India
oi-Mamatha M

ಭೋಪಾಲ್, ಜುಲೈ. 05: ಸಿಧಿ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಪ್ರವೇಶ್ ಶುಕ್ಲಾ ಅವರ ನಿವಾಸವನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಧ್ವಂಸಗೊಳಿಸಲಾಗಿದೆ. ಮಂಗಳವಾರ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅಧಿಕಾರಿಗಳು ಬುಲ್ಡೋಜರ್ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರೋಪಿಯನ್ನು ಬಂಧಿಸಿದ ವಿಡಿಯೊ ಹಳೆಯದು ಎಂದು ಹೇಳಿದ್ದಾರೆ. ಚುನಾವಣೆ ಹತ್ತಿರವಾಗಿರುವುದರಿಂದ ಅದನ್ನು ಮುನ್ನೆಲೆಗೆ ತರಲಾಗಿದೆ. “ಇದು ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಪ್ರಸಾರ ಮಾಡಲಾದ ಹಳೆಯ ವೀಡಿಯೊ” ಎಂದು ಆರೋಪಿಯ ಸಹೋದರಿ ಎಎನ್ಐಗೆ ತಿಳಿಸಿದ್ದಾರೆ.

ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಇದಕ್ಕೂ ಮುನ್ನ ಆತನ ತಂದೆ, ‘ನನ್ನ ಮಗ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ, ಆತನನ್ನು ಸಿಲುಕಿಸಲು ಮಾಡಿರುವ ಸಂಚು ಇದಾಗಿದೆ, ವಿಡಿಯೋ ನೋಡಿ ನಮಗೂ ತುಂಬಾ ನೋವಾಗಿದೆ’ ಎಂದು ಹೇಳಿದ್ದರು.
ಮಂಗಳವಾರ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಘಟನೆಯನ್ನು ಖಂಡಿಸಿದರು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಹೇಳಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನರೋತ್ತಮ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿ: ಆರೋಪಿ ಬಿಜೆಪಿ ನಾಯಕನೆಂದ ಕಾಂಗ್ರೆಸ್
ಈ ಹಿಂದೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆದೇಶದ ಮೇರೆಗೆ, ಆರೋಪಿ ಯುವಕನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆತನ ಅಶ್ಲೀಲ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೈರಲ್ ವಿಡಿಯೋದಲ್ಲಿ ಆರೋಪಿಯು ಕುಡಿದ ಮತ್ತಿನಲ್ಲಿದ್ದು ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರು ಮಂಗಳವಾರ ಈ ವಿಷಯವನ್ನು ಅರಿತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆಯೂ ಅವರು ಕೋರಿದ್ದಾರೆ.
“ಸಿಧಿ ಜಿಲ್ಲೆಯ ವೈರಲ್ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಆರೋಪಿಯನ್ನು ಬಂಧಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಎನ್ಎಸ್ಎ ವಿಧಿಸಲು ನಾನು ಆಡಳಿತಕ್ಕೆ ಸೂಚನೆ ನೀಡಿದ್ದೇನೆ” ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಅಧಿಕೃತ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಇದಲ್ಲದೆ, ಪೊಲೀಸರ ಪ್ರಕಾರ, ಸಿಎಂ ಸೂಚನೆಯ ಮೇರೆಗೆ, ಆರೋಪಿಯ ವಿರುದ್ಧ ಬಹಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಗಳು 294, 504, ಸೆಕ್ಷನ್ 3(1) (ಆರ್)(ಎಸ್) ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
English summary
Madhya Pradesh : Bulldozer action against Madhya Pradesh man Pravesh Shukla, who urinated on tribal labourer. know more
Story first published: Wednesday, July 5, 2023, 22:19 [IST]