India
oi-Ravindra Gangal

ನವದೆಹಲಿ, ಜುಲೈ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಉಂಟಾಗಿದೆ. ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದೆ. ಇಂದು ಬೆಳಗ್ಗೆ 8 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 208.48 ಮೀಟರ್ ತಲುಪಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.
ದೆಹಲಿಯ ಸಿವಿಲ್ ಲೈನ್ಸ್ ವಲಯದ ತಗ್ಗು ಪ್ರದೇಶಗಳಲ್ಲಿನ 10 ಶಾಲೆಗಳು, ಶಹದ್ರಾದಲ್ಲಿನ 7 ಶಾಲೆಗಳು ಪ್ರವಾಹದಲ್ಲಿ ಸಿಲುಕಿವೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನಿಂದ ನೀರು ಬಿಡುಗಡೆಯಾದ ನಂತರ ಯಮುನಾ ನದಿಯ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಇದರಿಂದ ನಗರದ ಹಲವಾರು ಪ್ರದೇಶಗಳು ಪ್ರವಾಹದ ನೀರಿನಿಂದ ತುಂಬಿಕೊಂಡಿವೆ.

ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಯಮುನಾ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ದಾಖಲಾಗಿದೆ. ಇದು ಭಾನುವಾರ ಬೆಳಗ್ಗೆ 11 ಗಂಟೆಗೆ 203.14 ಮೀಟರ್ನಿಂದ ಸೋಮವಾರ ಸಂಜೆ 5 ಗಂಟೆಗೆ 205.4 ಕ್ಕೆ ಏರಿದೆ.
Delhi Rain: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ, ಅರವಿಂದ್ ಕೇಜ್ರಿವಾಲ್ ಮನೆ ಬಳಿ ಪ್ರವಾಹ!
ದೆಹಲಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸರು ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ದೆಹಲಿ ಸರ್ಕಾರವು ತೆರವು ಕಾರ್ಯಚರಣೆಯನ್ನು ಮಾಡುತ್ತಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಒಟ್ಟು 16,564 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು 14,534 ಜನರು ನಗರದಾದ್ಯಂತ ಟೆಂಟ್/ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಮಾನವ ನಿರ್ಮಿತ ಬಿಕ್ಕಟ್ಟು ಎಂದ ಕಾಂಗ್ರೆಸ್
ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿನ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದರ ಬಗ್ಗೆ ದೆಹಲಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇದನ್ನು ‘ಮಾನವ ನಿರ್ಮಿತ ಬಿಕ್ಕಟ್ಟು’ ಎಂದು ಕರೆದಿದೆ. ಇದು ನೈಸರ್ಗಿಕ ವಿಕೋಪವಲ್ಲ. ಮಾನವ ನಿರ್ಮಿತ ಬಿಕ್ಕಟ್ಟು ಎಂದು ಕಾಂಗ್ರೆಸ್ ಹೇಳಿದೆ.
ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ‘ಸರ್ಕಾರವು ಮಧ್ಯಪ್ರವೇಶಿಸಬೇಕಾಗಿದೆ. ಇದು ಮಾನವ ನಿರ್ಮಿತ ಬಿಕ್ಕಟ್ಟಿನಿಂದ ಸಂಭವಿಸಿದೆ. ಇದು ಪ್ರಕೃತಿ ವಿಕೋಪವಲ್ಲ. ಚರಂಡಿಗಳು ತೆರವುಗೊಂಡಿಲ್ಲ, ಜಲಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಅಲ್ಲಿ ಅಕ್ರಮ ಒತ್ತುವರಿಯಾಗಿದೆ’ ಎಂದು ಆರೋಪಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ದೆಹಲಿ ಪೊಲೀಸ್ ಆಯುಕ್ತರ ಭೇಟಿ
ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಗುರುವಾರ ಗಾಂಧಿನಗರದಲ್ಲಿರುವ ಹಳೆಯ ಕಬ್ಬಿಣದ ಸೇತುವೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳು ಯಮುನಾ ನದಿ ನೀರಿನಿಂದ ಜಲಾವೃತಗೊಂಡಿವೆ ಎಂದು ಅವರು ಹೇಳಿದ್ದಾರೆ.
ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೇಪೇಂದ್ರ ಪಾಠಕ್, ಜಂಟಿ ಆಯುಕ್ತ (ಪೂರ್ವ) ಛಾಯಾ ಶರ್ಮಾ, ಉಪ ಆಯುಕ್ತ (ಶಹದಾರ) ರೋಹಿತ್ ಮೀನಾ, ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಮತ್ತು ಇತರ ಅಧಿಕಾರಿಗಳೊಂದಿಗೆ ಅರೋರಾ ಇತರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
English summary
There is a flood in the national capital Delhi. As the Yamuna river is overflowing, water is entering the low-lying areas. The water level of Yamuna river reached 208.48 meters today at 8 am
Story first published: Thursday, July 13, 2023, 21:42 [IST]