Chikkamagaluru
lekhaka-Veeresha H G
![](https://kannada.oneindia.com/images/patient-2.gif)
ಚಿಕ್ಕಮಗಳೂರು, ಜೂನ್ 24: ಕುಡಿದ ಮತ್ತಿನಲ್ಲಿ ಯುವಕರಿಬ್ಬರು ರಸ್ತೆ ಬದಿಯಲ್ಲಿ ಕನ್ನಡಕಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ ಸಾವಿರಾರು ರೂಪಾಯಿ ಬೆಲೆಯ ನೂರಾರು ಕನ್ನಡಕಗಳನ್ನು ಒಡೆದು ಹಾಕಿ ಪಾರಾರಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಕೋಟೆ ಬಡಾವಣೆಯ ಹೆದ್ದಾರಿ ಬದಿಯಲ್ಲಿ ಅನೇಕ ವರ್ಷಗಳಿಂದ ಮಹಿಳೆಯೊಬ್ಬರು ಕೂಲಿಂಗ್ ಗ್ಲಾಸ್, ಟೋಪಿಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಕುಡಿದ ಮತ್ತಿನಲ್ಲಿ ಬೈಕ್ನಲ್ಲಿ ಆಗಮಿಸಿದ ಇಬ್ಬರು ಯುವಕರು ಮಹಿಳೆಯ ಬಳಿ ಬಂದು ಕನ್ನಡಕಗಳನ್ನು ಖರೀದಿ ಮಾಡಿದ್ದಾರೆ.
![Drunk Youths Misbehaving With Roadside Seller In Chikkamagaluru Drunk Youths Misbehaving With Roadside Seller In Chikkamagaluru](https://kannada.oneindia.com/img/2023/06/hassan-1-1687584359.jpg)
ಕನ್ನಡಕ ಖರೀದಿ ಮಾಡಿದ ಬಳಿಕ ಯುವಕರು ಮಹಿಳೆಯೊಂದಿಗೆ ಚೌಕಾಸಿ ಮಾಡಿದ್ದು, ಮಹಿಳೆಯ ಕಡಿಮೆ ಬೆಲೆಗೆ ಕನ್ನಡಕ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ಮಹಿಳೆಗೆ ನಿಂದಿಸಿದ್ದಲ್ಲದೇ ಮಾರಾಟಕ್ಕಿಟ್ಟಿದ್ದ ಎಲ್ಲಾ ಕನ್ನಡಗಳನ್ನು ರಸ್ತೆಗೆ ಎಸೆದು ಪುಡಿಪುಡಿ ಮಾಡಿದ್ದಾರೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕರ ಪುಂಡಾಟ ತಡೆಯಲು ಮುಂದಾದರೂ ಕುಡಿದ ಮತ್ತಿನಲ್ಲಿದ್ದ ಯುವಕರು ಯಾರ ಮಾತು ಕೇಳದೇ ಸಾವಿರಾರು ರೂಪಾಯಿ ಬೆಲೆಯ ಕನ್ನಡಕಗಳನ್ನು ರಸ್ತೆಗೆ ಎಸೆದು ಪುಡಿ ಮಾಡಿದ್ದಾರೆ. ಕೆಲ ಸಾರ್ವಜನಿಕರು ಯುವಕರ ಪುಂಡಾಟವನ್ನು ಪ್ರಶ್ನಿಸುತ್ತಿದ್ದಂತೆ ಯುವಕರು ಬೈಕ್ ಹತ್ತಿ ಪರಾರಿಯಾಗಿದ್ದಾರೆ.
![Drunk Youths Misbehaving With Roadside Seller In Chikkamagaluru Drunk Youths Misbehaving With Roadside Seller In Chikkamagaluru](https://kannada.oneindia.com/img/2023/06/hassan-2-1687584369.jpg)
ಘಟನೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಘಟನೆಯ ವಿಡಿಯೋಗಳು ವೈರಲ್ ಆಗಿವೆ. ಪುಂಡಾಟ ಮಾಡಿ ಬಡ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆಯಿಂದ ಸಾವಿರಾರು ರೂಪಾಯಿ ನಷ್ಟ ಅನುಭವಿಸಿರುವ ಮಹಿಳೆ ಕಣ್ಣೀರು ಹಾಕಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
English summary
Drunk youths misbehaving with roadside seller and destroyed everything in Chikkamagaluru. Know more.