Karnataka
oi-Shankrappa Parangi
ಬೆಂಗಳೂರು, ಜಲೈ 05: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರದ ನಡೆ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಯುವ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಯಿತು. ತಲೆ ಮೇಲೆ ಅಕ್ಕಿ ಮೂಟೆ ಹೊತ್ತು ಪ್ರತಿಭಟಿಸಿದ ಕೈ ಕಾರ್ಯಕರ್ತರು ರಾಜ್ಯ ಸಂಸದರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಮುಂದೆ ಹೈಡ್ರಾಮಾವೇ ನಡೆದಿದ್ದು, ಪೊಲೀಸರು ಕಾಂಗ್ರೆಸ್ ನ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ, ಚಾಮರಾಜನಗರ, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಸಂಸದರ ಕಚೇರಿ ಮುಂದೆ, ನಿವಾಸದ ಮುಂದೆ ರಾಜ್ಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆದಿದೆ. ಕೆಲವೆಡೆ ಮನೆಗಳಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದ್ದು ಕಂಡು ಬಂತು.
ಕಾಂಗ್ರೆಸ್ನ ‘ಅನ್ನಭಾಗ್ಯ’ ಯೋಜನೆಗಾಗಿ ಕೇಂದ್ರ ಸರ್ಕಾರ ಅಕ್ಕಿ ಪೂರೈಸದೇ ಮಲತಾಯಿ ಧೋರಣೆ ತಾಳಿದೆ ಎಂದು ಕೈ ಕಾರ್ಯಕರ್ತರು ಆರೋಪಿಸಿದರು. ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರಲ್ಲದೇ, ನಾಮಫಲಕ ಹಿಡಿದು ಕಿಡಿ ಕಾರಿದರು. ಕೂಡಲೇ ರಾಜ್ಯಕ್ಕೆ ಬೇಕಾದ ಅಕ್ಕಿ ಪೂರೈಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೆಲವೆಡೆ ಅಕ್ಕಿ ಮೂಟೆ ಹೊತ್ತು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇನ್ನೂ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಧರಣಿ ನಡೆಯಿತು. ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ಮಾತುಕತೆ, ಗಲಾಟೆ ನಡೆಯಿತು. ನೂಕು ನುಗ್ಗಲು ಉಂಟಾಯಿತು.
ಪ್ರತಿಭಟನಾಕಾರರನ್ನು ತಡೆಯಲು, ಬಿಜೆಪಿ ಕಚೇರಿ ಮುಂದೆ ಪೊಲೀಸರು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಕೈ ಕಾರ್ಯಕರ್ತರು ಏರಿದರು. ಈ ವೇಳೆ ಹೈಡ್ರಾಮಾವೇ ನಡೆದು, ಪೊಲೀಸರು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಸೇರಿದಂತೆ ಕೆಲವರನ್ನು ಬಂಧಿಸಿದ ಘಟನೆ ನಡೆಯಿತು.
ಸಂಸದ ಪ್ರತಾಪ್ ಸಿಂಹ ಕಾರಿಗೆ ಮುತ್ತಿಗೆ
ಇತ್ತ ಮೈಸೂರಿನಲ್ಲಿ ಬಿರುಸಿನ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಯುವ ಕಾರ್ಯಕರ್ತರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಾರಿಗೆ ಮತ್ತಿಗೆ ಹಾಕಿದರು. ಅಕ್ಕಿ ಪೂರೈಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಸಂಸದರು ಮತ್ತು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ನಿಭಾಯಿಸಲು ಹರಸಾಹಸ ಪಟ್ಟರು ಎಂದು ತಿಳಿದು ಬಂದಿದೆ.
ಪ್ರತಿಭಟನೆ ವೇಳೆ ಪೊಲೀಸರಿಗೆ ಇಲ್ಲಿ ಪ್ರತಿಭಟನೆ ಮಾಡದಂತೆ ಅವರಿಗೆ ತಿಳಿ ಹೇಳಿ. ಅವರನ್ನು ಇಲ್ಲಿಂದ ಕಳುಹಿಸಿ ಎಂದು ಕಾರಿನಲ್ಲಿ ಕುಳಿತುಕೊಂಡೆ ಸಂಸದರು ಪೊಲೀಸರಿಗೆ ಸೂಚಿಸುತ್ತಿದ್ದರು. ಈ ವೇಳೆ ಸಂಸದರ ಕಾರನ್ನು ಕಂಡು ಪ್ರತಿಭಟನಾಕಾರರು ಪ್ರತಾಪ್ ಸಿಂಗ್ ಅವರ ಕಾರನ್ನು ಮುತ್ತಿದರು.
ಇತ್ತ ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಇನ್ನಿತರ ಕಡೆಗಳಲ್ಲೂ ಕೇಂದ್ರದಿಂದ ಅಕ್ಕಿ ಪೂರೈಕೆ ವಿಚಾರವಾಗಿ ಪ್ರತಿಭಟನೆ ನಡೆಸಲಾಯಿತು.
English summary
Anna Bhagya: Youth Congress workers and leaders protest against Central in front BJP office and MP houses in few districts of Karnataka, for demanding of rice provide.
Story first published: Wednesday, July 5, 2023, 13:46 [IST]