Karnataka
oi-Shankrappa Parangi

ಬೆಂಗಳೂರು, ಜೂನ್ 26: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆ ಜಾರಿಯಾಗುವವರಿಗೆ ಉಭಯ ಪಕ್ಷಗಳ ವಾಕ್ಸಮರ, ಆರೋಪಗಳಿಗೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಕೇಂದ್ರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದಿದ್ದ ಕಾಂಗ್ರೆಸ್ ಇದೀಗ ಮತ್ತೆ ಗುಡುಗಿದೆ.
ರಾಜ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ವಿತರಣೆ ನಿರಾಕರಣೆ ಮಾಡಿದೆ. ಈ ಸಂಬಂಧ ಸೋಮವಾರವು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಕೇಂದ್ರ ಆಹಾರ ನಿಗಮದ ಕರ್ನಾಟಕದ ಗೋದಾಮುಗಳಲ್ಲಿರುವ ಅಕ್ಕಿ ಕರ್ನಾಟಕದ್ದೇ ಎಂದು ಹೇಳಿದೆ.

ಕೇಂದ್ರ ಸರ್ಕಾರ ಕರ್ನಾಟಕದಲ್ಲೇ ಬೆಳೆದ ಅಕ್ಕಿಯನ್ನು ಕನ್ನಡಿಗರಿಗೆ ನೀಡಲು ನಿರಾಕರಿಸುತ್ತಿರುವುದೇಕೆ?. ಕರ್ನಾಟಕದ ಗೋದಾಮುಗಳಲ್ಲಿ ಸುಮಾರು 6.5 ಲಕ್ಷ ಟನ್ ಅಕ್ಕಿ ಇದೆ, ನಾವು ಕೇಳುತ್ತಿರುವುದು 1.66 ಲಕ್ಷ ಟನ್ ಅಕ್ಕಿ ಮಾತ್ರ.
ಕನ್ನಡಿಗರೇ ಬೆಳೆದ, ಕರ್ನಾಟಕದಲ್ಲೇ ಇರುವ ಅಕ್ಕಿಯನ್ನು ಕರ್ನಾಟಕದವರಿಗೆ ಕೊಡುವುದಿಲ್ಲ ಎಂದರೆ ಇದು ಸರ್ವಾಧಿಕಾರದ ಪರಮಾವಧಿಯಲ್ಲವೇ? ಎಂದು ಕೇಂದ್ರ ಸರ್ಕಾರ ನಡೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಹೇಳುವುದೇನು?
ಕರ್ನಾಟಕ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಅನ್ನಭಾಗ್ಯ ಯೋಜನೆ ಅರ್ಹ ಪಡಿತರಿಗೆ ತಲಾ 10 ಕೇಜಿ ಅಕ್ಕಿ ಉಚಿತವಾಗಿ ವಿತರಿಸುವುದಾಗಿ ಹೇಳಿತ್ತು. ಇದಾದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಾನು ಕೇಂದ್ರದ ಬಳಿಕ ಈ ಹಿಂದೆಯೇ ಅಕ್ಕಿ ವಿತರಣೆಗೆ ಕೇಳಿದ್ದೇವು. ಆಗ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ಮಾತು ತಪ್ಪಿದೆ.

ನೀಡಿದ ಭರವಸೆಯಂತೆ ಅಕ್ಕಿ ಕೊಡದೇ ಅದರಲ್ಲೂ ರಾಜಕೀಯ ಮಾಡುತ್ತಿದೆ. ದ್ವೇಷದ ರಾಜಕಾರಣ ಮಾಡುವ ಮೂಲಕ ಬಡವರ ವಿರೋಧಿ ನೀತಿ ತಾಳಿದೆ ಎಂದೆಲ್ಲ ಕಾಂಗ್ರೆಸ್ ಕಿಡಿ ಕಾರಿತ್ತು. ಇತ್ತ ಬಿಜೆಪಿ ನಾಯಕರು, ಹೇಳಿದಂತೆ ಜುಲೈ 1ಕ್ಕೆ ಅನ್ನಭಾಗ್ಯ ದಡಿ ಹತ್ತು ಕೇಜಿ ಅಕ್ಕಿ ಕೊಡಬೇಕು.ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಹೀಗೆ ಉಭಯ ಪಕ್ಷಗಳ ನಾಯಕರು ಅಕ್ಕಿ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತಾಗಿದ್ದಾರೆ. ಈ ಮಧ್ಯೆ ಕೇಂದ್ರೀಯ ಸ್ವಾಮ್ಯದ ಮೂರು ಸಂಸ್ಥೆಗಳು ಅಕ್ಕಿ ವಿತರಿಸಲು ತಾತ್ವಿಕ ಒಪ್ಪಿಗೆ ನೀಡಿವೆ. ಆದರೆ ಈ ಸಂಸ್ಥೆಗಳ ಪ್ರತಿ ಕೇಜಿ ಅಕ್ಕಿ ಬೆಲೆ ದುಬಾರಿ ಎನ್ನಲಾಗಿದೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರಗಳು ಹೊರ ಬೀಳಲಿವೆ.
ಯಾರು ಏನೇ ರಾಜಕಾರಣ ಮಾಡಿದರೂ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದೇ ತೀರುತ್ತೇವೆ. ಹೀಗೆ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ಜನರ ಪರ ಕಾಳಜಿ ಇದ್ದರೆ ರಾಜ್ಯ ಬಿಜೆಪಿ ನಾಯಕರು ಅಕ್ಕಿ ವಿತರಿಸುವಂತೆ ಕೇಂದ್ರ ಮೇಲೆ ಒತ್ತಡ ಹಾಕಲಿ ಎಂದು ಆಗ್ರಹಿಸಿದ್ದಾರೆ.
English summary
Karnataka congress slams on Union Govt about Anna bhagya Rice distribution.
Story first published: Monday, June 26, 2023, 20:46 [IST]