Karnataka
oi-Malathesha M

ನವದೆಹಲಿ: ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆ ಫೈಟ್ ಜೋರಾಗಿದೆ. ಕಾಂಗ್ರೆಸ್ & ಬಿಜೆಪಿ ನಡುವೆ ಹೀಗಾಗಿಯೇ ದಂಗಲ್ ನಡೆಯುತ್ತಿದೆ. ಆದರೆ ದಿಢೀರ್ ಕಾಂಗ್ರೆಸ್ ಕಾರ್ಯಕರ್ತರು ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಪ್ರತಿಭಟನೆ ಆರಂಭಿಸಿದ್ದು, ಸರ್ಕಾರದ ನಿರ್ಧಾರ ಖಂಡಿಸಿ ಬೀದಿಗೆ ಇಳಿದು ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಶುರು ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಉಚಿತ ವಿದ್ಯುತ್ ಕೊಡುವ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ ದಿಢೀರ್ ವಿದ್ಯುತ್ ಬೆಲೆ ಹೆಚ್ಚಾಗಿತ್ತು. ಈ ಕುರಿತು ರಾಜ್ಯದ ಜನ ಕೂಡ ಆಕ್ರೋಶ ಹೊರಹಾಕಿದ್ದು, ವಿದ್ಯುತ್ ಬೆಲೆ ಇಳಿಸಿ ಎನ್ನುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮಾತ್ರ ಈ ವಿಚಾರದಲ್ಲಿ ನಮ್ಮ ತಪ್ಪಿಲ್ಲ, ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ ಎನ್ನುತ್ತಿದೆ. ಹಾಗೇ ಬಿಜೆಪಿ ಮಾತ್ರ ತಪ್ಪು ನಮ್ಮದಲ್ಲ ನಾವು ಬೆಲೆ ಏರಿಕೆ ಮಾಡಿಲ್ಲವೆಂದು ಸಮಜಾಯಿಷಿ ನೀಡುತ್ತಿದೆ. ಇದೇ ಹೊತ್ತಲ್ಲಿ ಆಕ್ರೋಶ ಕೂಡ ಸ್ಫೋಟವಾಗುತ್ತಿದೆ.

ವಿದ್ಯುತ್ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ!
ಹೌದು, ದಿಢೀರ್ ವಿದ್ಯುತ್ ಬೆಲೆ ಏರಿಕೆ ಮಾಡಿದ್ದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಶುರು ಮಾಡಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಘೋಷಣೆ ಕೂಡ ಕೂಗುತ್ತಿದ್ದಾರೆ. ವಿದ್ಯುತ್ ಬೆಲೆ ಇಳಿಕೆ ಮಾಡಿ ಅಂತಾ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ದೇಶಾದ್ಯಂತ ಇದೇ ವಿಚಾರ ಈಗ ಸದ್ದನ್ನೂ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಕೂಡ ವೈರಲ್ ಆಗುತ್ತಿದೆ. ಆದರೆ ಈ ಪ್ರತಿಭಟನೆ ನಡೆದಿರುವುದು ಎಲ್ಲಿ? ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.
ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!
ಅಷ್ಟಕ್ಕೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ದರ ಏರಿಕೆ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಬೀದಿ ಬೀದಿಗಳಲ್ಲೂ ಈ ಬಗ್ಗೆ ಹೋರಾಟ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ವಿದ್ಯುತ್ ವಿತರಣಾ ಕಂಪನಿ ವಿಧಿಸುವ ವಿದ್ಯುತ್ ಖರೀದಿ ಹೊಂದಾಣಿಕೆ ಹೆಚ್ಚಳದಿಂದಾಗಿ 200ಕ್ಕಿಂತ ಹೆಚ್ಚು ಮತ್ತು 600 ಯೂನಿಟ್ಗಳ ವಿದ್ಯುತ್ ಬಳಸುವ ದೆಹಲಿಯ ಬಹುಪಾಲು ಗ್ರಾಹಕರು ಈಗ ಮಾಸಿಕ ವಿದ್ಯುತ್ ದರ ಭಾರಿ ಏರಿಕೆಯನ್ನು ಎದುರಿಸಬೇಕಿದೆ ಎಂಬ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
200 ಯೂನಿಟ್ವರೆಗೆ ಉಚಿತ ವಿದ್ಯುತ್
ಅಂದಹಾಗೆ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ಈಡೇರಿಸುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ಕಾರ್ಯಕರ್ತರು ಎಎಪಿ ಕಚೇರಿ ಎದುರಲ್ಲಿ ಉಗ್ರ ಪ್ರತಿಭಟನೆ ನಡೆಸಿದರು. ಅಲ್ಲದೆ ವಿದ್ಯುತ್ ದರ ಏರಿಕೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಸಬ್ಸಿಡಿ ಪಡೆಯದ ಗ್ರಾಹಕರು ತಮ್ಮ ಮಾಸಿಕ ವಿದ್ಯುತ್ ದರದಲ್ಲಿ ಶೇಕಡ 8ರಷ್ಟು ಹೆಚ್ಚು ಪಾವತಿಸಬೇಕಾದ ಸ್ಥಿತಿ ಬಂಧಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.
ಹೀಗೆ ಕರ್ನಾಟಕ ಮಾತ್ರವಲ್ಲ ದೆಹಲಿಯಲ್ಲೂ ಇದೀಗ ವಿದ್ಯುತ್ ಫೈಟಿಂಗ್ ಶುರುವಾಗಿದೆ. ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕಾಮ್) ಪಿಪಿಎಸಿ ಶುಲ್ಕ ಹೆಚ್ಚಳಕ್ಕೆ ದೆಹಲಿಯ ವಿದ್ಯುತ್ ನಿಯಂತ್ರಣ ಆಯೋಗ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಹೊಸ ಕಿಚ್ಚನ್ನು ಹೊತ್ತಿಸುತ್ತಿದೆ. ಅಲ್ಲದೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಸುದೀರ್ಘ ಹೋರಾಟಕ್ಕೆ ವಿಪಕ್ಷಗಳು ಸಿದ್ಧವಾಗುತ್ತಿವೆ. ಆದರೆ ಕೇಜ್ರಿವಾಲ್ ಪಕ್ಷ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
English summary
Electricity price hike protest by Congress party workers.
Story first published: Tuesday, June 27, 2023, 20:57 [IST]