Chikkamagaluru
lekhaka-Veeresha H G

ಚಿಕ್ಕಮಗಳೂರು, ಜೂನ್, 20: ಕಳೆದ ಎರಡು ವಾರಗಳಿಂದ ರಾಜ್ಯದ ಕರಾವಳಿ ಭಾಗದಲ್ಲಷ್ಟೇ ಮುಂಗಾರು ಮಳೆ ಆರ್ಭಟ ಹೆಚ್ಚಾಗಿತ್ತು. ಆದರೆ ಇದೀಗ ಹಲವು ಜಿಲ್ಲೆಗಳಲ್ಲಿ ಮುಂಗಾರು ಶುರುವಾಗಿದೆ. ಅದೇ ರೀತಿ ಮಂಗಳವಾರ (ಜೂನ್ 20) ಬೆಳಗ್ಗೆಯಿಂದಲೂ ಹಾಸನ ಮತ್ತು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಹಾಗಾದಾರೆ ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ ಹಾಗೂ ಯಾವೆಲ್ಲ ಅನಾಹುತಗಳು ಸಂಭವಿಸಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಚಿಕ್ಕಮಗಳೂರು ನಗರ, ಸಖರಾಯಪಟ್ಟಣ, ಉದ್ದೇಬೋರಹಳ್ಳಿಯಲ್ಲಿ ಕಳೆದೊಂದು ಗಂಟೆಯಿಂದಲೂ ಭಾರೀ ಮಳೆ ಸುರಿದಿದ್ದು, ಇಲ್ಲಿನ ರಸ್ತೆಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು ಮುಂದಕ್ಕೂ ಹೋಗದೆ, ಹಿಂದಕ್ಕೂ ಬಾರದೆ ನಡುರಸ್ತೆಯಲ್ಲೇ ಪರದಾಡಿದ ಘಟನೆಗಳು ನಡೆದಿವೆ. ಮತ್ತೊಂದೆಡೆ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಈ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಹಾಗೆಯೇ ಹಾಸನ ಜಿಲ್ಲೆಯ ಹಲವೆಡೆ ಕಳೆದ 2 ಗಂಟೆಯಿಂದ ಭಾರೀ ಮಳೆಯಾಗಿದ್ದು, ಪರಿಣಾಮ ರಸ್ತೆಗಳೆಲ್ಲ ಕೆರೆಯಂತಾಗಿ ವಾಹನಗಳು ನೀರಲ್ಲಿ ಕೊಚ್ಚಿಕೊಂಡುಹೋದ ಘಟನೆಗಳು ನಡೆದಿವೆ. ಅಲ್ಲದೆ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಪರದಾಡಿದ್ದಾರೆ. ಇನ್ನು ಕೆಲವು ಕಡೆ ಚರಂಡಿಗಳು ತುಂಬಿ ಹರಿಯುತ್ತಿದ್ದು, ಇದರಿಂದ ನಗರ ಪ್ರದೇಶದ ಸ್ಲಂಗಳಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಇಂದು ವರುಣನ ತಂಪೆರೆದಿದ್ದಾನೆ ಎನ್ನಲಾಗಿದೆ.
English summary
Monsoon Rain: Heavy rain in Many places of Hassan and Chikkamagaluru districts today, here see complete details
Story first published: Tuesday, June 20, 2023, 16:45 [IST]