Karnataka
oi-Malathesha M

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಸಹಾಯವಾಗಲಿ ಎಂದು ಗೃಹಲಕ್ಷ್ಮಿ & ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಗೃಹ ಜ್ಯೋತಿ ಇದೇ ತಿಂಗಳಿಂದ ಜಾರಿಗೆ ಬಂದಿದೆ. ಆದರೆ ಈ ಸಂದರ್ಭದಲ್ಲೇ ನಿಮ್ಮ ಮುಗ್ಧತೆ ಬಳಸಿಕೊಂಡು ಮೋಸ ಮಾಡುವವರು ಹುಟ್ಟಿಕೊಂಡಿದ್ದಾರೆ. ಅವರ ಬಗ್ಗೆ ನೀವು ಎಚ್ಚರಿಕೆ ವಹಿಸದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಇರುವ ಹಣ ಖಾಲಿಯಾಗೋದು ಖಂಡಿತ.
ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ಕೋಟ್ಯಂತರ ಜನ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಆನ್ಲೈನ್ ಮೂಲಕ ಗೃಹ ಜ್ಯೋತಿ ನೋಂದಣಿಗೆ ಸರ್ಕಾರ ವ್ಯವಸ್ಥೆ ಮಾಡಿತ್ತು. ಆದ್ರೆ ಈ ವ್ಯವಸ್ಥೆಯನ್ನೇ ಬಳಸಿಕೊಂಡು ಕನ್ನಡಿಗರನ್ನ ಯಾಮಾರಿಸಲು ಕೆಲವು ನಕಲಿ ‘ಆ್ಯಪ್’ಗಳು ಪ್ರಯತ್ನಿಸುತ್ತಿವೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಮಾತ್ರ ಅಂತಹ ನಕಲಿ ಆ್ಯಪ್ ಮೂಲಕ ಮೋಸ ಹೋಗುತ್ತಿದ್ದಾರೆ. ಏಕೆಂದರೆ ಗೃಹಲಕ್ಷ್ಮಿ ಅಥವಾ ಗೃಹ ಜ್ಯೋತಿಗೆ ಈವರೆಗೂ ರಾಜ್ಯ ಸರ್ಕಾರ ಯಾವುದೇ ಅಪ್ಲಿಕೇಷನ್ ಬಿಟ್ಟಿಲ್ಲ. ಇವರು ನಿಮ್ಮನ್ನು ಮೋಸ ಮಾಡಲು ಈ ರೀತಿ ನಕಲಿ ‘ಆ್ಯಪ್’ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಹುಷಾರ್.

ಗ್ರಾಹಕರಿಗೆ ಬೆಸ್ಕಾಂ ಎಚ್ಚರಿಕೆ ಸಂದೇಶ!
ಹೌದು ಗೃಹಲಕ್ಷ್ಮಿ (Gruha Lakshmi) ಹಾಗೂ ಗೃಹ ಜ್ಯೋತಿ (Gruha Jyoti) ಯೋಜನೆ ಕುರಿತು ಗ್ರಾಹಕರಿಗೆ ಬೆಸ್ಕಾಂ ಎಚ್ಚರಿಕೆ ಸಂದೇಶ ರವಾನಿಸಿದೆ. ದಿನದಿಂದ ದಿನಕ್ಕೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಗ್ರಾಹಕರಿಗೆ ಬೆಸ್ಕಾಂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ, ‘ಗ್ರಾಹಕರೇ ಎಚ್ಚರ! ಗೃಹ ಜ್ಯೋತಿ ಯೋಜನೆಯ ನೋಂದಣಿಗಾಗಿ, ಸೇವಾ ಸಿಂಧು ಹೆಸರಿನ ನಕಲಿ ಆ್ಯಪ್’ಗಳನ್ನು ಡೌನ್ಲೋಡ್ ಮಾಡದಿರಿ ಹಾಗೂ ನಕಲಿ ಲಿಂಕ್’ಗಳಿಗೆ ಪ್ರತಿಕ್ರಿಯಿಸದಿರಿ.’ ಎಂದು ಸೂಚಿಸಿದೆ. ಹೀಗಾಗಿ ನಿಮ್ಮ ಮೊಬೈಲ್ ಫೋನ್ಗೆ ಕಂಡ ಕಂಡ ‘ಆ್ಯಪ್’ ಡೌನ್ಲೋಡ್ ಮಾಡಬೇಡಿ. ಯಾರಾದ್ರೂ ಕರೆ ಮಾಡಿ ಮೋಸ ಮಾಡುತ್ತಿದ್ದರೆ ಅಧಿಕಾರಿಗಳಿಗೆ ಮಾಹಿತಿ ನೀಡಿ.
ಗೃಹಲಕ್ಷ್ಮಿ ಯೋಜನೆಯಲ್ಲೂ ಎಚ್ಚರ.. ಎಚ್ಚರ!
ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಲಕ್ಷ್ಮಿ ಯೋಜನೆ ‘ಆ್ಯಪ್’ ಬಗ್ಗೆ ಚರ್ಚೆಯಾಗಿ, ಆದಷ್ಟು ಬೇಗ ‘ಆ್ಯಪ್’ ಬಿಡುಗಡೆಗೆ ತಯಾರಿ ನಡೆದಿದೆ. ಆದರೆ ಈ ಸಂದರ್ಭ ಬಳಸಿ ಕೆಲವರು ಯಾಮಾರಿಸುತ್ತಿರುವ ಆರೋಪ ಕೇಳಿಬಂದಿದೆ. ಏಕೆಂದರೆ ಸರ್ಕಾರ ಇಲ್ಲಿಯ ತನಕ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ. ಹೀಗಾಗಿ ಈಗ ಇರುವ ಆ್ಯಪ್ಗಳು ನಕಲಿ. ಹೀಗಾಗಿ ನಕಲಿ ಆ್ಯಪ್ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಕಸ್ಮಾತ್ ಇಂತಹ ಆ್ಯಪ್ ನಂಬಿ ಡೌನ್ಲೋಡ್ ಮಾಡಿದರೆ, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಆಗೋದು ಪಕ್ಕಾ.
Gruha Lakshmi : ಈ ದಿನಾಂಕದಿಂದ ‘ಗೃಹ ಲಕ್ಷ್ಮಿ’ ಅರ್ಜಿ ಸಲ್ಲಿಕೆ ?
ಯಾರಿಗೆಲ್ಲಾ ಗೃಹಲಕ್ಷ್ಮಿ ಅನ್ವಯ ಆಗುತ್ತೆ?
BPL, APL, ಅಂತ್ಯೋದಯ ಕಾರ್ಡ್ನಲ್ಲಿ ಮನೆ ಯಜಮಾನಿಯ ಹೆಸರು ಇರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಯೋಜನೆ ಅನ್ವಯ. ಯಜಮಾನಿ ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕಾಗುತ್ತೆ. ಯಜಮಾನಿ ಅಥವಾ ಪತಿ ಐಟಿ ಪಾವತಿ ಮಾಡುವವರಾಗಿರಬಾರದು. ಹೀಗೆ ಇದ್ದಲ್ಲಿ ಅವರಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ. ಹಾಗೇ ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು ಎಂಬ ನಿಯಮಗಳನ್ನ ರಾಜ್ಯ ಸರ್ಕಾರ ತಿಳಿಸಿದೆ. ಹಾಗೇ ಶೀಘ್ರದಲ್ಲೇ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆ ಇದೆ.
ಫೋನ್ನಲ್ಲಿ ಬ್ಯಾಂಕ್ ಮಾಹಿತಿ ಕೇಳಿದರೆ ಕೊಡಬೇಡಿ!
ಒಟ್ನಲ್ಲಿ ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಕೂಡ ಇರ್ತಾರೆ. ಹೀಗೆ ನಕಲಿ ಇಲ್ಲ ಫೇಕ್ ಅಪ್ಲಿಕೇಷನ್ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಾವಶ್ಯಕ ಕರೆ ಸ್ವೀಕರಿಸದಿರಿ. ನಿಮಗೆ ಬರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೆಸೇಜ್ನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಎಂದು ನಕಲಿ ಲಿಂಕ್ ಹಾಕಿರುವ ಸಾಧ್ಯತೆ ಹೆಚ್ಚು. ಇಂತಹ ಯಾವುದೇ ಸಂದೇಶ ನಂಬಬೇಡಿ. ಸರ್ಕಾರ ಸೂಚಿಸಿದಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸೋದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ಸರ್ಕಾರವೇ ಈ ಕುರಿತು ಅಧಿಕೃತ ಆದೇಶ ನೀಡುವವರೆಗೆ ಕಾಯಿರಿ. ನಕಲಿ ಅಪ್ಲಿಕೇಷನ್ಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ.
English summary
Fake apps problem for Gruha Lakshmi and Gruha Jyoti scheme.
Story first published: Wednesday, July 5, 2023, 22:26 [IST]