India
oi-Punith BU

ಹೈದರಾಬಾದ್, ಜೂನ್ 21: ಹೈದರಾಬಾದ್ನ ಎಲ್.ಬಿ. ನಗರ ಸಾಗರ್ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬೈರಮಲಗುಡ ಫ್ಲೈಓವರ್ ಕಾಮಗಾರಿಯಲ್ಲಿ ಅವ್ಯವಸ್ಥೆ ಉಂಟಾಗಿದ್ದರಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದು 10 ಜನರು ಗಾಯಗೊಂಡ ಘಟನೆ ನಡೆದಿದೆ.
ಈ ಫ್ಲೈಓವರ್ ಅನ್ನು ಎಲ್ ಬಿ ನಗರ ಸಾಗರ್ ರಿಂಗ್ ರಸ್ತೆಯಿಂದ ಎಲ್ ಬಿ ನಗರ ಚೌರಸ್ತಾದವರೆಗೆ ನಿರ್ಮಿಸಲಾಗುತ್ತಿತ್ತು. ಬೈರಾಮಲ್ ಗುಡಾ ಕಡೆಯಿಂದ ಮೇಲ್ಸೇತುವೆಗೆ ವಾಹನಗಳು ಹತ್ತುವ ರ್ಯಾಂಪ್ ಬಳಿ ಪಿಲ್ಲರ್ನಿಂದ ಪಿಲ್ಲರ್ ನಡುವೆ ನಿರ್ಮಿಸಲಾಗುತ್ತಿದ್ದ ಸ್ಲ್ಯಾಬ್ ಕುಸಿದಿದೆ.

ಈ ಘಟನೆಯಲ್ಲಿ ಸ್ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಹತ್ತು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯರಾತ್ರಿ ಈ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಾದ ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಗಾಯಾಳುಗಳನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಂಜಿನಿಯರ್ಗಳ ತಂಡ ಸ್ಥಳಕ್ಕೆ ಆಗಮಿಸಲಿದೆ. ಮೇಲ್ಸೇತುವೆ ಕುಸಿತದ ಹಿಂದಿನ ಕಾರಣಗಳ ಬಗ್ಗೆ ಎಂಜಿನಿಯರ್ಗಳ ತಂಡ ತನಿಖೆ ನಡೆಸಲಿದೆ.
ತಮಿಳುನಾಡು: ಬಸ್ಗಳ ನಡುವೆ ಭೀಕರ ಅಪಘಾತ, 4 ಸಾವು, 70 ಮಂದಿಗೆ ಗಾಯ
ಇಂಜಿನಿಯರ್ಗಳ ತಂಡ ಇಂದು ಘಟನಾ ಸ್ಥಳಕ್ಕೆ ತಲುಪುವ ಸಾಧ್ಯತೆ ಇದೆ. ಕಳಪೆ ಗುಣಮಟ್ಟದ ನಿರ್ಮಾಣ ಕಾರಣವೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ಎಂಜಿನಿಯರಿಂಗ್ ತಜ್ಞರ ತಂಡ ನಿರ್ಧರಿಸುತ್ತದೆ. ಈ ಘಟನೆಯಿಂದ ಮಧ್ಯರಾತ್ರಿ ಸ್ಥಳೀಯರು ದಿಢೀರ್ ಬೆಚ್ಚಿಬಿದ್ದರು. ಘಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರು ಎನ್ನಲಾಗಿದೆ. ಮಿಕ್ಸರ್ ತಯಾರಿಕಾ ಲಾರಿ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಜಿಎಚ್ಎಂಸಿ ಆಯುಕ್ತ ಲೋಕೇಶ್ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ಸೇತುವೆ ಕುಸಿತಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ವಿವರಗಳನ್ನು ಬಹಿರಂಗಪಡಿಸಲಾಗುವುದು. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಎಲ್ ಬಿ ನಗರ ಶಾಸಕ ದೇವಿರೆಡ್ಡಿ ಸುಧೀರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ಸೇತುವೆ ಕುಸಿತದ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಶಿಕ್ಷೆ ವಿಧಿಸಲಾಗುವುದು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುವ ಕುರಿತು ಮಾತನಾಡುತ್ತಿದ್ದೇನೆ. ಸಂತ್ರಸ್ತರಿಗೆ ಸರ್ಕಾರದಿಂದ ನೆರವು ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು. ಈ ಹಿಂದೆ ನಗರದ ಪಂಜಗುಟ್ಟದ ಮೇಲ್ಸೇತುವೆಯಲ್ಲಿ ಅಪಘಾತ ಸಂಭವಿಸಿತ್ತು. ಆ ಘಟನೆಯ ನಂತರ ಇದು ಎರಡನೇ ಘಟನೆ ಎನ್ನಲಾಗಿದೆ.
English summary
Hyderabad L.B. The Bairamalaguda flyover, which was under construction on the Nagar Sagar Ring Road, suddenly collapsed due to chaos in the work, injuring 10 people.
Story first published: Wednesday, June 21, 2023, 10:18 [IST]