Karnataka
oi-Naveen Kumar N

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬೆಸ್ಕಾಂ ಸಿಇಒ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಜೂನ್ 18ರಿಂದ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯಲು ನೋಂದಣಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಮೊದಲನೇ ದಿನ ಸರ್ವರ್ ಸಮಸ್ಯೆಯಾಗಿದ್ದ ಕಾರಣ ಕೇವಲ 96,305 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದರು, ಎರಡನೇ ದಿನ ನೋಂದಣಿ ಮಾಡಿಕೊಂಡ ಒಟ್ಟು ಗ್ರಾಹಕರ ಸಂಖ್ಯೆ 3,34,845ಕ್ಕೆ ಏರಿಕೆಯಾಯಿತು. ಮೂರನೇ ದಿನ 3,85,481 ಜನ ನೋಂದಣಿ ಮಾಡಿಕೊಂಡಿದ್ದರು.

ಆದರೆ ಮೂರನೇ ದಿನ ಗ್ರಾಹಕರ ನೋಂದಣಿ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಮೂರು ದಿನಗಳಲ್ಲಿ ನೋಂದಣಿ ಮಾಡಿಕೊಂಡ ಗ್ರಾಹಕರ ಸಂಖ್ಯೆ 8 ಲಕ್ಷಕ್ಕೂ ಅಧಿಕ ಎಂದು ಹೇಳಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಒಟ್ಟು 8,16,631 ಜನ ನೋಂದಣಿ ಮಾಡಿಕೊಂಡಂತಾಗಿದೆ.
ಕೊನೆ ದಿನ ನಿಗದಿ ಮಾಡಿಲ್ಲ, ಆತಂಕ ಪಡಬೇಡಿ
ಇನ್ನು ಉಚಿತ ವಿದ್ಯುತ್ ಪಡೆಯಲು ಗ್ರಾಹಕರು ಭಾರಿ ಆಸಕ್ತಿ ತೋರಿದ ಕಾರಣ ಸರ್ವರ್ ಬ್ಯುಸಿ ಆಗಿದೆ. ಕೆಲವೊಮ್ಮೆ ಸರ್ವರ್ ಡೌನ್ ಆಗುತ್ತಿದ್ದು, ಗ್ರಾಹಕರು ನೋಂದಣಿ ಮಾಡಿಕೊಳ್ಳಲು ಸಮಸ್ಯೆ ಅನುಭವಿಸುವಂತಾಗಿದೆ. ಆದರೆ ನೋಂದಣಿ ಪ್ರಕ್ರಿಯೆಗೆ ಯಾವುದೇ ಕೊನೆಯ ದಿನಾಂಕ ನಿಗದಿಪಡಿಸದೇ ಇರುವ ಕಾರಣ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಎಸ್ಕಾಂ ಹೇಳಿದೆ.
200 ಯುನಿಟ್ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ: ಬಾಡಿಗೆದಾರರಿಗೆ ವರದಾನ?
ಇನ್ನು ಉಚಿತ ವಿದ್ಯುತ್ಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಭೌತಿಕ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ನೋಂದಣಿ ಪ್ರಕ್ರಿಯೆ ಸುಲಭವಾಗಿದ್ದು, ಗ್ರಾಹಕರು ತಮ್ಮ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಮೂಲಕ ನೋಂದಣಿ ಮಾಡಬಹುದಾಗಿದೆ.
ಜುಲೈ ತಿಂಗಳ ವಿದ್ಯುತ್ ಬಳಕೆ ಉಚಿತ
ಇನ್ನು ಜುಲೈ ತಿಂಗಳಿಂದ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದೆ. ಜೂನ್ನಲ್ಲಿ ಬಳಸುವ ವಿದ್ಯುತ್ಗೆ ಬಿಲ್ ಬರಲಿದ್ದು, ಜುಲೈ ತಿಂಗಳಿನಿಂದ ಬಳಸುವ ವಿದ್ಯುತ್ ನಿಬಂಧನೆಗಳಿಗೆ ಒಳಪಟ್ಟು ಉಚಿತವಾಗಿರಲಿದೆ. ಸರ್ಕಾರ ರೂಪಿಸಿರುವ ನಿಯಮಗಳಿಗೆ ಒಳಪಟ್ಟಂತೆ ವಿದ್ಯುತ್ ಬಳಕೆ ಮಾಡಿದವರು ಶೂನ್ಯ ಬಿಲ್ ಪಡೆಯಲಿದ್ದಾರೆ.
ಒಂದು ವೇಳೆ ಒಂದು ತಿಂಗಳು 200 ಯುನಿಟ್ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಆ ತಿಂಗಳು ಉಚಿತ ವಿದ್ಯುತ್ ಯೋಜನೆ ಅನ್ವಯಿಸುವುದಿಲ್ಲ, ಬಿಲ್ ಕಟ್ಟಬೇಕಿದ್ದು ನಂತರ ಮುಂದಿನ ತಿಂಗಳಿನಿಂದ ಯೋಜನೆ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಬಾಡಿಗೆ ಮನೆಯವರಿಗೂ ಕೂಡ ಉಚಿತ ವಿದ್ಯುತ್ ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
www.sevasindhugs.karnataka.gov.in ವೆಬ್ಸೈಟ್ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ನಾಡಕಚೇರಿ, ಎಸ್ಕಾಂ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಬಹುದು. ನೋಂದಣಿ ಮಾಡಲು ಆಧಾರ್ ನಂಬರ್, ವಿದ್ಯುತ್ ಬಿಲ್ ಖಾತೆ ಸಂಖ್ಯೆ, ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ಯಾವುದೇ ಸಮಸ್ಯೆಗಳು, ದೂರುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ 1912 ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
English summary
In Three days, 8 Lakh Customers Got Registered For Gruha Jyothi Scheme Through The Portal across Karnataka.