Bengaluru
oi-Shankrappa Parangi

ಬೆಂಗಳೂರು, ಜೂನ್ 20: ಯೋಗಶಿಕ್ಷಣ ದಲ್ಲಿ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಸಾಧನೆ ಮಾಡಿದ ಹಾಗೂ ರಾಜ್ಯದಲ್ಲಿ ಯೋಗಾಭ್ಯಾಸ ದ ಬಗ್ಗೆ ತಿಳುವಳಿಕೆ ಮತ್ತು ಅರಿವು ಮೂಡಿಸುವಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಕೊಡುಗೆ ಅಪಾರ ಎಂದು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಕಳೆದ 12 ವರ್ಷಗಳಿಂದ ವಿಶ್ವಾದ್ಯಂತ ಯೋಗ ಪ್ರಚಾರ ಮಾಡುತ್ತಿರುವ ಖ್ಯಾತ ಶ್ವಾಸಗುರು ವಚನಾನಂದ ಸ್ವಾಮೀಜಿ ನೇತೃತ್ವದ “ಶ್ವಾಸ ಯೋಗ ಸಂಸ್ಥೆಯಿಂದ ಯೋಗ ವಲಯದಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಯೋಗ ರತ್ನ-2023’ ಪ್ರಶಸ್ತಿ ಪ್ರದಾನ ಮಾಡಿ ರವಿಶಂಕರ್ ಗುರೂಜಿ ಅವರು ಮಾತನಾಡಿದರು.

ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸದಾ ಒತ್ತಡದ ಜಂಜಾಟದಲ್ಲಿರುವ ರಾಜಕಾರಣಿಗಳಿಗೆ ನಿರಂತರವಾಗಿ ಯೋಗಾಭ್ಯಾಸ ಮತ್ತು ಯೋಗ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಸಭಾಪತಿ ಗಳೊಂದಿಗೆ ಚರ್ಚಿಸಲಾಗುವುದು. ನಾಳೆ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಚಿವರು ಯೋಗ ಶಿಕ್ಷಣ ಕುರಿತು ನಿರ್ಧಾರ ತಿಳಿಸಿದರು.
ರಾಜಕಾರಣಿಗಳಿಗೆ ನಿರಂತರ ಯೋಗ ತರಬೇತಿ:ರಾವ್
ಯೋಗ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ವಿಶೇಷವಾಗಿ ರಾಜಕಾರಣಿಗಳಿಗೆ ಇದರ ಅಗತ್ಯತೆ ಹೆಚ್ಚಿದೆ. ಶಾಸಕರಿಗೆ ಯೋಗ ಶಿಕ್ಷಣ ನೀಡುವ ಸಂಬಂಧ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ.
ದೈನಂದಿನ ಜೀವನ ಶೈಲಿಗೆ ಯೋಗ ಪೂರಕವಾಗಿದ್ದು, ಯೋಗದಿಂದ ವ್ಯಾಪಕ ಪ್ರಯೋಜನಗಳಿವೆ. ಯೋಗ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಲಾಗಿದೆ. ಇದಕ್ಕೆ ಜನರ ಸಹಕಾರ ಅಗತ್ಯವಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಭಾರತೀಯ ಯೋಗಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಭವ್ಯ ಪರಂಪರೆಯೂ ಇದೆ. ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ನ್ಯೂಯಾರ್ಕ್ ನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 180ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಯೋಗಾಸನ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಯೋಗ ಪ್ರೇಮಿಗಳು ಸಂಭ್ರಮದಲ್ಲಿ ತೊಡಗಿದ್ದಾರೆ ಎಂದು ಅವರು ತಿಳಿಸಿದರು.
ಶ್ವಾಸಗುರು ಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ ಪುಸ್ತಕ ವನ್ನು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಲೋಕಾರ್ಪಣೆ ಗೋಳಿಸಿದರು.
‘ಯೋಗ ರತ್ನ 2023’ ಪ್ರಶಸ್ತಿ ಪ್ರದಾನ
ಖ್ಯಾತ ಶ್ವಾಸಗುರು ವಚನಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ಬೊಮ್ಮಾಯಿ ಮತ್ತಿತರ ಗಣ್ಯರು ಹೃಷಿಕೇಶದ ಸ್ವಾಮಿ ರಾಮಸಾಧಕ ಗ್ರಾಮ ಆಶ್ರಮದ ಅಹಿಂಸಿನ್ ಸಂಸ್ಥೆ, ಇಂಡೋನೇಷಿಯಾದ ಗಾಂಧಿ ಆಶ್ರಮ, ಬಾಲಿಯ ಅಗಸ್ ಇಂದ್ರ ಉದಯನ್, ಚೀನಾದ ಬೀಜಿಂಗ್ನ ಯೋಗಿಯೋಗ ಸಂಸ್ಥೆಯ ಮನಮೋಹನ ಸಿಂಗ್ ಭಂಡಾರಿ, ಅರ್ಜೆಂಟೀನಾದ ಶ್ವಾಸಯೋಗಿ ವಿಕ್ಟರ್ ಟ್ರುವಿಯಾನೋ ಹಾಗೂ ಗುಳೇದಗುಡ್ಡದ ಶ್ರೀ ಕೃಷ್ಣ ಯೋಗಾಶ್ರಮದ ಗುರೂಜಿ ಬಸವರಾಜ ಹಡಗಲಿ ಅವರಿಗೆ ‘ಯೋಗ ರತ್ನ ಪ್ರಶಸ್ತಿ 2023’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದರಾಜ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಂಕರ ಪಾಟೀಲ್ ಮುನೇನಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.
English summary
World Yoga Day on June 21st: Yoga Ratna-2023 award, Vachanananda Swamiji of Harihar Panchamasali Peet Achieved In Yoga At Childhood, says Ravishankar Guruji.
Story first published: Tuesday, June 20, 2023, 21:37 [IST]