Karnataka
oi-Naveen Kumar N

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿಗಿಂತ ಹೆಚ್ಚು ಸಮಯವಾದರೂ, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಬಿಜೆಪಿಯ ಈ ನಡೆ ಬಗ್ಗೆ ಆಡಳಿತ ಪಕ್ಷ ಕೂಡ ವ್ಯಂಗ್ಯವಾಡಿದೆ. ಆದರೂ, ಯಾವಾಗ ವಿರೋಧ ಪಕ್ಷದ ನಾಯಕನ ಆಯ್ಕೆ ಎಂದು ತಿಳಿದಿರಲಿಲ್ಲ.
ಮಾಜಿ ಸಿಎಂ ಸದಾನಂದಗೌಡ ಈಗ ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಜುಲೈ 3ರೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, “ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲಾಕುವ, ಸಮರ್ಪಕವಾಗಿ ಪ್ರಶ್ನೆ ಮಾಡುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಹೈ ಕಮಾಂಡ್ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ” ಎಂದು ಹೇಳಿದ್ದಾರೆ.

ಈಗಾಗಲೇ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹಲವು ಹೆಸರುಗಳು ರೇಸ್ನಲ್ಲಿವೆ. ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿದ್ದು ಯಾರು ಆಯ್ಕೆಯಾಗುತ್ತಾರೆ ಎನ್ನುವ ಕುತೂಹಲ ಇದೆ.
ರಾಜ್ಯ ಸರ್ಕಾರದ ವಿರುದ್ಧ ಸದಾನಂದ ಗೌಡ ಆಕ್ರೋಶ
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಅಕ್ಕಿ ಪೂರೈಕೆ ತಿಕ್ಕಾಟ ಜೋರಾಗಿದೆ. ಹೇಳಿದಂತೆ ನಾವು ಅಕ್ಕಿ ಕೊಡೋಕೆ ಸಿದ್ದ ಆದರೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ ಎಂದು ಸರ್ಕಾರ ಹೇಳಿದೆ, ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಕೊಟ್ಟ ಮಾತಿನಂತೆ ಜುಲೈ ತಿಂಗಳಿಂದ 10 ಕೆ.ಜಿ ಅಕ್ಕಿ ಕೊಡಿ ಇಲ್ಲ ಪ್ರತಿಭಟನೆ ಮಾಡ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಸೋತಿದ್ದಕ್ಕೆ ಬೇಜಾರಿಲ್ಲ, ಕಾಂಗ್ರೆಸ್ ಗೆದ್ದಿದ್ದೆ ಹೆಚ್ಚು ಬೇಸರ: ಸದಾನಂದಗೌಡ
ಮಾಜಿ ಸಿಎಂ ಸದಾನಂದ ಗೌಡ ಕೂಡ ಇದಕ್ಕೆ ದನಿಗೂಡಿಸಿದ್ದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 13 ಬಾರಿ ಬಜೆಟ್ ಮಂಡಿಸಿದ ಮಾತ್ರಕ್ಕೆ ಭತ್ತ ಬೆಳೆದು ಅಕ್ಕಿ ಕೊಡಲು ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಆದವರಿಗೆ ಮುಂದಾಲೋಚನೆ ಇರಬೇಕಾಗುತ್ತದೆ, ದೇಶದಲ್ಲಿ ಮಳೆ ಅಭಾವ ಎದುರಾಗಿದೆ, ಆಹಾರ ಕೊರತೆ ಇದ್ದು, ಆಹಾರ ಭದ್ರತೆಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬರುವ ಮುನ್ನವೇ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿತ್ತು. ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವರು ಆರೋಪ ಮಾಡ್ತಾರೆ, ಇಂತಹವರು ಇರುವ ಸರ್ಕಾರ ಬಂದಿದೆ ಎಂದು ಬೇಜಾರಾಗುತ್ತದೆ. ಕರ್ನಾಟಕ ರಾಜ್ಯಕ್ಕೆ ಎಂತಹ ದುರ್ದೈವ ಬಂದಿದೆ ಎಂದು ಬೇಸರವಾಗುತ್ತಿದೆ ಎಂದು ಹೇಳಿದರು.
English summary
Former CM Sadananda Gowda has announced that the selection of the leader of the opposition for the legislative assembly council will take place before July 3rd. The BJP High Command will choose a suitable leader who can effectively question the government.
Story first published: Thursday, June 22, 2023, 14:35 [IST]