Travel
lekhaka-Yogaraja G H
ದಾವಣಗೆರೆ, ಜುಲೈ, 07: ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ. ಹಾಗೆಯೇ ಇದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಳೆಬಂದಂತಾಗಿದೆ. ಅಲ್ಲದೆ ದಾವಣಗೆರೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯವೂ ಮಹಿಳೆಯರ ದಂಡೇ ಭೇಟಿ ನೀಡುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿರುವ ಪುಷ್ಕರಣಿ ನೋಡಲು ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಇಲ್ಲಿನ ಸೌಂದರ್ಯ ಸವಿದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಲು ಬರುತ್ತಾರೆ. ಆದರೆ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳು, ಚನ್ನಗಿರಿ ತಾಲೂಕಿನ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರ ದಂಡು ಹರಿದುಬರತೊಡಗಿದೆ.
ಸಂತೆಬೆನ್ನೂರು ಚನ್ನಗಿರಿ ತಾಲೂಕಿನಲ್ಲಿದೆ. ಇಲ್ಲಿನ ಪುಷ್ಕರಣಿ ಸುಂದರ ಪ್ರವಾಸಿ ತಾಣವೂ ಹೌದು. ಕರುನಾಡು ಶಿಲ್ಪ ಕಲೆಗಳ ನೆಲೆವೀಡು. ಕಲೆ-ಸಾಹಿತ್ಯದ ತವರೂರು. ಪ್ರವಾಸಿಗರಿಗೆ ಮುದ ನೀಡುವ ಒಂದು ಸುಂದರ ಪ್ರವಾಸಿ ತಾಣಕ್ಕೆ ಹುಡುಕಾಡುತ್ತಾರೆ. ಹಾಗೆಯೇ ಇಲ್ಲಿಗೆ ಬರುವವರು ಪುಷ್ಕರಣಿಯ ಸೌಂದರ್ಯಕ್ಕೆ ಮಾರು ಹೋಗುತ್ತಾರೆ.
ಸಂತೇಬೆನ್ನೂರಿನಲ್ಲಿ ಸುಂದರ ಪುಷ್ಕರಣೆ ಪುರಾತತ್ವ ಇಲಾಖೆಗೆ ಕೆಲವು ವರ್ಷಗಳ ಹಿಂದೆಯಷ್ಟೇ ಸೇರ್ಪಡೆಯಾಗಿದೆ. ಈ ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳ ಬೆಳಕಿಗೆ ಬಂದಿಲ್ಲ ಅನ್ನೋ ಕೊರಗು ಸ್ಥಳೀಯರಲ್ಲಿ ಈಗಲೂ ಕಾಡುತ್ತಿದೆ. ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡುತ್ತಿದ್ದಂತೆ ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಇಲ್ಲಿಗೆ ಬರುತ್ತಿದ್ದಾರೆ.
ಇಲ್ಲಿಗೆ ಬಂದು ಪುಷ್ಕರಣಿಯ ಸೌಂದರ್ಯದ ಸವಿ ಸವಿಯುವುದರ ಜೊತೆಗೆ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡು ಖುಷಿಪಡುತ್ತಿದ್ದಾರೆ. ಮೊದಲೆಲ್ಲಾ ಶನಿವಾರ ಮತ್ತು ಭಾನುವಾರ ಮಾತ್ರ ಇಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಪ್ರತಿದಿನವೂ ಜನಸಂದಣಿ ಇರುತ್ತದೆ.
ಶಕ್ತಿ ಯೋಜನೆಯಿಂದ ಪುಷ್ಕರಣಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚನ್ನಗಿರಿ ತಾಲೂಕಿನ ಗ್ರಾಮಗಳ ಮಹಿಳೆಯರು ಮತ್ತು ಕಾಲೇಜು ಯುವತಿಯರು ಹೆಚ್ಚಾಗಿ ಬರುತ್ತಿರುವುದರಿಂದ ಆದಾಯವೂ ಗಣನೀಯವಾಗಿ ಪುಷ್ಕರಣಿ ಆಡಳಿತ ಮಂಡಳಿಗೆ ಸಿಗುತ್ತಿದೆ.
ಮೈಸೂರು ಜಿಲ್ಲೆಯ ಪಕ್ಕದಲ್ಲೇ ಇವೆ ಜುಲೈ, ಆಗಸ್ಟ್ನಲ್ಲಿ ಭೇಟಿ ನೀಡಬಹುದಾದ ಸೂಕ್ತ ತಾಣಗಳು, ಸ್ಥಳ, ಮಾರ್ಗಗಳ ವಿವರ
ಪುಷ್ಕರಣಿಯ ವಿಶೇಷತೆ ಏನು?
10 ಹೆಕ್ಟೇರ್ನಷ್ಟು ವಿಶಾಲವಾದ ಈ ಪ್ರದೇಶ ಪ್ರವಾಸಿಗರನ್ನು ತನ್ನಯತ್ತ ಕೈಬೀಸಿ ಕರೆಯುತ್ತಿದೆ. ಈ ಪುಷ್ಕರಣಿ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದರೂ ಪ್ರಚಾರ ಮಾತ್ರ ಕಡಿಮೆಯೇ ಆಗಿದೆ. ಇದು ದಕ್ಷಿಣ ಭಾರತದಲ್ಲಿರುವ ಏಕೈಕ ಅತೀ ಸುಂದರ ಪುಷ್ಕರಣಿ ಎಂಬ ಖ್ಯಾತಿ ಹೊಂದಿದೆ.
235 ಅಡಿ ಉದ್ದ, 245 ಅಡಿ ಅಗಲದ ಧ್ವಜಾಯದಲ್ಲಿ ಈ ಪುಷ್ಕರಣುಯನ್ನು ನಿರ್ಮಿಸಲಾಗಿದೆ. ಸುತ್ತಲೂ ಎಂಟು ದಿಕ್ಕುಗಳಿಗೂ ಆಯಾ ದಿಕ್ಪಾಲಕರ ಹೆಸರಿನ ಮಂಟಪ ನಿರ್ಮಿಸಲಾಗಿದ್ದು, ಈಗ 6 ಮಂಟಪಗಳು ಮಾತ್ರ ಇವೆ. ಅಲ್ಲದೇ ಕೊಳದ ಸುತ್ತಲೂ 44 ಚಿಕ್ಕ ಪಾವಟಿಗೆಗಳಿವೆ.
ಸ್ವಾಭಾವಿಕ ಜಲಪ್ರಾಪ್ತಿಯಿಲ್ಲ
ಈ ಪುಷ್ಕರಣಿಗೆ ಸ್ವಾಭಾವಿಕ ಜಲಪ್ರಾಪ್ತಿಯಿಲ್ಲ. ಮಳೆ ನೀರು ಸಂಗ್ರಹವಾಗಿ ನಂತರ ಪುಷ್ಕರಣಿಗೆ ಹರಿದುಬರುತ್ತದೆ. ಮತ್ತೊಂದು ವಿಶೇಷವೆಂದರೆ ಈ ಪುಷ್ಕರಣಿಯನ್ನು ಒಂದು ದೊಡ್ಡ ಬಂಡೆಕಲ್ಲಿನ ಮೇಲೆ ನಿರ್ಮಿಸಲಾಗಿದೆ. ಕುಡಿಯುವ ನೀರು ಸಂಗ್ರಹಕ್ಕೆ ಇದನ್ನು ಹಿಂದಿನ ಕಾಲದಲ್ಲಿ ಬಳಸಿಕೊಳ್ಳಲಾಗಿತ್ತಂತೆ. ಈ ದೊಡ್ಡ ಹೊಂಡವೊಂದಕ್ಕೆ ಆನೆ ಹೊಂಡವೆಂದು ಕರೆಯಲಾಗುತ್ತಿತ್ತಂತೆ.
ಹೊಂಡದಲ್ಲಿ ಶೇಖರಣೆಯಾದ ನೀರು ಭೂಮಿ ಒಳಗಿನಿಂದ ಹಂತ ಹಂತವಾಗಿ ಸಂಸ್ಕರಣೆಗೊಂಡು ಬರುತ್ತಿತ್ತಂತೆ. ಇದರಿಂದ ಕುಡಿಯಲು ನೀರು ತುಂಬಾ ಯೋಗ್ಯವಾಗುತ್ತಿತ್ತು ಎನ್ನಲಾಗಿದೆ.
ಸಂತೇಬೆನ್ನೂರನ್ನು 16ನೇ ಶತಮಾನದಲ್ಲಿ ಒಂದು ರಾಜಮನೆತನ ರಾಜಧಾನಿಯನ್ನಾಗಿ ಮಾಡಿಕೊಂಡು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಡಳಿತ ಮಾಡುತ್ತಿತ್ತಂತೆ. ಹಾಗಾಗಿ ಸಂತೇಬೆನ್ನೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿಂತ್ತು ಎನ್ನಲಾಗಿದೆ. ನಂತರ ವಿಜಯ ನಗರ ವಂಶಸ್ಥರಿಗೆ ಮುಸ್ಲಿಂರ ವಿರುದ್ಧ ಹೋರಾಟ ಮಾಡಲು ಸಹಾಯಕಾರಾಗಿದ್ದ ಕಾರಣ ಸಂತೇಬೆನ್ನೂರನ್ನು ರಾಜವಂಶಸ್ಥರಿಗೆ ನೀಡಿದ್ದರು ಎಂದು ಹಿರಿಯರು ಹೇಳುವ ಮಾತಾಗಿದೆ.
ನಂತರ, ಕ್ರಿ.ಶ. 1558ರಲ್ಲಿ ಕೆಂಗಾ ಹನುಮಂತಪ್ಪ ನಾಯಕ ಸಂತೇಬೆನ್ನೂರಿನಲ್ಲಿ ಈ ಒಂದು ಸುಂದರ ಪುಷ್ಕರಣಿಯನ್ನು ಕಟ್ಟಿಸಿದರು ಎಂಬ ಇತಿಹಾಸವಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ತಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವವರೂ ಇಲ್ಲ. ಇಂತಹ ಅದ್ಭುತ ಪ್ರೇಕ್ಷಣೀಯ ತಾಣದ ಬಗ್ಗೆ ಪುರಾತತ್ವ ಇಲಾಖೆ ಹಾಗೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಪಶ್ವಿಮ ದಿಕ್ಕಿನಲ್ಲಿ 58 ದೊಡ್ಡ ಮೆಟ್ಟಿಳುಗಳನ್ನು ಪುಷ್ಕರಣಿಗೆ ಇಳಿಯಲು ನಿರ್ಮಿಸಲಾಗಿದೆ. ಇಂತಹ ಅದ್ಭುತ ಪುಷ್ಕರಣಿ ಇದಾಗಿದೆ. ಹೀಗಾಗಿ ಇಲ್ಲಿದೆ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಇದು ಕಾಲೇಜು ಯುವತಿಯರ ಮನ ಸೆಳೆಯುತ್ತಿದೆ.
ಇಲ್ಲಿಗೆ ಬಂದರೆ ಸಾಕು ಮನಸ್ಸು ನಿರಾಳವಾಗುತ್ತದೆ. ಸೆಲ್ಫಿ ತೆಗೆದುಕೊಳ್ಳದೇ ಹೋಗಲು ಮನಸ್ಸೇ ಬರುವುದಿಲ್ಲ. ಇಲ್ಲಿ ದೊಡ್ಮನೆ ಹುಡುಗ ಸೇರಿದಂತೆ ಕೆಲ ಚಿತ್ರಗಳ ಚಿತ್ರೀಕರಣವೂ ನಡೆದಿದೆ. ದೊಡ್ಮನೆ ಹುಡುಗ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಿಸಿದ್ದರು. ಸಿನಿಮಾವೂ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಆಗ ಪುಷ್ಕರಣೆಯ ಸೊಬಗು ಹೇಗಿದೆ ಎಂಬುದನ್ನು ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ನಾವು ಸಹ ಪುಷ್ಕರಣೆಯ ಸೌಂದರ್ಯ ಸವಿಯಲು ಬಂದಿದ್ದೆವು. ಇಲ್ಲಿನ ಸೌಂದರ್ಯ ನಿಜಕ್ಕೂ ಮನಸ್ಸಿಗೆ ಆಹ್ಲಾದ ತಂದಿತು ಎನ್ನುತ್ತಾರೆ ಕಾಲೇಜು ಯುವತಿಯರು.
English summary
Shakti scheme: Davanagere district’s Historical tourist spots development from Shakti scheme, know complete details
Story first published: Friday, July 7, 2023, 19:42 [IST]