Karnataka
oi-Punith BU
ತುಮಕೂರು, ಜೂನ್ 28: ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಬಡ ಮಹಿಳೆಯೊಬ್ಬರಿಗೆ ಜರ್ಮನಿಯಿಂದ ಕೃತಕ ಕೀಲು ತರಿಸಿ ತಾವೇ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಸ್ವತಃ ಮೂಳೆ ತಜ್ಞರಾಗಿರುವ ಕುಣಿಗಲ್ ಶಾಸಕ ಎಚ್ಡಿ ರಂಗನಾಥ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಮಹಿಳೆಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ತಮ್ಮದೇ ಕುಣಿಗಲ್ ಕ್ಷೇತ್ರದ ಕುಂದೂರು ಗ್ರಾಮದ 42 ವರ್ಷದ ಆಶಾ ಎಂಬ ಮಹಿಳೆಯೊಬ್ಬರು ಕಾಲಿನ ಕೀಲು ಡಿಸ್ಲೊಕೇಟ್ ಸಮಸ್ಯೆಯಿಂದ ಬಳಲುತ್ತಿದ್ದರು. 10 ವರ್ಷದ ಹಿಂದೆ ಅವರಿಗೆ ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಆದರೂ ಸಮಸ್ಯೆ ಮತ್ತೆ ಮರುಕಳಿಸಿದ್ದರಿಂದ ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಮರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಸಲಹೆ ಬಂದಿತ್ತು.
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
ಹಣವಿಲ್ಲದೆ ಈಗಾಗಲೇ ಸರ್ಕಾರಿ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಡ ಮಹಿಳೆ ಆಶಾ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಂದು ಉಚಿತ ಶಸ್ತ್ರಚಿಕಿತ್ಸೆ ಅವಕಾಶ ಇರಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿತ್ತು. ಅಲ್ಲಿ ಈ ಶಸ್ತ್ರಚಿಕಿತ್ಸೆಗೆ 5 ರಿಂದ 6 ಲಕ್ಷ ರುಪಾಯಿ ಖರ್ಚು ತಗಲುತ್ತಿತ್ತು. ಗ್ರಾಮದಲ್ಲಿ ಪುಟ್ಟಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಅವರಿಗೆ ಇಷ್ಟೊಂದು ಹಣ ಹೊಂದಿಸುವುದು ಸಾಧ್ಯವಿರಲಿಲ್ಲ. ಅವರು ಕೊನೆಗೆ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು.
ಆಗ ಸ್ವತಃ ಕೀಲು ಮೂಳೆ ಸರ್ಜನ್ ಆಗಿರುವ ಶಾಸಕರೇ ತಾವೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಅದರಂತೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಆಶಾ ಅವರನ್ನು ದಾಖಲಿಸಿದ್ದರು. ಕೃತಕ ಕೀಲನ್ನು ಅಳವಡಿಸಿದರೆ ಮಾತ್ರ ರೋಗಿ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದು ಪರಿಶೀಲನೆ ವೇಳೆ ಸ್ಪಷ್ಟವಾಗಿತ್ತು. ಹೀಗಾಗಿ ಶಾಸಕರು ಜರ್ಮನಿಯಿಂದ ಈ ರೀತಿಯ ಕೃತಕ ಕೀಲುಗಳನ್ನು ಪೂರೈಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಡೆಪ್ಯೂ ಕಂಪನಿಯನ್ನು ಸಂಪರ್ಕಿಸಿ ತಾವೇ ಹಣ (ಈ ಕೃತಕ ಕೀಲಿಗೆ ಸುಮಾರು 2 ಲಕ್ಷ ರು. ಇರುತ್ತದೆ) ಮತ್ತು ಆ ಕಂಪನಿಯ ನೆರವಿನೊಂದಿಗೆ ಕೃತಕ ಕೀಲು ತರಿಸಿ ಯಶಸ್ವಿಯಾಗಿ ಜೋಡಣೆ ಮಾಡಿಕೊಡ್ಡಿದ್ದಾರೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಬರೋಬ್ಬರಿ 4 ಗಂಟೆಗಳ ಕಾಲ ಕೀಲು ಜೋಡಣಾ ಶಸ್ತ್ರಚಿಕಿತ್ಸೆ ನಡೆಯಿತು. ಶಾಸಕ ಡಾ.ರಂಗನಾಥ್ ಜೊತೆಯಲ್ಲಿ ಡಾ.ಮನೋಜ್, ಡಾ.ದೀಪಕ್ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
English summary
Kunigal MLA HD Ranganath brought an artificial joint from Germany to a poor woman and performed the surgery himself and showed humanity.
Story first published: Wednesday, June 28, 2023, 15:22 [IST]