Chikkamagaluru
lekhaka-Veeresha H G

ಚಿಕ್ಕಮಗಳೂರು, ಜೂನ್ 20: ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕಿನ 23.886 ರೈತರು ಸರ್ಕಾರಕ್ಕೆ ಒಟ್ಟು 3.98.911 ಕ್ವಿಂಟಾಲ್ ರಾಗಿ ಕೊಟ್ಟಿದ್ದರು. ಅಂದಾಜು 91 ಕೋಟಿಗೂ ಅಧಿಕ. ಆದರೆ 51 ಕೋಟಿಗೂ ಅಧಿಕ ಹಣವನ್ನು ಸರ್ಕಾರ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದು, ರೈತರು ಪರದಾಡುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ .
ಚಿಕ್ಕಮಗಳೂರು ರೈತರಿಗೆ 2.40 ಕೋಟಿ. ತರೀಕೆರೆ ರೈತರಿಗೆ 7.51 ಕೋಟಿ. ಅಜ್ಜಂಪುರ ರೈತರಿಗೆ 10.32 ಕೋಟಿ. ಕಡೂರು ರೈತರಿಗೆ 30 ಕೋಟಿಗೂ ಅಧಿಕ. ಒಟ್ಟು 51 ಕೋಟಿಗೂ ಅಧಿಕ ಹಣವನ್ನು ಸರ್ಕಾರ ರೈತರಿಗೆ ನೀಡಬೇಕಿದೆ. ರೈತರಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯೂ ಉಗ್ರಾಣದ ನಿಗಮದ ಮೂಲಕ 3.98.911 ಕ್ವಿಂಟಾಲ್ ರಾಗಿ ಖರೀದಿಸಿತ್ತು. ಅಂದಾಜು 90 ಕೋಟಿಗೂ ಅಧಿಕ ಹಣ. ಆದರೆ 51 ಕೋಟಿಯಷ್ಟು ಹಣವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ.

ಮಾರುಕಟ್ಟೆಯಲ್ಲಿ ರಾಗಿ ಮಾರಿದರೆ ತಕ್ಷಣ ಹಣ ಸಿಗುತ್ತದೆ. ಆದರೆ ಸ್ವಲ್ಪ ಜಾಸ್ತಿ ಹಣ ಸಿಗಲೆಂದು ಬೆಂಬಲ ಬೆಲೆಗೆ ರಾಗಿ ಮಾರಿ ಈಗ ರಾಗಿಯೂ ಇಲ್ಲ. ಹಣವೂ ಇಲ್ಲ ಎಂಬಂತಾಗಿದೆ. ವರ್ಷಪೂರ್ತಿ ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದ ರೈತರು ಸರ್ಕಾರಕ್ಕೆ ಬೆಳೆ ಮಾರಿ ಹಣಕ್ಕಾಗಿ ಪರಿತಪ್ಪಿಸುತ್ತಾ ಸರ್ಕಾರ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರು: ಅವನತಿಯತ್ತ ಗುಂಡಿಹೊಂಬಳ ಸರ್ಕಾರಿ ಶಾಲೆ, ಶಿಕ್ಷಕನ ವರ್ಗಾವಣೆಗೆ ಪೋಷಕರ ಪಟ್ಟು
ಸರ್ಕಾರಕ್ಕೆ ಬೆಂಬಲ ಬೆಲೆಗೆ ರಾಗಿ ಮಾರಿದರೆ ಸ್ವಲ್ಪ ಹಣ ಹೆಚ್ಚು ಸಿಗುತ್ತದೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಅನುಕೂಲವಾಗುತ್ತದೆ. ಬೇರೆಯವರ ಬಳಿ ಕೈಸಾಲ ಮಾಡೋದು ತಪ್ಪುತ್ತದೆ ಎಂದು ಬೆಂಬಲ ಬೆಲೆಗೆ ರಾಗಿ ಮಾರಿದ್ದರು. ಆದರೆ, ರಾಗಿ ಮಾರಾಟ ಮಾಡಿ ಎರಡು-ಮೂರು ತಿಂಗಳು ಕಳೆದರೂ ಕೂಡ ಸರ್ಕಾರ ರೈತರಿಗೆ ಹಣ ನೀಡಿಲ್ಲ. ನಿತ್ಯ ನಮ್ಮ ಕೆಲಸವನ್ನು ಬಿಟ್ಟು ಅಧಿಕಾರಿಗಳು, ಕಚೇರಿಗೆ ಅಲೆಯುವಂತಾಗಿದೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಾ ಮುಂದು ತಾ ಮುಂದು ಅಂತ ಹಗಲಿರುಳು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿಕೊಂಡು ಕಾದು ರಾಗಿ ನೀಡಿದ್ದರು. ರೈತರು ಮುಂಗಾರು ಬಿತ್ತನೆ ವೇಳೆಗೆ ಹಣ ಸಿಗುವ ನೀರಿಕ್ಷೆಯಲ್ಲಿದ್ದರು. ಆದರೆ, ಎರಡು ತಿಂಗಳು ಕಳೆದರೂ ಹಣ ಬಾರದೆ ವ್ಯವಸಾಯ ಮಾಡಲು ಬೇರೆ ದಾರಿ ಇಲ್ಲದೆ ರೈತರು ಮತ್ತೆ ಸಾಲದ ಮೊರೆ ಹೋಗಿದ್ದಾರೆ.
ಒಟ್ಟಾರೆ, ಎಲ್ಲಾ ಫ್ರೀ ಕೊಟ್ಟು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದುಕೊಳ್ಳುವ ಸರ್ಕಾರ ಕಷ್ಟಪಡುವ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರಕ್ಕೆ ರಾಗಿ ಮಾರಿದ ಜಿಲ್ಲೆಯ ಸುಮಾರು 23 ಸಾವಿರಕ್ಕೂ ಅಧಿಕ ರೈತರು ಹಣಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಅನ್ನದಾತನಿಗೆ ಕೂಡಲೇ ಹಣ ನೀಡಬೇಕಿದೆ. ಇಲ್ಲವಾದರೆ, ಸರ್ಕಾರ ಫ್ರೀ ಭಾಗ್ಯಗಳಿಗೆ ಬೆಲೆ ಇಲ್ಲದಂತಾಗುವುದು ಗ್ಯಾರಂಟಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
English summary
The state government has retained Rs 51 crore dues from Chikkamagaluru district farmers. Know more
Story first published: Tuesday, June 20, 2023, 10:56 [IST]