Karnataka
oi-Gururaj S
ಬೆಂಗಳೂರು, ಜುಲೈ 18; ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರಚನೆ ಮಾಡಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ.
ಮಂಗಳವಾರ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ, ಮೈತ್ರಿಕೂಟದ ಹೆಸರು, ಸೀಟು ಹಂಚಿಕೆ ಹೀಗೆ ಆರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಸಭೆಯ ಬಳಿಕ ಸಂಜೆ 4 ಗಂಟೆಗೆ ವಿರೋಧ ಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಮಾಹಿತಿ ನೀಡಲಿದ್ದಾರೆ.
ವಿರೋಧ ಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. “ಕಾಂಗ್ರೆಸ್ ಪಕ್ಷ ಅಧಿಕಾರವಾಗಲಿ, ಪ್ರಧಾನ ಮಂತ್ರಿ ಹುದ್ದೆಯ ಬಗ್ಗೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ನಿಂದ ಯಾರೂ ಪ್ರಧಾನಿ ಅಭ್ಯರ್ಥಿ ಆಗಲ್ಲ ಎಂಬ ಸಂದೇಶ ನೀಡಿದರು.
ಬಿಜೆಪಿ ವಿರುದ್ಧ ಟೀಕೆ; ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ಟೀಕಿಸಿದರು. “ಆಡಳಿತ ಪಕ್ಷದ ನಾಯಕರು, ಅಧ್ಯಕ್ಷರು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ. ಹಳೆಯ ದೋಸ್ತಿಗಳನ್ನು ಮತ್ತೆ ಒಂದು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ” ಎಂದರು.
“ನಾವು 26 ಪಕ್ಷಗಳಿದ್ದು, 11 ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಬಿಜೆಪಿ ಸ್ವತಂತ್ರವಾಗಿ 303 ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ಮಿತ್ರರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ” ಎಂದು ಖರ್ಗೆ ದೂರಿದರು.
English summary
Opposition party meeting in Bengaluru; Congress president Mallikarjun Kharge said that his party wasn’t interested in power or the prime minister post.
Story first published: Tuesday, July 18, 2023, 13:35 [IST]