India
oi-Mamatha M
ಶಿಮ್ಲಾ, ಜೂನ್. 27 : ಚಂಡೀಗಢ – ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತವ್ಯಸ್ತವಾಗಿದ್ದ ಸಂಚಾರ ಮಾರ್ಗಗಳನ್ನು ಸರಿಪಡಿಸಿ ಬಳಿಕ ಹಿಮಾಚಲ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿರುವುದರಿಂದ ಪಾಂಡೋಹ್ ಮತ್ತು ಇತರ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಮುಂದುವರೆದಿದೆ.
ಮಂಡಿ ಪಟ್ಟಣದಿಂದ 40 ಕಿಮೀ ದೂರದಲ್ಲಿರುವ ಪಾಂಡೋಹ್ ಬಳಿ 5-ಮೈಲುಗಳು ಮತ್ತು 7-ಮೈಲುಗಳ ದೂರದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ನೂರಾರು ಪ್ರಯಾಣಿಕರು, ಹೆಚ್ಚಾಗಿ ಪ್ರವಾಸಿಗರು, ಸೋಮವಾರ ಸಂಜೆಯವರೆಗೆ ಹೆದ್ದಾರಿಯಲ್ಲಿ 22 ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಸಮೀಪದಲ್ಲಿ ಯಾವುದೇ ಹೋಟೆಲ್ಗಳಿಲ್ಲದ ಕಾರಣ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಪ್ರವಾಸಿಗರು ಕಾರು ಮತ್ತು ಬಸ್ಗಳಲ್ಲಿ ರಾತ್ರಿ ಕಳೆಯಬೇಕಾಯಿತು.
ಇದಾದ ನಂತರ ಭೂಕಿಸಿತವನ್ನು ಸರಿಪಡಿಸಲು ಹೆದ್ದಾರಿಯನ್ನು ಮುಚ್ಚಲಾಯಿತು. 22 ಗಂಟೆಗಳ ನಂತರ ಭಾಗಶಃ ಪುನಃಸ್ಥಾಪಿಸಲಾಯಿತು. ಕತೌಲಾ-ಕಮಂದ್ ಮೂಲಕ ಇದ್ದ ಪರ್ಯಾಯ ಮಾರ್ಗವನ್ನೂ ಸಹ ಮುಚ್ಚಿದ್ದ ಕಾರಣ ಪ್ರವಾಸಿಗರು ಪರದಾಡುವಂತಾಯಿತು. ಎರಡೂ ಕಡೆ 15 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರ ರಜೆಯ ದಿನಗಳು ವ್ಯರ್ಥವಾದವು.
Monsoon Updates: ದೇಶದ ಶೇ. 80ರಷ್ಟು ಭಾಗಕ್ಕೆ ಮಳೆ, ಕೆಲವೆಡೆ ಪ್ರವಾಹ ಸೃಷ್ಟಿ ಸಾಧ್ಯತೆ: ಐಎಂಡಿ
ಹೆದ್ದಾರಿಯಲ್ಲಿ ಸುಮಾರು 5,000 ವಾಹನಗಳು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿವೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಸಾಂಬಶಿವನ್ ತಿಳಿಸಿದ್ದಾರೆ. “ಟ್ರಾಫಿಕ್ ಸುಗಮಗೊಳಿಸಲು 24×7 ಕೆಲಸ ಮಾಡಿದ ಮಂಡಿ ಪೊಲೀಸ್ನ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳ ತಾಳ್ಮೆಗಾಗಿ ಮತ್ತು ಸಂಚಾರ ನಿಯಮಗಳನ್ನು ಪಾಲಿಸಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದ್ದಾರೆ.
ಪ್ರವಾಸಿಗರು, ಸ್ಥಳೀಯರಿಗೆ ಸರ್ಕಾರದ ಮಾರ್ಗಸೂಚಿ
ರಾಜ್ಯ ಸರ್ಕಾರವು ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ನದಿಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳ ಬಳಿ ತೆರಳದಂತೆ ಸಲಹೆಯನ್ನು ನೀಡಿದೆ. “ಗುಡ್ಡಗಾಡು ಪ್ರದೇಶಗಳಲ್ಲಿ, ವಿಶೇಷವಾಗಿ ಮೇಲಿನ ಶಿಮ್ಲಾ, ಕಿನ್ನೌರ್, ಮಂಡಿ, ಕುಲು, ಲಾಹೌಲ್ ಮತ್ತು ಸ್ಪಿತಿ ಮತ್ತು ಚಂಬಾ ಜಿಲ್ಲೆಗಳಲ್ಲಿ ಪ್ರಯಾಣಿಸುವಾಗ, ಜನರು ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಸ್ಥಳೀಯ ಆಡಳಿತವು ನೀಡುವ ಸಲಹೆಯನ್ನು ಅನುಸರಿಸಬೇಕು” ಎಂದು ಹಿಮಾಚಲ ಪ್ರದೇಶ ಪೊಲೀಸ್ ಟ್ರಾಫಿಕ್, ಟೂರಿಸ್ಟ್ ಮತ್ತು ರೈಲ್ವೇಸ್ (ಟಿಟಿಆರ್) ವಿಭಾಗ ಹೇಳಿದೆ.
ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (HPTDC) ಅಧ್ಯಕ್ಷ ಆರ್ಎಸ್ ಬಾಲಿ, ಪ್ರವಾಸಿಗರು ತಮ್ಮ ಫೋನ್ಗಳಲ್ಲಿ ತಮ್ಮ ಜಿಪಿಎಸ್ ಸ್ಥಳವನ್ನು ಇಟ್ಟುಕೊಳ್ಳಬೇಕು, ಮಾರ್ಗದರ್ಶಿ ಮಾರ್ಗಗಳಲ್ಲಿ ಪ್ರಯಾಣಿಸಬೇಕು ಮತ್ತು ವಿಶೇಷವಾಗಿ ಮಂಜಿನಿಂದಾಗಿ ಗೋಚರತೆ ಕಡಿಮೆಯಾದಾಗ ನಿಧಾನವಾಗಿ ಚಾಲನೆ ಮಾಡಬೇಕು ಎಂದಿದ್ದಾರೆ.
ಜುಲೈ 1ರ ವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಐದು ದಿನಗಳ ಕಾಲ ಭಾರೀ ಮಳೆ, ಸಿಡಿಲು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹಳದಿ ಅಲರ್ಟ್ ಘೋಷಿಸಲಾಗಿದೆ.
ಇನ್ನು ಮಳೆ ಸಂಬಂಧಿತ ಘಟನೆಗಳಲ್ಲಿ ಒಂಬತ್ತು ಜೀವಗಳು ಬಲಿಯಾಗಿವೆ. ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಮಳೆ ಪ್ರಾರಂಭವಾದಾಗಿನಿಂದ, ಮಾನ್ಸೂನ್ ರಾಜ್ಯದಾದ್ಯಂತ ಹಾನಿಯನ್ನುಂಟುಮಾಡಿದೆ. ಇದು 103 ಕೋಟಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದೆ. ಇದರ ಜೊತೆಗೆ ಒಂಬತ್ತು ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಸುಮಾರು 900 ಕುಡಿಯುವ ನೀರು ಸರಬರಾಜು ಮತ್ತು ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು, ಜಲಶಕ್ತಿ ಇಲಾಖೆ 73.68 ಕೋಟಿ ರೂಪಾಯಿ ಮತ್ತು ಲೋಕೋಪಯೋಗಿ ಇಲಾಖೆ (PWD) 27.79 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಮೂರು ದಿನಗಳಲ್ಲಿ ರಾಜ್ಯದಾದ್ಯಂತ ಏಳು ಪ್ರಮುಖ ಭೂಕುಸಿತ, ಸಿಡಿಲು ಬಡಿತ ಮತ್ತು ನಾಲ್ಕು ಹಠಾತ್ ಪ್ರವಾಹದ ಘಟನೆಗಳು ವರದಿಯಾಗಿವೆ. ಈ ವೇಳೆ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, 28 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
300 ಕ್ಕೂ ಹೆಚ್ಚು ರಸ್ತೆಗಳು, ಬಹುತೇಕ ಗ್ರಾಮೀಣ ರಸ್ತೆಗಳು ಭೂಕುಸಿತದಿಂದ ಸಂಪರ್ಕ ಕಳೆದುಕೊಂಡಿವೆ. ಥಿಯೋಗ್ನಲ್ಲಿ ನಿರ್ಬಂಧಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ-5 ರ ಸಂಚಾರವನ್ನು ಸೋಮವಾರ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.
English summary
Heavy rain in Himachal Pradesh, meteorological department has issued an orange alert. advisory for tourists. know more.
Story first published: Tuesday, June 27, 2023, 16:25 [IST]