಮಂಡಲ ಅಧಿವೇಶದಲ್ಲಿ ಇಂದು ವಿರೋಧ ಪಕ್ಷದ ನಾಯಕರ ವಿಚಾರವಾಗಿ ಉಭಯಸದನದ ನಾಯಕರು ಚರ್ಚೆ ನಡೆಸುತ್ತಿದ್ದು, ಸದನದಲ್ಲಿ ಪದೇ ಪದೇ ಎದ್ದು ನಿಲ್ಲುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.
ಹೌದು, ಯತ್ನಾಳ್ ಅವರೇ ಯಾಕೆ ಎದ್ದು ಪದೇ ಪದೇ ಮಾತಾಡ್ತೀರಿ.ನೀವು ವಿಪಕ್ಷದ ಸ್ಥಾನದ ಒಬ್ಬ ಆಕಾಂಕ್ಷಿ ಎಂದು ಗೊತ್ತಿದೆ. ನನ್ನನ್ನು ವಿರೋಧ ಪಕ್ಷ ನಾಯಕನನ್ನಾಗಿ ಮಾಡೇ ಮಾಡುತ್ತಾರೆ ಎಂದು ಕೊಂಡಿದ್ದೀರಾ. ಆದರೆ, ನನಗಿರುವ ಮಾಹಿತಿ ಪ್ರಕಾರ ನಿಮ್ಮನ್ನ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲ್ಲ ಎಂದು ಸದನದಲ್ಲಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ಆಗಲ್ಲ, ಆರಗ ಆಕಾಂಕ್ಷಿ ಅಲ್ಲ, ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ ಹಾಗೂ ಆರ್ ಅಶೋಕ್ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಾತಿನ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದ್ರಿ, ಕುಮಾರಸ್ವಾಮಿ ಸಿಎಂ ಆದರು. ನಾನು ವಿಪಕ್ಷ ನಾಯಕ ಆಗಲ್ಲ ಅಂತ ಹೇಗೆ ಹೇಳ್ತೀರಿ
ಈಗಾಗಲೇ ನೀವು ವಿಪಕ್ಷ ನಾಯಕ ಸ್ಥಾನ ಕೂಡ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದೀರಾ..? ಎಂದು ಪ್ರಶ್ನಿಸಿದ ಅವರು, ನೀವೆಷ್ಟೇ ಬೆಂಕಿ ಹಚ್ಚಿದ್ರೂ ಹಚ್ಕೊಳ್ಳಲ್ಲ. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್ಮೆಂಟ್ ಮಾಡ್ಕೊಂಡಿದ್ದೀರಾ ಅಂತಾಯ್ತು ಎಂದರು.
ಇನ್ನೂ ಬಸವನಗೌಡ ಪಾಟೀಲ್ ಯತ್ನಾಳ ಮಾತಿಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ ಮಾತು ಮುಂದುವರಿಸಿ, ನನ್ನ ರಾಜಕೀಯ ಜೀವನದಲ್ಲಿ ಅಡ್ಜಸ್ಟಮೆಂಟ್ ರಾಜಕೀಯ ಮಾಡಿಲ್ಲ. ನೀನು ಎರಡ್ಮೂರು ಬಾರಿ ಶಾಸಕ ಆಗಿರಬೇಕು ಅಷ್ಟೇ. ನಾನು ದೇಶಪಾಂಡೆ, ಯಡಿಯೂರಪ್ಪ, ಬಿ ಆರ್ ಪಾಟೀಲ್ ಕಾಲದಲ್ಲಿ ಶಾಸಕ ಆಗಿದ್ದೇನೆ. ನನ್ನ ಜೀವನದಲ್ಲಿ ಅಡ್ಜಸ್ಟಮೆಂಟ್ ಗೊತ್ತಿಲ್ಲ. ಯಾರ ಜತೆಗಾದರೂ ಅಡ್ಜಸ್ಟ್ಮೆಂಟ್ ಮಾಡ್ಕೊಂಡಿರೋದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
English summary
assembly session: CM Siddaramaiah Said That Basanagouda Patil Yatnal Will Not Be The Leader Of The Opposition
Story first published: Wednesday, July 12, 2023, 14:04 [IST]